Saturday, August 29, 2026

BDA Apartments

Home Front Page ರಾಜ್ಯದಲ್ಲಿ ಶಿಕ್ಷಣದ ಕ್ರಾಂತಿ ನಡೆದಿದೆ ಅಂದ್ರೆ ಅದು ಮಠ ಮಾನ್ಯಗಳಿಂದ ಮಾತ್ರ- ಹಾಡಿಹೊಗಳಿದ ಸಿಎಂ ಡಿಕೆ...

ರಾಜ್ಯದಲ್ಲಿ ಶಿಕ್ಷಣದ ಕ್ರಾಂತಿ ನಡೆದಿದೆ ಅಂದ್ರೆ ಅದು ಮಠ ಮಾನ್ಯಗಳಿಂದ ಮಾತ್ರ- ಹಾಡಿಹೊಗಳಿದ ಸಿಎಂ ಡಿಕೆ ಶಿವಕುಮಾರ್

ಮೈಸೂರು,ಆಗಸ್ಟ್,29,2026 (www.justkannada.in): ದುಃಖವನ್ನು ಕಳೆದುಕೊಳ್ಳಲು ಧರ್ಮದ ದಾರಿಯನ್ನು ಹುಡುಕಿ ಹೋಗುತ್ತೇವೆ. ಕಷ್ಟಗಳನ್ನು ಕೇಳಲು ಮಠಗಳು ದಾರಿದೀಪವಾಗಿದೆ. ಜಾತಿಭೇದ ಮರೆತು ಎಲ್ಲರೂ ಮಠಕ್ಕೆ ಬರುತ್ತಾರೆ. ಶಿಕ್ಷಣದ ಕ್ರಾಂತಿ ರಾಜ್ಯದಲ್ಲಿ ನಡೆದಿದೆ ಅಂದ್ರೆ ಅದು ಮಠ ಮಾನ್ಯಗಳಿಂದ ಮಾತ್ರ ಎಂದು ಹೇಳುವ ಮೂಲಕ ಸಿಎಂ ಡಿಕೆ ಶಿವಕುಮಾರ್ ರಾಜ್ಯದ ಮಠಗಳನ್ನು ಹಾಡಿ ಹೊಗಳಿದರು.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಡೆದ  ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 111ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾನು ಸಿಎಂ ಆದಮೇಲೆ ಮೈಸೂರಿನಲ್ಲಿ ಇದು ಎರಡನೇ ಕಾರ್ಯಕ್ರಮ. ಪ್ರಧಾನಿ ಮೋದಿ ಅವರ ಜೊತೆ ಸ್ವಾಮಿ ವಿವೇಕಾನಂದ ಕೇಂದ್ರದ ಉದ್ಘಾಟನೆಗೆ ಬಂದಿದ್ದೆ. ಈಗ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಎಂಬ ಪುರಂದರದಾಸರ ವಾಣಿಯಿದೆ. ಅಂತಹದೇ ಕೆಲಸ ಮಾಡಿದ್ದು ರಾಜೇಂದ್ರ ಶ್ರೀಗಳು ಅಕ್ಷರ ದಾಸೋಹ, ಅನ್ನ ದಾಸೋಹ  ನೀಡಿದ್ದಾರೆ. ಅಂತ ಮಹನೀಯರ ಜಯಂತಿಯಲ್ಲಿ ಭಾಗಿಯಾಗಿದ್ದು ನನ್ನ ಭಾಗ್ಯ. ಕಳೆದ 40 ವರ್ಷಗಳಿಂದ ಈಗಿನ ಶ್ರೀಗಳು ಮಠವನ್ನು ಮುನ್ನಡೆಸುತ್ತಿದ್ದಾರೆ. ಗುರುಗಳಲಿಲ್ಲದೆ ಮಠಗಳಿಲ್ಲದೆ ನಾವ್ಯಾರು ಇಲ್ಲ. ಹೊಟ್ಟೆಗೆ ಹಸಿವಾದರೆ ಪ್ರಸಾದ ಬೇಕು. ಮನಸ್ಸಿಗೆ ಹಸಿವಾದರೆ ಪ್ರಾರ್ಥನೆ ಬೇಕು. ಇದೇ ಕೆಲಸವನ್ನು ನಾವೆಲ್ಲ ಮಾಡುತ್ತಿದ್ದೇವೆ. ಕರ್ಮ ಹಲವಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು. ಮನಸ್ಸಿಗೆ ನೆಮ್ಮದಿ ಬೇಕು ಅಂದರೆ ದೇವರಿಗೆ ಪ್ರಾರ್ಥನೆ ಮಾಡುತ್ತೇವೆ. ಕಷ್ಟ ಅಂದಾಗ ದೇವಸ್ಥಾನಕ್ಕೆ ಹೋಗುತ್ತೇವೆ. ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಒಂದು ಮಾತು ಹೇಳಿದ್ದೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಹೇಳಿದ್ದೆ ಎಂದು ಹಳೇಯ ಪ್ರಾರ್ಥನೆ ನೆನೆದರು.

