ಬೆಂಗಳೂರು, ಮೇ.೩೦,೨೦೨೫: ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಕೊಠಡಿ ನಿರ್ಮಾಣಕ್ಕೆ ಆಗ್ರಹಿಸಿದ್ದ ಶಾಲಾ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆ ಶಿಸ್ತು ಕ್ರಮದ ನೆಪವೊಡ್ಡಿ ಅಮಾನತುಗೊಳಿಸಿದೆ. ರಾಜ್ಯ ಸರಕಾರದ ಈ ಧೋರಣೆ ವಿರುದ್ಧ ತೀವ್ರ ಅಸಮಧಾನಗೊಂಡಿರುವ ಶಿಕ್ಷಕರು ಸುದೀಘ್ರ ಪತ್ರ ಬರೆದು ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಚಿಕ್ಕೋಡಿ ಜಿಲ್ಲೆಯ ರಾಯಭಾಗ ತಾಲೊಕಿನ ನಿಡಗುಂಡಿ ಗ್ರಾಮದ ಅಂಬೇಡ್ಕರ ನಗರದ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರೇ ಈ ಪತ್ರ ಬರೆದಿರುವುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆ ಪತ್ರದ ಒಟ್ಟಾರೆ ಸಾರಾಂಶ ಹೀಗಿದೆ….
ಗೆ,
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ರಾಯಬಾಗ.
ಮಾನ್ಯರೇ,
ವಿಷಯ: ತಾವು ನೀಡಿರುವ ಕಾರಣ ಕೇಳಿ ನೋಟೀಸ್ ಗೆ ನನ್ನ ಹೇಳಿಕೆಯನ್ನು ನೀಡುತ್ತಿರುವ ಕುರಿತು
ಉಲ್ಲೇಖ: ದಿನಾಂಕ:೨೭.೦೫.೨೦೨೫ ರಂದು ತಾವು ನನಗೆ ನೀಡಿರುವ ಕಾರಣ ಕೇಳಿ ನೋಟೀಸ್
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ ನಾನು ಕಳೆದ ಒಂಭತ್ತು ವರುಷಗಳಿಂದ ನಿಡಗುಂದಿಯ ಅಂಬೇಡ್ಕರ ನಗರ ಶಾಲೆಯ ಅಭಿವೃದ್ಧಿಗಾಗಿ ಅಲ್ಲಿನ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ತನುಮನಧನದಿಂದ ಸಮಯದ ರಜೆಯ ಹಂಗಿಲ್ಲದೆ ನಿರಂತರ ಶ್ರಮಿಸುತ್ತಿದ್ದೇನೆ. ದಾನಿಗಳ ಶಿಕ್ಷಣ ಪ್ರೇಮಿಗಳ ಮತ್ತು ಕರ್ನಾಟಕ ಘನಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯದೊಂದಿಗೆ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಬಂದಿದ್ದೇವೆ. ಇದಕ್ಕೆ ಸಾಕ್ಷಿ ಎಂಬAತೆ ೨೦೨೪-೨೫ ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆ ಪ್ರಶಸ್ತಿ ಮತ್ತು ಒಂದು ಲಕ್ಷ ನಗದು ಬಹುಮಾನವೂ ಬಂದಿರುವುದು ತಮ್ಮ ಗಮನಕ್ಕಿದೆ. ಇವು ಇಲಾಖೆಗೆ ಮತ್ತು ಸರಕಾರಕ್ಕೆ ಘನತೆ ತರುವ ಕೆಲಸಗಳೆಂದು ತಮಗೆ ತಿಳಿಸಿ ಹೇಳಬೇಕಾಗಿಲ್ಲ.
ಈ ನಾಡಿನ ಪ್ರಸಿದ್ಧ ಚಿಂತಕರಾದ ಟಿ.ಪಿ.ಅಶೋಕ ರವರು ನಮ್ಮ ಶಾಲೆಯನ್ನು “ಈ ಶಾಲೆ ಈ ದೇಶದ ಅತ್ಯುತ್ತಮ ಸರಕಾರಿ ಸಂಸ್ಥೆಗಳಲ್ಲಿ ಒಂದು ಮತ್ತು ಈ ಶಾಲೆಗೆ ಬಂದಾಗ ರಾಷ್ಟçಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದಲ್ಲಿ ಕಾಲಿಟ್ಟ ಅನುಭವವಾಯಿತು” ಎಂದು ಹೊಗಳಿರುವುದು ನಮ್ಮ ಸರಕಾರಿ ಶಾಲೆಯನ್ನೇ. ಇದು ಇಲಾಖೆಗೆ ತಮಗೆ ಮುಜುಗರವುಂಟು ಮಾಡುವಂಥದೇ, ಇದರ ಹಿಂದೆ ಶ್ರಮಿಸಿದ ನನ್ನ ವರ್ತನೆಗಳು ‘ಅನಾಗರಿಕ’ವೇ?
