ರಾಜ್ಯದ ಪರಂಪರೆ ಪಾಲಿಸಿದ್ದೇವೆ: ರಾಜಕೀಯಕ್ಕೆ ಅಧಿಕಾರಿಗಳನ್ನು ಬಳಸಿಲ್ಲ: ಸಿಎಂ ಸ್ಪಷ್ಟನೆ

ಜೆಡಿಎಸ್ ಹಾಗೂ ಬಿಜೆಪಿಯವರು ಹತಾಶರಾಗಿದ್ದಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜುಲೈ 19, 2023 (www.justkannada.in): ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಜನರು ಖುಷಿಯಾಗಿರುವ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿಯವರು ನವರು ಹತಾಶರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.

ವಿರೋಧ ಪಕ್ಷದವರು ಹತಾಶರಾಗಿ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಕ್ಷುಲ್ಲಕ ವಿಚಾರಕ್ಕಾಗಿ ಜನರ ವಿಚಾರವನ್ನು ಬಲಿಕೊಟ್ಟು ಬಾವಿಗಿಳಿದು ಧರಣಿ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ, ಬಜೆಟ್ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಿ ಎಂದು ಮೂರು ವಾರಗಳ ಅಧಿವೇಶನ ಕರೆಯಲಾಗಿದೆ. ಬೇರೆ ರಾಜ್ಯಗಳ ಹಾಲಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ಕೇಂದ್ರದ ಸಚಿವರು, ಸಂಸದರು ರಾಜ್ಯಕ್ಕೆ ಬಂದಿದ್ದಾರೆ. ಹಿಂದೆ ಕುಮಾರಸ್ವಾಮಿಯವರು 21-5-2018 ರಂದು ಬೇರೆ ಪಕ್ಷದ ನಾಯಕರನ್ನು ಆಹ್ವಾನಿಸಿದ್ದರು. ಅವರಿಗೆಲ್ಲಾ ಐಎಎಸ್ ಅಧಿಕಾರಿಗಳನ್ನೇ ಸಮನ್ವಯಾಧಿಕಾರಿಯಾಗಿ ಮಾಡಿದ್ದರು. ಡ್ಯಾನಿಶ್ ಅಲಿ ಎಂಬುವರು ಸಂಸದರೂ ಅಲ್ಲ, ಶಾಸಕರೂ ಅಲ್ಲ ಅಥವಾ ಜಿಲ್ಲಾ ಪಂಚಾಯತ್ ಸದಸ್ಯರೂ ಅಲ್ಲ. ಅವರಿಗೆ ವೈ.ಎಸ್.ಪಾಟೀಲ್ ಎಂಬ ಒಬ್ಬ ಐಎಎಸ್‍ ಅಧಿಕಾರಿಯನ್ನು ಸಮನ್ವಯಾಧಿಕಾರಿಯಾಗಿ (ಲಯಸನ್ ಅಧಿಕಾರಿ) ಮಾಡಿದ್ದರು. ಅವರು ಈಗ ನಾನೇನು ಮಾಡಿಲ್ಲ ಎಂದು ಅಧಿವೇಶನದಲ್ಲಿ ಹೇಳಿಕೆ ಕೊಡುತ್ತಾರೆ ಎಂದರು.

*ಅತಿಥಿ ಸತ್ಕಾರ ರಾಜ್ಯದ ಪರಂಪರೆ*
ಹಿಂದೆ ಅನಂತಕುಮಾರ್ ಅವರು ಕೇಂದ್ರ ಸಚಿವರಾಗಿದ್ದಾಗ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜರುಗಿತು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲು ನನ್ನ ಬಳಿ ಮನವಿ ಮಾಡಿದ್ದರು. ಅದರಂತೆ ನಾವು ಅವರನ್ನು ರಾಜ್ಯದ ಅತಿಥಿಗಳೆಂದು ಪರಿಗಣಿಸಿದ್ದೆವು. ಈ ರಾಜ್ಯದ ಪರಂಪರೆ ಇದು. ಬೇರೆ ರಾಜ್ಯದವರನ್ನು ರಾಜ್ಯದ ಅತಿಥಿಗಳೆಂದು ಪರಿಗಣಿಸುವುದು ನಮ್ಮ ವಿವೇಚನೆನೆ ಬಿಟ್ಟದ್ದು. ನಾವು ಅವರನ್ನು ಗೌರವಿಸಿದ್ದೆವು. ಅತಿಥಿಗಳನ್ನು ಸ್ವಾಗತಿಸಿ ಬೀಳ್ಕೊಡಲು ಮಾತ್ರ ನಾವು ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದೆವು. ರಾಜಕೀಯವಾಗಿ ಬಳಕೆ ಮಾಡಿಲ್ಲ. ಜನರ ಸಮಸ್ಯೆಗಳ ಚರ್ಚೆ ಹಾಗೂ ಬಜೆಟ್ ಮೇಲೆ ಚರ್ಚೆ ಮಾಡಲೆಂದು ಅಧಿವೇಶನವನ್ನು ಕರೆದಿರುವುದು ಎಂದರು.

ಅನಾಗರಿಕ ಸಂಸ್ಕ್ರತಿ
ಸಭಾಧ್ಯಕ್ಷರು ಸದಸ್ಯರನ್ನು ಅಮಾನತು ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸಭಾಧ್ಯಕ್ಷರ ಮುಖಕ್ಕೆ ಕಾಗದ ಹರಿದು ಎಸೆಯಬಹುದೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಸಭಾಧ್ಯಕ್ಷರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಕೈಗೊಂಬೆ ಹೇಗಾಗುತ್ತಾರೆ? ಇವರು ಹೇಳಿದಂತೆ ಕೇಳದಿದ್ದರೆ ಸರ್ಕಾರದ ಕೈಗೊಂಬೆ ಇಲ್ಲದಿದ್ದರೆ ಇಲ್ಲವೇ? ಎಂದ ಮುಖ್ಯಮಂತ್ರಿಗಳು ‘ನಾನು ವಿಧಾನಸಭೆಯಲ್ಲಿ ಕಳೆದ 40 ವರ್ಷಗಳಿಂದ ಇದ್ದೇನೆ, ಸಭಾಧ್ಯಕ್ಷರ ಬಗ್ಗೆ ಅವಮಾನಕಾರಿಯಾಗಿ, ಅವಹೇಳಕಾರಿಯಾಗಿ ಮಾತನಾಡಿಲ್ಲ. ಕಾಗದವನ್ನು ಹರಿದು ಉಪಸಭಾಧ್ಯಕ್ಷರ ಮುಖಕ್ಕೆ ಎಸೆಯುವುದು ಗೂಂಡಾಗಳ ರೀತಿಯಲ್ಲಿ ವರ್ತನೆ ಮಾಡುವುದು ಅನಾಗರಿಕ ಸಂಸ್ಕøತಿಯಲ್ಲವೇ? ಪ್ರಜಾಪ್ರಭುತ್ವದಲ್ಲಿ, ಸಂಸದೀಯ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆಯೇ? ಜನರ ಸಮಸ್ಯೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳು ಬರಬೇಕು. ಅದನ್ನು ಬಿಟ್ಟು ಗೂಂಡಾಗಳ ರೀತಿ ವರ್ತಿಸುವುದು ತಪ್ಪು. ಪ್ರತಿಭಟನೆ ಮಾಡಿದರೆ ತಕರಾರಿಲ್ಲ. ಗಾಜು ಒಡೆಯುವುದು ಮುಂತಾದ ಕೆಲಸಗಳನ್ನು ಮಾಡಬಾರದು’ ಎಂದರು.