ಜೂನ್ 21 ರಂದು ಲಸಿಕಾ ಅಭಿಯಾನ: ಪೂರ್ವ ಸಿದ್ಧತಾ ಸಭೆ ನಡೆಸಿದ ಶಾಸಕ ಎಸ್.ಎ ರಾಮದಾಸ್.

ಮೈಸೂರು,ಜೂನ್,15,2021(www.justkannada.in): ನಾಳೆ ಹಾಗೂ ಜೂನ್ 17 ರಂದು ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಪೂರ್ಣ ಕೋವಿಡ್ ಪರೀಕ್ಷೆ ಹಾಗೂ ಜೂನ್ 21 ರಂದು ನಡೆಯಲಿರುವ ಲಸಿಕಾ ಅಭಿಯಾನದ ಕುರಿತು ಶಾಸಕ ಎಸ್ಎ ರಾಮದಾಸ್ ಅವರು ಕ್ಷೇತ್ರದ 19 ವಾರ್ಡ್ ಗಳಲ್ಲೂ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿ ಚರ್ಚಿಸಿದರು. jk

ವಿದ್ಯಾರಣ್ಯಪುರಂ ನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯನ್ನ ಉದ್ದೇಶಿಸಿ ಮಾತನಾಡಿದ  ಶಾಸಕ ಎಸ್.ಎ ರಾಮದಾಸ್, ಇಡೀ ದೇಶದಲ್ಲಿಯೇ ಇಂತಹ ಅಭಿಯಾನ ನಡೆದಿಲ್ಲ. ಕೆ.ಆರ್ ಕ್ಷೇತ್ರದ ವ್ಯಾಪ್ತಿಗೆ ಬರುವ 270 ಬೂತ್ ಗಳಲ್ಲಿ, 100 ಕೇಂದ್ರಗಳಲ್ಲಿ(ಬಿಲ್ಡಿಂಗ್ ಗಳಲ್ಲಿ) ಈ ಅಭಿಯಾನ ನಡೆಯಲಿದೆ. ಕೆ.ಆರ್ ಕ್ಷೇತ್ರವನ್ನ ಕೊರೊನಾ ಮುಕ್ತ ಮಾಡಬೇಕೆಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ ಇದಕ್ಕೆ ನಾವೆಲ್ಲರೂ ಶ್ರಮ ವಹಿಸಬೇಕು ನಮ್ಮ ಮನೆಯ ಬಳಿಯಲ್ಲಿರುವವರನ್ನು ಹಾಗೂ ಬಂಧುಗಳನ್ನು ಕರೆತರುವ ಕೆಲಸವಾಗಬೇಕು.  ಇದಕ್ಕಾಗಿಯೇ ನಾವು ಪೇಜ್ ಪ್ರಮುಖರನ್ನು( ಮತದಾರರ ಪಟ್ಟಿಯಲ್ಲಿ ಇರುವ ಒಂದೊಂದು ಪೇಜ್ ಗಳಿಗೆ ಪ್ರಮುಖರೆಂದು ನೇಮಕಾತಿ ಮಾಡಲಾಗಿರುತ್ತದೆ) ಮಾಡಿದ್ದೇವೆ ಅವರಿಗೆ ಒಂದು ಹಂತದ ಟ್ರೈನಿಂಗ್ ಅನ್ನೂ ಕೂಡ ನೀಡಿದ್ದೇವೆ. ಈಗಾಗಲೇ ಸಾಕಷ್ಟು ಜನ ಪೇಜ್ ಪ್ರಮುಖರು ಅವರ ಪೇಜ್ ನಲ್ಲಿ ಬರುವ ಮನೆಗಳಿಗೆ ಸಂಪರ್ಕ ಮಾಡಿ ವಿಷಯಗಳನ್ನು ತಿಳಿಸಿದ್ದಾರೆ.

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಮೋದಿಯವರ ಆಶಯದಂತೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ದೇಶಾದ್ಯಂತ ನೀಡಲಾಗುವುದು ಎಂದು ತಿಳಿಸಿದ್ದಾರೆ, 16 ಮತ್ತು 17 ನೆ ತಾರೀಖಿನಂದು ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರು ಅಂದೇ ಲಸಿಕೆಗೆ ರಿಜಿಸ್ಟರ್ ಮಾಡಿರುತ್ತಾರೆ.  ನಂತರ ಜೂನ್ 21 ರಂದು ಆಯಾ ಬೂತ್ ಗಳಲ್ಲಿ ರಿಜಿಸ್ಟರ್ ಆದವರಿಗೆ ಲಸಿಕೆ ನೀಡಲಾಗುತ್ತದೆ. ಪ್ರತಿಯೊಬ್ಬರು ತಪಾಸಣೆಗೆ ಬಂದರೆ ಬೇಗ ಕೋವಿಡ್ ಪತ್ತೆಗೆ ಸಹಕಾರಿ ಈ ಮೂಲಕ ನಗರವನ್ನ ಕೋವಿಡ್ ಮುಕ್ತ ಮಾಡಬಹುದು ಹಾಗೂ ನಮ್ಮ ಹೆಜ್ಜೆ ನಿಮ್ಮ ಆರೋಗ್ಯದ ಕಡೆಗೆ ಎಂಬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮಗಳಲ್ಲಿ ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರು , ಪ್ರಧಾನಕಾರ್ಯದರ್ಶಿಗಳು, ನಗರಪಾಲಿಕಾ ಸದಸ್ಯರು, ಬಿ.ಎಲ್.ಓ ಗಳು, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.

Key words: vaccine campaign – June 21-MLA- SA Ramdas-meeting.