Sunday, August 9, 2026

BDA Apartments

Home Front Page ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ತಾತ್ಕಾಲಿಕ ತಡೆ-ಸಚಿವ ಚಲುವರಾಯಸ್ವಾಮಿ

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ತಾತ್ಕಾಲಿಕ ತಡೆ-ಸಚಿವ ಚಲುವರಾಯಸ್ವಾಮಿ

ಮಂಡ್ಯ,ಜುಲೈ, 6,2024 (www.justkannada.in):  ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ತಾತ್ಕಾಲಿಕ ತಡೆ ನೀಡಲಾಗಿದೆ. ಟ್ರಯಲ್ ಬ್ಲಾಸ್ಟ್  ಕುರಿತಂತೆ ಜಿಲ್ಲೆಯ ಆಸಕ್ತಿ, ರೈತರ ಅಭಿಪ್ರಾಯ ಹಾಗೂ ಕೆ. ಆರ್. ಎಸ್ ಡ್ಯಾಮ್ ನ ಅವಶ್ಯಕತೆಯ ದೃಷ್ಟಿಕೋನವನ್ನು ಇಟ್ಟುಕೊಂಡು, ಡ್ಯಾಮ್ ಗೆ ಸಣ್ಣ ತೊಂದರೆ   ಆಗದಂತೆ ಎಚ್ಚರ ವಹಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಇಂದು ಕೆ.ಆರ್.ಎಸ್ ಅಣೆಕಟ್ಟಿನ ಹತ್ತಿರ ಟ್ರಯಲ್ ಬ್ಲಾಸ್ಟ್  ನಡೆಸುವ ಸಂಬಂಧ ರೈತ ನಾಯಕರೊಂದಿಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಕೆ. ಆರ್. ಎಸ್ ಡ್ಯಾಮ್ ಗೆ ಸಣ್ಣ ಡ್ಯಾಮೇಜ್ ಆಗಲಿಕ್ಕೂ ಅವಕಾಶ ಕೊಡುವುದಿಲ್ಲ. ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ನಂತರ ಮಾತನಾಡಿದ ಅವರು . ಅಣೆಕಟ್ಡು ನಿರ್ಮಾಣ ಕಷ್ಟಕರ ಎಂಬುದು ತಿಳಿದಿರುವ ವಿಷಯ‌, ಅಣೆಕಟ್ಟು ಸಂರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿರುವ ಕೆ ಆರ್ ಎಸ್ ಅಣೆಕಟ್ಟಿನ ಹತ್ತಿರ ಟ್ರಯಲ್ ಬ್ಲಾಸ್ಟ್ ನಡೆಸಬೇಕಿದ್ದು,, ಟ್ರಯಲ್ ಬ್ಲಾಸ್ಟ್ ಮಾಡುವುದೋ ಅಥವಾ ಬೇಡವೋ ಎಂಬ ಚರ್ಚೆಗಳು ಸಾಕಷ್ಟು ನಡೆಯುತ್ತಿದೆ. ಕಳೆದ ವಾರದಿಂದ ರೈತರು ಪ್ರತಿಭಟನೆ ಮಾಡುವ ಮೂಲಕ ಟ್ರಯಲ್ ಬ್ಲಾಸ್ಟ್ ನಿಂದ ಅಣೆಕಟ್ಟಿಗೆ ತೊಂದರೆಯಾಗುವುದು ಎಂದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರವು ಟ್ರಯಲ್ ಬ್ಲಾಸ್ಟ್ ಗೆ ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ ಎಂದರು.

ಟ್ರಯಲ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಕಾನೂನು ಇಲಾಖೆ ಜೊತೆ ಗಂಭೀರ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. ನ್ಯಾಯಾಲಯದ ವಿಚಾರಣೆಯು ಜುಲೈ 15 ರಂದು ನಡೆಯಲಿದೆ. ಅಲ್ಲಿಯವರೆಗೂ ಬರುವ ರೈತರ ಅಭಿಪ್ರಾಯಗಳನ್ನು ಪಡೆದು, ತಾಂತ್ರಿಕವಾಗಿ, ಅಧಿಕೃತವಾಗಿ ಮುಖ್ಯಮಂತ್ರಿಗಳು ಹಾಗೂ ಅಡ್ವೋಕೇಟ್ ಜನರಲ್ ಜೊತೆ ಮಾತನಾಡಿ ಈ ಬಗ್ಗೆ ಸ್ಪಷ್ಟ ನಿಲುವನ್ನು ಕೋರ್ಟ್ ಮುಂದೆ ತಿಳಿಸಲಾಗುವುದು.