ನಮ್ಮ ಶಾಲೆಯ ಕೆಲಸಗಳನ್ನು ಮೆಚ್ಚಿ ಈ ದೇಶದ ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಒಂದು ತಂಡವನ್ನು ನಮ್ಮ ಶಾಲೆಯರೆಗೂ ಕಳುಹಿಸಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಒಂದು ಸಾಕ್ಷö್ಯಚಿತ್ರ ನಿರ್ಮಿಸಿದೆ. ಇದರಿಂದ ಇಲಾಖೆಗೆ ಸರಕಾರಕ್ಕೆ ಘನತೆ ಮರ್ಯಾದೆ ಹೆಚ್ಚಿತೋ ಅಥವಾ ಕುಂದಿತೋ? ತಾವೇ ಕಾಳಜಿ ಮತ್ತು ಕರುಣೆಯ ಕಣ್ಣಿನಿಂದ ಯೋಚಿಸಿ.
ಹಲವಾರು ವರ್ಷಗಳ ಕಾಲ ಕಾದು, ನಮ್ಮ ಶಾಲೆಯಲ್ಲಿ ತರಗತಿ ಮತ್ತು ಮಕ್ಕಳ ಸಂಖ್ಯೆಗನುಗುಣವಾಗಿ ತರಗತಿ ಕೊಠಡಿಗಳಿಲ್ಲವೆಂದು ಮನಗಂಡು ಹಲವಾರು ತಾಲ್ಲೂಕು ಹಂತದ ಜಿಲ್ಲಾ ಹಂತದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಏನೂ ಸ್ಪಂದನೆ ಸಿಗದೇ ಇದ್ದಾಗ ಅನಿವಾರ್ಯವಾಗಿ ನಾನು ನಮ್ಮ ಶಾಲೆಯಿಂದ ಬಿಇಒ ಕಛೇರಿವರೆಗೆ ಡಾ.ಬಾಬಾಸಾಹೇಬ ಅಂಬೇಡ್ಕರರವರ ಫೋಟೋ ಹಿಡಿದುಕೊಂಡು ಒಂದು ಭಿತ್ತಿಪತ್ರವನ್ನು ಹಿಡಿದುಕೊಂಡು ಗಾಂಧಿ ಟೋಪಿ ಧರಿಸಿ ಸುಮಾರು ಹದಿನೈದು ಕಿ.ಮೀ ಮೌನ ಕಾಲ್ನಡಿಗೆ ಜಾಥಾದೊಂದಿಗೆ ಬಿಇಒ ಕಛೇರಿವರೆಗೂ ಬಂದು ಬಿಇಒ ಕಛೇರಿಯ ಬಾಗಿಲಲ್ಲಿ ಕೂತು ಉಪವಾಸ ಸತ್ಯಾಗ್ರಹ ಮಾಡಿರುತ್ತೇನೆ. ನಮ್ಮ ಶಾಲಾ ಮಕ್ಕಳು “ನಮ್ಮನ್ನ ಎಲ್ಲಿ ಕೂರಿಸಿ ಪಾಠ ಮಾಡ್ತೀರಿ ಸರ್? ನಾವು ಮಳ್ಯಾಗ ಬಿಸಿಲಾಗ ಛಳಿಯಾಗ ಹೊರಗ ಕುಂದರಬೇಕೇನ್ರಿ?” ಎಂದೆಲ್ಲ ಪ್ರಶ್ನಿಸಿದಾಗ ನನ್ನ ಕರುಳು ಹಿಂಡಿದಂತಾಗಿ ನೊಂದು ಅಸಹಾಯಕನಾಗಿ ನಾನು ಈ ನಿರ್ಧಾರ ಕೈಗೊಂಡಿರುತ್ತೇನೆ.
