ಬೆಳಂಬೆಳಿಗ್ಗೆ ಅಟ್ಟಹಾಸ ಮೆರೆದ ಜವರಾಯ: ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು.

ಯಾದಗಿರಿ,ಜೂನ್,6,2023(www.justkannada.in):  ಇಂದು ಬೆಳಗಿನ ಜಾವ ಜವರಾಯ ತನ್ನ ಅಟ್ಟಹಾಸವನ್ನೇ ಮೆರೆದಿದ್ದು,  ಆಂಧ್ರ ಪ್ರದೇಶದ ನಂದ್ಯಾಲ್ ಜಿಲ್ಲೆಯ ವೆಲುಗೋಡು ಗ್ರಾಮದಿಂದ ಕಲ್ಬುರ್ಗಿಯ ಖಾಜೆ‌ ಬಂದೇ ನವಾಜ್ ದರ್ಗಾದ ಉರುಸಿಗೆ ಕ್ರೂಸರ್ ವಾಹನದಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ  ಕ್ರೂಸರ್ ಡಿಕ್ಕಿಯಾಗಿ ತಂದೆ ಮಗ ಸೇರಿ ಒಟ್ಟು ಐದು ಜನ‌ ಸಂಬಂಧಿಕರು ಸ್ಥಳದಲ್ಲೇ  ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಬಳಿ ಚಕ್ರ‌ ಕ್ರಾಸ್‌ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕ್ರೂಸರ್ ವಾಹನದಲ್ಲಿ ಒಟ್ಟು 18 ಜನರು ಪ್ರಯಾಣಿಸುತ್ತಿದ್ದರು. ಅಪಘಾತವಾದ ಸ್ಥಳದಲ್ಲಿಯೇ ಕ್ರೂಸರ್ ಮುಂದಿನ ಸೀಟುಗಳಲ್ಲಿ ಕುಳಿತುಕೊಂಡಿದ್ದ ತಂದೆ, ಮಗ ಹಾಗೂ ಸೇರಿ ಐವರು ಸಂಬಂಧಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶದ ನಂದ್ಯಾಲ್‌ ಜಿಲ್ಲೆಯ ವೆಲುಗೋಡು ಗ್ರಾಮದ ಮುನೀರ್(40), ನಯಾಮತ್ (40), ಮುದ್ದತ್ ಶಿರ್ ( 12), ರಮಿಜಾ ಬೇಗಂ (50), ಸುಮ್ಮಿ (12) ಮೃತಪಟ್ಟವರು. ಅಪಘಾತದ ರಭಸಕ್ಕೆ‌ ಮೃತ ದೇಹಗಳು ಅಪ್ಪಚ್ಚಿಯಾಗಿ ಕ್ರೂಸರ್ ನಲ್ಲಿಯೇ ಸಿಲುಕಿ ಹಾಕಿಕೊಂಡಿದ್ದ ದೇಹಗಳನ್ನು ಹೊರ ತಗೆಯಲು ಪೊಲೀಸರು  ಹಾಗೂ‌ ಸಾರ್ವಜನಿಕರು ಹರಸಾಹಸ ಪಡುವಂತಾಯಿತು.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಯಾದಗಿರಿ ಜಿಲ್ಲೆಯ ಸೈದಾಪುರ ಠಾಣೆ ಪೊಲೀಸರು ದೌಡಾಯಿಸಿ 13 ಜನ ಗಾಯಾಳುಗಳನ್ನು ಯಾದಗಿರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರೀಮ್ಸ್ ಗೆ ಗಾಯಾಳುಗಳೆಲ್ಲರನ್ನು ರವಾನಿಸಿ‌ ಚಿಕಿತ್ಸೆ ನೀಡಲಾಗುತ್ತಿದೆ. 13 ಜನರಲ್ಲಿ ಐವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

Key words: yadgir-cruiser- collided – lorry- Five died- on the spot