ಟ್ರಯಲ್ ಬ್ಲಸ್ಟ್ ನಡೆಸಲು ರೈತರ ವಿರೋಧವಿದೆ. ಇಂದು ಸಭೆಯಲ್ಲಿ ರೈತ ಮುಖಂಡರು  ಅಭಿಪ್ರಾಯ ನೀಡಿದ್ದಾರೆ‌. ಇದರೊಂದಿಗೆ ಅಡ್ವಕೇಟ್ ಜನರಲ್ ಅಭಿಪ್ರಾಯ, ಡ್ಯಾಮ್ ಸೆಫ್ಟಿ ಕಮಿಟಿ, ಉನ್ನತ ಅಧಿಕಾರಿಗಳ ಅಭಿಪ್ರಾಯವನ್ನು ಪಡೆದು ಜುಲೈ 15 ರಂದು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದರು.

ಮುಖ್ಯಮಂತ್ರಿಗಳೊಂದಿಗೆ ಸಭೆ ರೈತರ ಅಭಿಪ್ರಾಯ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಸಭೆ ಆಯೋಜಿಸಲಾಗುವುದು. ಸಭೆ ನಡೆಯುವ ದಿನದಂದು ಆಯ್ದ ಐದು ರೈತ ಮುಖಂಡರು ಬೆಂಗಳೂರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ಟ್ರಯಲ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಜು.15 ರಂದು ಕೋರ್ಟ್‌ಗೆ ಸಮಗ್ರ ಮಾಹಿತಿ ಕೊಡಲಿದ್ದೇವೆ. ಗೊಂದಲ ಬಗೆಹರಿಯದಿದ್ರೆ ಸಮಯಾವಕಾಶ ಕೇಳಲಾಗುವುದು. ತಾಂತ್ರಿಕ ಸಮಿತಿ ಅಭಿಪ್ರಾಯ, ಅಧಿಕಾರಿಗಳ ಅಭಿಪ್ರಾಯ, ಬೇರೆ ಇರುತ್ತದೆ. ಎಲ್ಲಾ ಸಿದ್ದತೆ ಮಾಡಿಕೊಂಡು ಕೋರ್ಟ್ ಮುಂದೆ ಹೋಗುತ್ತೇವೆ. ಜುಲೈ 15 ರವರೆಗೆ ಟ್ರಯಲ್ ಬ್ಲಾಸ್ಟ್ ನಡೆಸುವುದಿಲ್ಲ ಎಂದರು.

ರೈತ ಮುಖಂಡರಾದ ಕೆಂಪೂಗೌಡ ಅವರು ಮಾತನಾಡಿ ಅಣೆಕಟ್ಟು ಕಟ್ಟುವುದು ಕಷ್ಟಕರ, ಇರುವ ಅಣೆಕಟ್ಟನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಕೆ.ಆರ್.ಎಸ್ ಸುತ್ತ ಗಣಿಗಾರಿಕೆ ನಡೆಸುವುದಿಲ್ಲ ಎಂದು ಸರ್ಕಾರದಿಂದ ಸುಗ್ರಿವಾಜ್ಞೆ ಹೊರಡಿಸಿ ಎಂದು ತಮ್ಮ ಅಭಿಪ್ರಾಯ‌ ವ್ಯಕ್ತಪಡಿಸಿದರು.

ರೈತ ಮುಖಂಡ ಪ್ರಸನ್ನ ಗೌಡ ಅವರು ಮಾತನಾಡಿ ಡ್ಯಾಮ್ ಸೆಫ್ಟಿ ಅಕ್ಟ್ (Dam safety act)  ಪ್ರಕಾರ ರಾಜ್ಯದಲ್ಲಿರುವ ಎಲ್ಲಾ ಅಣೆಕಟ್ಟುಗಳ ರಕ್ಷಣೆ ಮಾಡಲು ಹೊಸ ಕಾನೂನುಗಳನ್ನು ಜಾರಿಗೆ ತರಬೇಕು. ತಂತ್ರಜ್ಞಾನ ಮುಂದುವರಿದಿದೆ.  ಒಂದು ಟ್ರಯಲ್ ಬ್ಲಾಸ್ಟ್ ನಡೆಸಿ  ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಂದೆ ಅನುಮತಿ ನೀಡಿದಾಗ ಹಲವಾರು ಬ್ಲಾಸ್ಟ್ ಗಳ ಸಂದರ್ಭದಲ್ಲಿ ಪರಿಣಾಮ ಬೇರೆ ರೀತಿ ಇರಬಹುದು. ಲಕ್ಷಾಂತರ ಜನಕ್ಕೆ ಜೀವನ ನೀಡುವ ಅಣೆಕಟ್ಟಿನ 25 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ‌ ಮಾಡಬಾರದು. ಇದು ಕೇವಲ ಕೆ.ಆರ್.ಎಸ್ ಮಾತ್ರವಲ್ಲ ರಾಜ್ಯದ ಎಲ್ಲಾ ಅಣೆಕಟ್ಟಿಗೆ ಅನ್ವಯಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕಾನೀನಿನಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ತಾಂತ್ರಿಕ ಅಧಿಕಾರಿ ಶಿವಪ್ರಸಾದ್ , ಎ.ಎಸ್.ಪಿ ತಿಮ್ಮಯ್ಯ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Key words: Trail blast , Baby Betta, Minister, Chaluvarayaswamy