ಹೀಗೆ ಉಪವಾಸ ಕುಳಿತ ನನ್ನನ್ನ ತಾವು ಶತ್ರುವಿನ ರೀತಿ ನಡೆಸಿಕೊಂಡಿರಿ. ಏಕವಚನದಲ್ಲಿ ಸಂಬೋಧಿಸಿ ನನ್ನ ಮೇಲೆ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದಿರಿ. ನನ್ನನ್ನ ನಿಮ್ಮ ಅಧಿಕಾರ ಬಲದ ಮುಂದೆ ಯರ್ಕಶ್ಚಿತ್ ಎನ್ನುವ ರೀತಿಯಲ್ಲಿ ನಡೆಸಿಕೊಂಡಿರಿ. ತಾವು ನನ್ನನ್ನ ಏಕವಚನದಲ್ಲಿ ಸಂಬೋಧಿಸುವಾಗ ನನ್ನ ಎಂ.ಎ ಇಂಗ್ಲಿಷ್ ಪದವಿ ಮತ್ತು ಕೆಸೆಟ್ ಪ್ರಮಾಣಪತ್ರ ಮತ್ತು ಎಂ.ಎ ಕನ್ನಡ ಪದವಿ ಮತ್ತು ಕೆಸೆಟ್ ಪ್ರಮಾಣ ಪತ್ರಗಳು ನೆನಪಾಗಿ ಆಳದಲ್ಲಿ ನೊಂದೆ. ನಾನು ರಾಷ್ಟ್ರಪತಿಗಳಿಂದ ಪಡೆದ ಚಿನ್ನದ ಪದಕ ನನಗೆ ಒದಗಿರುವ ಪರಿಸ್ಥಿತಿ ನೋಡಿ ಅತ್ತಂಗಾಯಿತು, ನಾನು ಪಡೆದ ಕೇಂದ್ರ ಸರಕಾರ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಡಮಾಡುವ ಕನ್ನಡದ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಘನ ಸರಕಾರ ಕೊಡಮಾಡುವ ನನಗೆ ನೀಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ನಿರರ್ಥಕ ಎನ್ನಿಸಿದವು. ಅದೂ ಹೋಗಲಿ ಈ ನಾಡಿನ ಹತ್ತು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ನಾನು ಬರೆದಿರುವ ಪದ್ಯಗಳು ಪಠ್ಯವಾಗಿ ಆಯ್ಕೆಯಾಗಿವೆ. ನೀವು ನನ್ನನ್ನ ಅಂವ ಇಂವ ಎಂದು ಸಂಬೋಧಿಸುವಾಗ ಇವಕ್ಕೆಲ್ಲ ಎಲ್ಲಿ ಅರ್ಥ ಬಂತು ಸರ್? ಯಾವುದು ‘ಅನಾಗರೀಕತೆ’ ಎಂಬುದನ್ನ ತಾವೇ ದಯಮಾಡಿ ಪರಿಶೀಲಿಸಲು ವಿನಂತಿಸುತ್ತೇನೆ. ನಾನು ಹುದ್ದೆಯಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿರಬಹುದು ಆದರೆ ಪ್ರವೃತ್ತಿ ಮತ್ತು ವಿದ್ಯಾರ್ಹತೆಯಿಂದ ನಾನು ಕಡಿಮೆಯಲ್ಲ ಎಂದು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಕೇವಲ ನನ್ನ ಶಾಲೆ ಮಾತ್ರವಲ್ಲ ಇಡೀ ತಾಲ್ಲೂಕಿನ ಸಾವಿರಾರು ಮಕ್ಕಳಿಗೆ ಪ್ರವಾಹ ಸಂದರ್ಭದಲ್ಲಿ ಎಜುಕೇಶನ್ ಕಿಟ್ ಗಳನ್ನು ದಾನಿಗಳ ಸಹಾಯದಿಂದ ನೀಡಲು ನೆರವಾಗಿದ್ದೇನೆ. ದಿಗ್ಗೇವಾಡಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಮ್ಮ ಗೆಳೆಯರ ಸಹಾಯದಿಂದ ಒಂದು ಜೊತೆ ಸಮವಸ್ತ್ರ ನೀಡಲು ನೆರವಾಗಿದ್ದೇನೆ. ಪ್ರವಾಹ ಸಂದರ್ಭದಲ್ಲಿ ನೆರೆಯಿಂದ ಸಂತ್ರಸ್ತರಾಗಿದ್ದ ಅನೇಕ ಹಳ್ಳಿಗಳಿಗೆ ಲಕ್ಷಲಕ್ಷ ರೂಪಾಯಿಯ ಔಷಧ, ಬಟ್ಟೆ, ಹಾಸಿಗೆ ಮತ್ತು ಪಾತ್ರೆ ಪರಿಕರಗಳನ್ನ ದಾನಿಗಳ ಸಹಾಯದಿಂದ ನೀಡಿದ್ದು ತಮ್ಮ ಪ್ರಕಾರ ‘ಅನಾಗರಿಕ’ ವರ್ತನೆಯೇ ದಯಮಾಡಿ ನನ್ನ ವರ್ತನೆಗಳ ಕುರಿತು ನಿಮ್ಮ ಪೂರ್ವಾಗ್ರಹಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಕೋರುವೆ.
