ಪ್ರಪಂಚಕ್ಕೆ ಧರ್ಮದ ಮೌಲ್ಯ, ಬದುಕಿನ ನೈತಿಕತೆ ನೀಡಿದವರು ವಾಲ್ಮೀಕಿ ಮಹರ್ಷಿ -ಸಚಿವ ಹೆಚ್. ಸಿ ಮಹದೇವಪ್ಪ

ಮೈಸೂರು,ಅಕ್ಟೋಬರ್,7,2025 (www.justkannada.in): ಮಹರ್ಷಿ ವಾಲ್ಮೀಕಿ ಅವರು ಬಡತನದಲ್ಲಿ ಹುಟ್ಟಿ ತಮ್ಮ ತಪಸ್ಸಿನ ಮೂಲಕ ಅಸಾಧಾರಣವಾದ ಬುದ್ಧಿ ಶಕ್ತಿಯನ್ನು  ಗೆದ್ದವರು. ತಮ್ಮ ಬುದ್ಧಿ ಶಕ್ತಿಯ ಮೂಲಕ ಜ್ಞಾನವನ್ನು ಕೊಟ್ಟವರು. ಇಡೀ ಪ್ರಪಂಚಕ್ಕೆ ಧರ್ಮದ ಮೌಲ್ಯವನ್ನು, ನೈತಿಕತೆಯನ್ನು ನೀಡಿದವರು ಎಂದು  ಸಮಾಜ ಕಲ್ಯಾಣ ಇಲಾಖೆಯ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ ಮಹದೇವಪ್ಪ ನುಡಿದರು.

ಇಂದು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ  ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.

ವಿಧಾನಸೌಧದಲ್ಲಿ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇಡೀ ಪ್ರಪಂಚವನ್ನು ಒಳಗೊಂಡ ದೊಡ್ಡ ರಾಮಾಯಣವನ್ನು ರಚಿಸಿದವರು ವಾಲ್ಮೀಕಿ ಮಹರ್ಷಿಗಳು. ಜ್ಞಾನ ಶಕ್ತಿಯ ಮೂಲಕ ಮೇಧಾವಿಯಾದವರು. ರಾಮನನ್ನು ರಾಮಾಯಣದ ಮೂಲಕ ಸೃಷ್ಟಿ ಮಾಡಿದವರು ಹಾಗೂ ನೈತಿಕ ವಿಷಯವನ್ನು ರಾಮಾಯಣದಲ್ಲಿ ಧರ್ಮ ಪಾಲನೆ ಮಾಡಿದವರು. ಸಾಮಾಜಿಕ ಆರ್ಥಿಕ, ಸಮಾನತೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬಿತ್ತಿದವರು ಮಹರ್ಷಿಗಳು ಎಂದು ತಿಳಿಸಿದರು.

ಮೂಢ ನಂಬಿಕೆಗಳಿಗೆ ಒಳಗಾಗದೆ , ಜಾತಿ ಜಾತಿ ಎಂದು ಹೊಡೆದಾಡದೇ ಎಲ್ಲರೂ ಸಮಾನವಾಗಿ ಬದುಕಬೇಕು, ಜಾತಿ ರಹಿತವಾದಂತಹ ಸಮಾಜವನ್ನು ಕಟ್ಟಬೇಕು, ಮಹರ್ಷಿ ವಾಲ್ಮೀಕಿಯವರು , ಡಾ. ಬಿ. ಆರ್ ಅಂಬೇಡ್ಕರ್, ಹಾಗೂ ಬುದ್ಧ ಅವರು ಸಹ ನಮಗೆ ಅದನ್ನೇ ಹೇಳಿದ್ದಾರೆ ಅದನ್ನು ನಾವು ನಮ್ಮ ಜೀವನದಲ್ಲಿ ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಬದುಕಬೇಕು. ಅವರು ಹೇಳಿರುವಂತಹ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಮೂಢನಂಬಿಕೆಯಿಂದ ಹೊರಬರಬೇಕು ಎಂದು ಹೇಳಿದರು.

ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ, ಕೆಲವೇ ಜಾತಿ, ಧರ್ಮದ ಆಧಾರಲ್ಲಿ ಮನುಷ್ಯ ಬದುಕಲು ಸಾಧ್ಯವಿಲ್ಲ, ಶಿಕ್ಷಣ ನಮ್ಮ ಮೂಲ ಮುದ್ರೆಯಾಗಬೇಕು ಶಿಕ್ಷಣ  ಪಡೆದು ಸಮಾಜವನ್ನು ಮುನ್ನಡೆಸಬೇಕು. ಇತಿಹಾಸವನ್ನು ತಿಳಿದು ಬದುಕಿದಾಗ ಸಮುದಾಯವು ಮುಂದೆ ಬರುತ್ತದೆ ಇದರ ಜೊತೆ ಸರ್ಕಾರದ ಯೋಜನೆಗಳನ್ನು ಸಮುದಾಯ ಜನರು ಪಡೆದುಕೊಳ್ಳಬೇಕು, ಸಮಾಜದಲ್ಲಿ ಸಮಾನತೆಗಾಗಿ ನಮ್ಮ ಸರಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ ತಮ್ಮ ಏಳ್ಗೆಗಾಗಿ ಯಾವ ಯೋಜನೆಯಿದೆ ಎಂಬುದನ್ನು ಅರಿತು ಪಡೆದುಕೊಂಡರೆ ಮಾತ್ರ ಸಮುದಾಯಗಳ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಟಿ ದೇವೇಗೌಡ ಅವರು ಮಾತನಾಡಿ ತಮ್ಮ ಜ್ಞಾನದ ಮೂಲಕ ಸುಜ್ಞಾನದ ಬೆಳಕನ್ನು ನೀಡಿದ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ. ರಾಮಾಯಣ ಎಂಬ ಮಹಾ ಕಾವ್ಯವನ್ನು ಬರೆಯುವುದರ ಮೂಲಕ ಅಮರರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಜಗದ ರತ್ನ. ಅವರು ತಮ್ಮ ಜ್ಞಾನದ ಮೂಲಕ ಲವ-ಕುಶರ ಜೀವನವನ್ನು ಹೇಗೆ ಪಾರಂಗತ ಮಾಡಿದ್ದಾರೆ ಹಾಗೆಯೇ ನಮ್ಮ ಮಕ್ಕಳಿಗೂ ಶಿಕ್ಷಣವನ್ನು ನಾವು ನೀಡಬೇಕು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ  ಸಮಾಜದಲ್ಲಿ ಒಬ್ಬ ಉತ್ತಮ ನಾಯಕನಾಗಿ ಮಾಡಬೇಕು ಎಂದು ಹೇಳಿದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ  ಸದಾಚಾರದಿಂದ ಬದುಕುವಂತಹ ಮನುಕುಲಕ್ಕೆ ರಾಮಾಯಣ ಎಂಬ ಮಹಾಗ್ರಂಥವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ ಅವರು. ಅವರ ಆದರ್ಶಗಳು ನಮಗೆ ಸ್ಪೂರ್ತಿ, ಅವರು ನಡೆದು ಬಂದ ಹಾದಿಯಲ್ಲಿ ನಾವು ಜೀವನವನ್ನು ನಡೆಸೋಣ ಎಂದು ಹೇಳಿದರು.

ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಿರಿಯ ಕಾನೂನು ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ. ಡಿ ಅವರು ಮಾತನಾಡಿ ಸಮಾಜದಲ್ಲಿ ಶ್ರೀಮಂತವಾದ ಹಿನ್ನೆಲೆಯನ್ನು ಹೊಂದಿರುವಂತಹ ಪರಂಪರೆ ಎಂದರೆ ಮಹರ್ಷಿ  ವಾಲ್ಮೀಕಿ ಅವರ ಪರಂಪರೆ. ದೃಷ್ಟ ಶಕ್ತಿಯನ್ನು ದೈವ ಶಕ್ತಿಯ ಮುಂದೆ ಸೋಲುವಂತಹ ಕೆಲಸ ಮಾಡಿದವರು ಮಹರ್ಷಿ ವಾಲ್ಮೀಕಿ ಅವರು. ಜಯಂತಿಯ ಮೂಲ ಉದ್ದೇಶ ಮಹಾನ್ ವ್ಯಕ್ತಿಗಳ ಜೀವನದ ಬಗ್ಗೆ ತಿಳಿದುಕೊಳ್ಳುವುದಾಗಿದ್ದು, ಜಯಂತಿ ಆಚರಣೆಯ ಉದ್ದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಹಿರಿಯರು ನಡೆದು ಬಂದ ಹಾದಿಯನ್ನು ನಾವು ಪಾಲಿಸಬೇಕು. ಅವರ ಸಾಧನೆಗಳನ್ನು ನಮ್ಮ ಬದುಕಿಗೆ  ಆದರ್ಶವಾಗಬೇಕು ಎಂದು ಹೇಳಿದರು

ಎಸ್.ಎಸ್. ಎಲ್.ಸಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ  ಹಾಗೂ ಹೆಚ್ಚು  ಹೆಸರು ಮಾಡಿದ ಪರಿಶಿಷ್ಟ ವರ್ಗದ ಶಾಲೆಗಳ ಪ್ರಾಧ್ಯಾಪಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಶಾಸಕ ಡಾ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್. ಎನ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್,  ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎಂ. ಕೆ ಮಲ್ಲೇಶ್, ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿ. ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ  ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

Key words: Valmiki Maharishi, value of religion, morality, life, Minister, H. C. Mahadevappa