ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳರ ಕೈ ಚಳಕ: 2 ಕೆ.ಜಿಗೂ ಹೆಚ್ಚು ಚಿನ್ನಾಭರಣ ದೋಚಿದ ಖದೀಮರು.

ಮೈಸೂರು,ಏಪ್ರಿಲ್,1,2024 (www.justkannada.in): ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳರು ಕೈ ಚಳಕ ತೋರಿದ್ದು ಬಾಗಿಲು ಮುರಿದು  2 ಕೆ.ಜಿಗೂ ಹೆಚ್ಚು ಚಿನ್ನಾಭರಣ ಹಾಗೂ ಬೆಳ್ಳಿಯನ್ನ ಖದೀಮುರು ದೋಚಿ ಪರಾರಿಯಾಗಿರುವ ಘಟನ ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಬಳಿಯ ಗುರು ರಾಘವೇಂದ್ರ ಜ್ಯುವೆಲ್ಲರಿ ಶಾಪ್‌ ನಲ್ಲಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ನಾಗರಾಜ್ ಕುಟುಂಬ ಮಧುಗಿರಿಗೆ ಜಾತ್ರೆಗೆ ತೆರಳಿದ್ದಾಗ ಖದೀಮರು ಕೈಚಳಕ ತೋರಿದ್ದಾರೆ.

ಜ್ಯುವೆಲ್ಲರಿ ಶಾಪ್  ಮಾಲೀಕ ನಾಗರಾಜ್ ಮನೆ ಹೊಂದಿಕೊಂಡಂತಿದೆ. ರಾತ್ರಿ ವೇಳೆ ಎರಡು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು ಸುಮಾರು 2 ಕೆ.ಜಿ 150 ಗ್ರಾಂ ಚಿನ್ನ, 25 ಕೆಜಿ ಬೆಳ್ಳಿ ದೋಚಿದ್ದಾರೆ. ಸಿಸಿಟಿವಿ‌ ಕ್ಯಾಮೆರಾದ ಡಿವಿಆರ್ ಸಹಿತ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಹಿಂದೆ ಮನೆ ಬಾಡಿಗೆಗೆ ಬಂದಿದ್ದ ಮಹಿಳೆಯೊಬ್ಬರ ಜತೆ ಮಾಲೀಕರಿಗೆ ವಿವಾದವಾಗಿತ್ತು. ಅದೇ‌ ಮಹಿಳೆ ಮೇಲೆ ಮಾಲೀಕ‌ ನಾಗರಾಜ್ ಅನುಮಾನ ವ್ಯಕ್ತಪಡಿಸಿದ್ದಾರೆ.  ಸ್ಥಳಕ್ಕೆ ಶ್ವಾನ‌ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು,  ಮೈಸೂರು ಗ್ರಾಮಾಂತರ ಆಡಿಷನಲ್ ಎ.ಎಸ್.ಪಿ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಕಳ್ಳರ ಜಾಲ ಬೇಧಿಸಲು ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿದೆ.

Key words: Thieves, jewelery, shop, mysore