ತಮ್ಮ ನೋಟೀಸಿನಲ್ಲಿ ಹೇಳಿರುವಂತೆ ತಮಗೆ ನನ್ನ ಭಿತ್ತಿಪತ್ರ ಮಾತ್ರ ಕಾಣಿಸಿತು, ಆದರೆ ನಾನು ಕೈಯಲ್ಲಿ ಹಿಡಿದಿದ್ದ ನಮ್ಮ ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಫೋಟೋ ಯಾಕೆ ಕಾಣಿಸಲಿಲ್ಲ? ಅಥವಾ ಬಾಬಾಸಾಹೇಬರ ಫೋಟೋ ಹಿಡಿದು ನಡೆದು ಬಂದಿದ್ದರಿಂದ ಮತ್ತು ಅವರ ಫೋಟೊ ಇಟ್ಟುಕೊಂಡು, ರಾಷ್ಟçಪಿತ ಮಹಾತ್ಮಾಗಾಂಧೀಜಿ ಟೋಪಿ ಹಾಕಿಕೊಂಡು ಉಪವಾಸ ಕೂತಿದ್ದರಿಂದಲೇ ತಮಗೆ ನನ್ನ ಮೇಲೆ ಅಸಹನೆಯೇ?
ಸರಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತ ಸಮುದಾಯಗಳು ವಾಸಿಸುವಂಥ, ದೀನರು ದುರ್ಬಲರು ವಾಸಿಸುವಂಥ, ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಜನಸಮುದಾಯ ವಾಸಿಸುವಂಥ ಮತ್ತು ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರ ಮಕ್ಕಳು ಓದುವಂಥ ಒಂದು ಶಾಲೆಯನ್ನು ಅಭಿವೃದ್ಧಿಪಡಿಸಿ ಇಂದು ಮಕ್ಕಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು ನನ್ನ ಅನಾಗರಿಕ ವರ್ತನೆ ಹೇಗಾಗುತ್ತದೆ? ದಯಮಾಡಿ ತಿಳಿಸಿ. ನಾನು ಓದಿಕೊಂಡಿರುವ ಬಾಬಾಸಾಹೇಬರು, ಕಾರ್ಲ್ಮಾರ್ಕ್ಸ್, ಗಿಬ್ರಾನ್, ದೇವನೂರು ಮಹಾದೇವ, ಲಂಕೇಶ್, ಅನಂತಮೂರ್ತಿ, ಡಿ ಆರ್ ನಾಗರಾಜರು ಎಲ್ಲೂ ಇದು ಅನಾಗರಿಕ ವರ್ತನೆ ಎಂದು ಹೇಳಿಲ್ಲ. ತಾವು ಎಲ್ಲಿಯಾದರೂ ಈ ಕುರಿತು ರೆಫರೆನ್ಸ್ ಇದ್ದರೆ ನನ್ನ ಅಪತಿಳುವಳಿಕೆಯನ್ನು ಸರಿಪಡಿಸಬೇಕಾಗಿ ಕೋರುತ್ತೇನೆ.
ನಾನೊಬ್ಬ ಸರಕಾರಿ ನೌಕರ. ಸರಕಾರದ ಘನತೆ ತರುವ ಕೆಲಸ ಮಾಡುವುದು ನನ್ನ ಕರ್ತವ್ಯ. ಮತ್ತು ಅದನ್ನು ನಿರಂತರ ಮಾಡುತ್ತ ಬಂದಿದ್ದೇನೆ. ಹಾಗಾಗಿಯೇ ಇಲಾಖೆ ಮತ್ತು ಸರಕಾರವೇ ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ನೀಡಿದೆ ಮತ್ತು ಅಂತರಾಷ್ಟಿçÃಯ ಪ್ರಶಸ್ತಿಗಳೂ ಕೂಡ ನನ್ನ ಶಾಲಾ ಕೆಲಸಕ್ಕಾಗಿ ನೀಡಲ್ಪಟ್ಟಿವೆ. ಮತ್ತು ಇದುವರೆಗೆ ನನಗೆ ಸಿಕ್ಕ ಪ್ರಶಸ್ತಿ ಹಣ ಮತ್ತು ಗೌರವ ಧನವನ್ನು ನಮ್ಮ ಶಾಲಾ ಮಕ್ಕಳಿಗಾಗಿಯೇ ವಿನಿಯೋಗಿಸಿದ್ದೇನೆ.
