ದನಿಯಿಲ್ಲದವರಿಗೆ, ಶಕ್ತಿ ಯಿಲ್ಲವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ: ವಕೀಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಮೈಸೂರು, ಆಗಸ್ಟ್ 29, 2023 (www.justkannada.in): ದನಿಯಿಲ್ಲದವರಿಗೆ, ಶಕ್ತಿ ಯಿಲ್ಲವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕೆಂದು   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರಿಗೆ  ಕರೆ ನೀಡಿದರು.

ಮೈಸೂರು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾನೂನನ್ನು ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದ ಎರಡು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ. ಮೈಸೂರು ಭಾಗದ ಬಹುತೇಕ ವಕೀಲರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ ಎಂದರು. ನಾನು ಗೆಲ್ಲಬೇಕೆಂದು ಶುಭ ಹಾರೈಸಿ, ದೇವರಲ್ಲಿ ಪ್ರಾರ್ಥನೆ ಮಾಡಿದವರು ಹಾಗೂ ನೇರವಾಗಿ ನನ್ನ ಪರವಾಗಿ ಕೆಲಸ ಮಾಡಿದವರು ಇದ್ದಾರೆ. ಈ ಬಾರಿ  ಗೆಲ್ಲಲು ಮೈಸೂರು ಭಾಗದ ವಕೀಲರ ಕೊಡುಗೆ ಇದೆ ಎಂದರು.

ಅವಕಾಶ ವಂಚಿತ ಜನರಿಗೆ ಅವಕಾಶ ದೊರೆತಾಗ ಸ್ವಾತಂತ್ರ್ಯ ಸಾರ್ಥಕ

ಅವಕಾಶ ವಂಚಿತ ಜನರಿಗೆ ಅವಕಾಶ ದೊರೆತಾಗ ಮಾತ್ರ, ಸಾಮಾಜಿಕ, ಆರ್ಥಿಕ ಸಬಲತೆ ಬಂದಾಗ ಮಾತ್ರ ಸ್ವಾತಂತ್ರ್ಯ ದೊರೆತದ್ದಕ್ಕೆ ಸಾರ್ಥಕವಾಗುತ್ತದೆ. ಈ ದಿಕ್ಕಿನಲ್ಲಿ ಸ್ವಲ್ಪವಾದರೂ ಪ್ರಯತ್ನ ಮಾಡೋಣ ಎಂದು ನಾನು ರಾಜಕೀಯಕ್ಕೆ ಬಂದದ್ದು . ಮುಖ್ಯಮಂತ್ರಿಯಾಗುವ ಅವಕಾಶ ದೊರೆತಾಗ ಸಾಮಾಜಿಕ ನ್ಯಾಯ ದೊರಕುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಐದು ಗ್ಯಾರಂಟಿಗಳನ್ನು ಮೂರು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ.   ಕವಿ ದಿವಂಗತ ಸಿದ್ದಲಿಂಗಯ್ಯ ನವರು ಕವನಗಳ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ. ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ ಎಂದು ಪ್ರಶ್ನಿಸಿದ್ದಾರೆ.  ಸ್ವಾತಂತ್ರ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬಂದಾಗ ಮಾತ್ರ ನಿಜವಾಗಿಯೂ ಸ್ವಾತಂತ್ರ್ಯ ದೊರೆತಂತಾಗುತ್ತದೆ. ಅದಾನಿ ಅಂಬಾನಿಗಳಿಗೆ ಬಂದಿರುವ ಸ್ವಾತಂತ್ರ್ಯ ಕಾಳ, ಬೋರ, ತಿಮ್ಮನಿಗೂ ಬಂದರೆ ದೇಶಕ್ಕೆ ಸ್ವಾ5 ಬಂದಂತೆ.  ಕೊಂಡುಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಬಂದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ದೊರೆತಂತಾಗುವುದು ಎಂದರು.

ಸಾಮಾಜಿಕ ನ್ಯಾಯ ದೊರಕಿಸಲು ಗಟ್ಟಿ ಹೆಜ್ಜೆ

1.28 ಕೋಟಿ ಕುಟುಂಬಗಳ  ಮನೆಯ ಯಜಮಾನಿಯರಿಗೆ  2000 ರೂ.ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಬಡವರಿಗೆ ಬೆಲೆಯೇರಿಕೆಯ ಬಿಸಿಯಿಂದ ಸ್ವಲ್ಪವಾದರೂ ಸಹಾಯ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆ ಮೂಲಕ ಸಾಮಾಜಿಕ ನ್ಯಾಯ ದೊರಕಿಸಲು ಗಟ್ಟಿಯಾದ ಹೆಜ್ಜೆಗಳನ್ನು ಇಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ರಾಜಕೀಯಕ್ಕೆ ಬಂದು ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ನ್ಯಾಯ ದೊರಕದ ಜನರ ಧ್ವನಿಯಾಗಿ ,  ಕೆಲಸ  ಮಾಡುವ ಪ್ರಯತ್ನ ಮಾಡಿದ್ದೇನೆ ಎಂದರು.

ಹೆಚ್.ಗಂಗಾಧರನ್  ಚಿತ್ರವನ್ನು ಅನಾವರಣ

ಹೆಚ್.ಗಂಗಾಧರನ್ ಅವರ ಚಿತ್ರವನ್ನು ಅನಾವರಣ ಮಾಡಿದ್ದು,ಅವರು ರಾಜಕಾರಣದಲ್ಲಿದ್ದು  ಹಾಗೂ ಸ್ವಲ್ಪ ಕಾಲ ವಕೀಲರಾಗಿಯೂ ಕೆಲಸ ಮಾಡಿದ್ದರು. ಒಳ್ಳೆಯ ವ್ಯಕ್ತಿಯಾಗಿದ್ದ ಅವರು ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಶಾಸಕರಾಗಿದ್ದ ಸಂದರ್ಭದಲ್ಲಿ ಒಟ್ಟಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಿದ  ಮುಖ್ಯಮಂತ್ರಿಗಳು ಅವರ ಚಿತ್ರವನ್ನು ಅನಾವರಣ ಮಾಡಿರುವುದು ಉತ್ತಮ ಕೆಲಸ ಎಂದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು ಎಂದರು.