ಪತ್ನಿ ಕೊಲೆಗೆ ಪತಿಯಿಂದಲೇ ಸುಪಾರಿ: ಮೂವರು ಅಂದರ್

ಮೈಸೂರು,ಡಿಸೆಂಬರ್,18,2025 (www.justkannada.in): ಪತ್ನಿಯನ್ನು ಕೊಲ್ಲಲು ಪತಿಯೇ  ಸುಪಾರಿ ಕೊಟ್ಟ ಘಟನೆ ಮೈಸೂರಿನಲ್ಲಿ ನಡೆದಿದ್ದು ಈ ಸಂಬಂಧ ಇದೀಗ ಪತಿ ಸೇರಿ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಬಿಎಂಶ್ರೀ ನಗರದಲ್ಲಿ ಈ ಘಟನೆ ನಡೆದಿದೆ. ಪತಿ ಮಹೇಶ್, ಭಾಸ್ಕರ್ , ಅಭಿಷೇಕ್ ಬಂಧಿತರು. ಪತ್ನಿ ನಾಗರತ್ನ  ವರ್ತನೆಯಿಂದ ಬೇಸತ್ತಿದ್ದ ಪತಿ ಮಹೇಶ್ ಪತ್ನಿಯನ್ನ ಕೊಲ್ಲಲು ವಿರಾಜಪೇಟೆ ಮೂಲದ ಭಾಸ್ಕರ್ , ಅಭಿಷೇಕ್ ಎಂಬುವರಿಗೆ ಸುಪಾರಿ ನೀಡಿದ್ದರು . ಮಹೇಶ್ ಪಾನಿಪುರಿ ವ್ಯಾಪಾರ ಮಾಡುತ್ತಿದ್ದು,  ಆದರೆ ಪತ್ನಿ ನಾಗರತ್ನ ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಟ್ಟು ಗಂಡನಿಗೆ ಹಣ ನೀಡುತ್ತಿರಲಿಲ್ಲ. ಜೊತೆಗೆ ಗಂಡನಿಗೆ ಕಿಂಚಿತ್ತು ಮರ್ಯಾದೆ ಕೊಡದ ಹಿನ್ನಲೆಯಲ್ಲಿ ಪತಿ ಮಹೇಶ್  ಪತ್ನಿ ನಾಗರತ್ನ ಕೊಲೆಗೆ ಪ್ಲಾನ್ ರೂಪಿಸಿದ್ದ.

ಗೊತ್ತಿರುವ ಹುಡುಗರಿಗೆ ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಕೊಲೆ ಮಾಡಿ ಎಂದು ಮಹೇಶ್ ಪ್ಲಾನ್ ರೂಪಿಸಿದ್ದು, ಈ ಹಿನ್ನಲೆ ರಾತ್ರಿ ಇಬ್ಬರು ಮನೆಗೆ ನುಗ್ಗಿ ನಾಗರತ್ನ  ಮೇಲೆ ಹಲ್ಲೆ ನಡೆಸಿದ್ದು,  ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ಕೆಲವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಘಟನೆಯಲ್ಲಿ ಗಾಯಗೊಂಡ ನಾಗರತ್ನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತನಿಖೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲ್ಲುವಂತೆ ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Key words: Wife, murder, husband, supari, Mysore