ಮಕ್ಕಳು ಬಿಸಿಲಲ್ಲಿ, ಮಳೆಯಲ್ಲಿ, ಗಾಳಿಯಲ್ಲಿ ಕೂತು ಕಲಿಯಬೇಕಾದ ಅನಿವಾರ್ಯತೆ ಯಾವ ಮಕ್ಕಳಿಗೂ ಬರಬಾರದು. ಹಲವು ವರುಷಗಳ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಇದ್ದ ಕಾರಣದಿಂದ ಇಲಾಖೆಯ ಗಮನ ಸೆಳೆಯುವುದಕ್ಕಾಗಿ ನನ್ನನ್ನ ನಾನು ಶಿಕ್ಷಿಸಿಕೊಂಡು ಹದಿನೈದು ಕಿ.ಮೀ ಮೌನ ಕಾಲ್ನಡಿಗೆ ಜಾಥಾ ಮಾಡಿ ಬಿಇಒ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತಿದ್ದೇನೆ.
ಒಂದು ಕಡೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರಾಗಿದ್ದಂತ ಅನ್ಬುಕುಮಾರ್ ಸಾಹೇಬರು ನಮ್ಮ ಶಾಲಾ ಕೆಲಸಗಳನ್ನು ಮೆಚ್ಚಿ ಎರಡು ಕೊಠಡಿ ಮಂಜೂರು ಮಾಡಿ ಅಭಿನಂದಿಸಿ ಪತ್ರ ಬರೆಯುತ್ತಾರೆ. ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಸನ್ಮಾನ್ಯ ಉಮಾಮಹಾದೇವನ್ ಮೇಡಂ ರವರು ನಮ್ಮ ಶಾಲಾ ಕೆಲಸಗಳನ್ನು ಮೆಚ್ಚಿ ಅಭಿನಂದನಾ ಪತ್ರ ಕಳುಹಿಸಿ ನಮ್ಮ ಶಾಲೆಗ ಭೇಟಿ ನೀಡುವುದಾಗಿ ತಿಳಿಸುತ್ತಾರೆ, ನಾನು ನಮ್ಮ ಶಾಲಾ ಮಕ್ಕಳ ದಯನೀಯ ಸ್ಥಿತಿಯನ್ನು ಕಂಡು ನನ್ನನ್ನು ನಾನೇ ಹಿಂಸೆಗೊಳಪಡಿಸಿಕೊAಡು ಉಪವಾಸ ಸತ್ಯಾಗ್ರಹ ಕೈಗೊಂಡರೆ ತಾವು ನನ್ನದು ‘ಅನಾಗರಿಕ’ ವರ್ತನೆಯೆಂದು ಕಾರಣ ಕೇಳಿ ನೋಟೀಸ್ ನೀಡುತ್ತೀರಿ. ಯಾವುದನ್ನು ನಂಬುವುದು ಎಂದು ತಿಳಿಯದ ಅತ್ಯಂತ ನೋವಿನ ಸಂದರ್ಭದಲ್ಲಿ ನಾನಿದ್ದೇನೆ.
ಹಲವಾರು ಜನರ ಬಳಿ ಕಾಡಿಬೇಡಿ ಮಾನ್ಯ ರಾಜ್ಯಪಾಲರ ಹೆಸರಿಗೆ ಶಾಲಾ ಮಕ್ಕಳಿಗಾಗಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಸರಕಾರಕ್ಕೆ ಇಲಾಖೆಗೆ ಶಾಲೆಗೆ ಹತ್ತುಗುಂಟೆ ಜಮೀನು ಖರೀದಿಸಿದ್ದು ಇಲಾಖೆಗೆ ಘನತೆ ತರುವಂಥ ಕೆಲಸವೆಂದು ನಾನು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ.
ನನ್ನ ಮನವಿ ಇಷ್ಟೇ. ನಾನು ನಮ್ಮ ಘನ ಸರಕಾರದ ಘನತೆ ಹೆಚ್ಚಿಸುವ ಕೆಲಸ ಮಾಡಿದ್ದೇನೆಯೇ ಹೊರತು, ಇಲಾಖೆಗೆ ಅಥವಾ ಸರಕಾರಕ್ಕೆ ಮುಜುಗರ ತರುವಂಥ ಕೆಲಸ ನಾನು ಮಾಡಿರುವುದಿಲ್ಲ ಎಂದು ಈ ಮೂಲಕ ನನ್ನ ಹೇಳಿಕೆಯನ್ನು ನೀಡುತ್ತಿದ್ದೇನೆ.
ದಯಮಾಡಿ ಪರಿಗಣಿಸಿ ಮತ್ತು ಶೀಘ್ರವೇ ನಮ್ಮ ಶಾಲಾ ಮಕ್ಕಳು ಮಳೆಯಲ್ಲಿ ನೆನೆಯದಂತೆ ಬಿಸಿಲಲ್ಲಿ ಬೇಯದಂತೆ ಶಾಲೆಯಲ್ಲಿ ಕಲಿತು ತಮ್ಮ ಬದುಕು ಕಟ್ಟಿಕೊಳ್ಳಲು ದಯಮಾಡಿ ನೆರವಾಗಿ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ, ನಿಮಗೆ ಅಧಿಕಾರವಿದೆ ನಮ್ಮ ಶಾಲಾ ಮಕ್ಕಳಿಗೆ ನಾಲ್ಕು ಸುಸಜ್ಜಿತ ತರಗತಿ ಕೊಠಡಿಗಳನ್ನು ಕಟ್ಟಿಕೊಡಿ.
ನಾನು ಕನಸುಗಾರ, ಮಹಾತ್ವಾಕಾಂಕ್ಷಿ ಮತ್ತು ವಿದ್ಯಾರ್ಹತೆಯಿಂದಲೂ, ತಿಳುವಳಿಕೆಯಿಂದಲೂ ಅರ್ಹನಿದ್ದೇನೆ. ನಮ್ಮ ಶಾಲೆಯನ್ನು ಒಂದು ಅಂತರಾಷ್ಟಿçÃಯ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯಾಗಿ ನಾನು ರೂಪಿಸಬೇಕಿದೆ. ಈಗ ಬಹುಭಾಷಾ ಪ್ರಯೋಗಾಲಯ ನಿರ್ಮಿಸಿದ್ದೇವೆ. ಲಕ್ಷಾಂತರ ರೂಪಾಯಿಯ ಪಾಠೋಪಕರಣ, ಪೀಠೋಪಕರಣ, ಕಂಪ್ಯೂಟರ್, ಸಿಸಿಟಿವಿ ಯನ್ನು ಶಾಲೆಯಲ್ಲಿ ಅಳವಡಿಸಿದ್ದೇವೆ. ನಾವಿನ್ನೂ ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಸಮಾಜವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸಬೇಕಿದೆ. ಇದಕ್ಕೆಲ್ಲ ಕೊಠಡಿಗಳು ಬೇಕಿದೆ. ಇದು ‘ಅನಾಕರಿಕ’ ನ ಕನಸು ಎನಿಸಿದರೆ ನಾನು ತಮಗೆ ಏನು ಹೇಳಲಿ.
ತಾವು ನನ್ನ ಕೆಲಸಗಳನ್ನ ಕಾಳಜಿಯ ಕರುಣೆಯ ಕಣ್ಣುಗಳಿಂದ ಮಾನವೀಯ ಕಣ್ಣುಗಳಿಂದ ನೋಡಿದರೆ ಬಹುಶಃ ನಾನು ನಿಮಗೆ ‘ಅನಾಗರಿಕ’ನಾಗಿ ಕಾಣಿಸಲಾರೆ.
ಮತ್ತೊಮ್ಮೆ ತಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನಮ್ಮ ಶಾಲಾ ಮಕ್ಕಳಿಗಾಗಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಿಕೊಡಿ. ನಮ್ಮ ಕನಸಿನ ಶಾಲೆ ನಿರ್ಮಿಸಲು ನಮ್ಮ ಜೊತೆ ಕೈಜೋಡಿಸಿ.
ತಮ್ಮ ವಿಶ್ವಾಸಿ,
ವೀರಣ್ಣ ಮಡಿವಾಳರ.
key words: government schoolteacher, Veeranna madivalara, suspended, letter, BEO.
government schoolteacher Veeranna madivalara suspended. he wrote a letter to BEO.