ನನ್ನ ಕಷ್ಟಗಳದಲ್ಲಿ ಸುಖದಲ್ಲಿ ಜೈಲಿಗೆ ಹೋದಾಗ ನನ್ನ ಮನೆಗೆ ಬಂದು ಆರೋಗ್ಯ ವಿಚಾರಿಸಿ ನನಗೆ ಆಶೀರ್ವಾದ ಮಾಡಿದ್ದಾರೆ. ಇದನ್ನು ನಾನು ಮರೆಯಲ್ಲ. ಶ್ರೀಗಳಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದರು.

ಸುತ್ತೂರು ಮಠದ ಕಾರ್ಯ ವೈಖರಿ ಹಾಡಿ ಹೊಗಳಿದ ಸಿಎಂ

ಮಾನವ ಧರ್ಮ ದೊಡ್ಡದು. ನಿನ್ನೆ ನನಗೆ ಸಂಸ್ಕೃತ ಕಲಿಸಿದ ಗುರುಗಳು ಬಂದು ಆಶೀರ್ವಾದ ಮಾಡಿದರು. ಗುರುಗಳ ಆಶೀರ್ವಾದ ಸದಾ ಮುಖ್ಯ. ಹಾಗಾಗಿ ರಾಜೇಂದ್ರ ಸ್ವಾಮಿಗಳ ಅಕ್ಷರ ದಾಸೋಹ, ಅನ್ನ ದಾಸೋಹ ಮಾಡಿದ್ದು ಶ್ರೀಗಳು. ಅವರನ್ನು ನಾವು ಸ್ಮರಿಸಿ ಅದನ್ನೇ ಸರ್ಕಾರದ ಕಾರ್ಯಕ್ರಮಗಳನ್ನಾಗಿ ಮಾಡಿಕೊಂಡು ಬಂದಿದ್ದೇವೆ ಎಂದು ಸುತ್ತೂರು ಮಠದ ಕಾರ್ಯ ವೈಖರಿಯನ್ನು ಸಿಎಂ ಡಿಕೆ ಶಿವಕುಮಾರ್ ಹಾಡಿ ಹೊಗಳಿದರು.

ನಾನು ಒಂದೇ ಆಲೋಚನೆ ಮಾಡಿದ್ದೇನೆ. ರೈತರ ಜಮೀನಿನ ಪಕ್ಕ ಸರ್ಕಾರಿ ಜಾಗವಿದ್ದರೆ ತೇಗದ ಮರ ಹಾಕಿ ಬೆಳೆಯಲು ಯೋಜನೆ ರೂಪಿಸುತ್ತಿದ್ದೇನೆ. 25 ವರ್ಷದ ಬಳಿಕ ಮರದಲ್ಲಿ 70% ರೈತರಿಗೆ 30% ಸರ್ಕಾರಕ್ಕೆ ಕೊಡಬೇಕು. ರೈತರು ಮರಗಳನ್ನು ಸಂರಕ್ಷಣೆ ಮಾಡಬೇಕು. ಈ ಯೋಜನೆಯನ್ನು ಜಾರಿಗೆ ತರಲು ಶೀಘ್ರವೇ ತೀರ್ಮಾನ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಮೇಕೆದಾಟು ನಿಮ್ಮ ಕಾಲದಲ್ಲೇ ಆದರೆ ಆಗತ್ತದೆ. ಇಲ್ಲ ಅಂದರೇ ಆಗಲ್ಲ ಅಂತ ಸಿದ್ದಗಂಗಾ ಶ್ರೀಗಳು ಹೇಳಿದರು. ಮೇಕೆದಾಟು ಯೋಜನೆಗೆ ಬೇಕಾದ ಜಮೀನು ಬಗ್ಗೆ ಈಗಾಗಲೇ ಪರಿಶೀಲನೆ ನಡೆಯುತ್ತಿದೆ. ವಿರೋಧ ಪಕ್ಷದ ಸಹಕಾರ ಕೂಡ ಕೇಳಿದ್ದೇನೆ. ಅವರು ಕೂಡ ಆಯ್ತು ಅಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೇನೂ ಕೂಡ ಮೇಕೆದಾಟು ಯೋಜನೆಗೆ ಪ್ರಸ್ತಾಪ ಮಾಡಿದ್ದೇನೆ. ಈ ವೇಳೆ ದಕ್ಷಿಣ ಭಾರತದ ಸಿಎಂ ಗಳು ಜೊತೆ ಇದ್ದರು. ಈ  ಹಿಂದೆ ಬಗ್ಗೆ ವಿಜಯ್ ಕೂಡ ಮಾತುಕತೆಗೆ ಸಿದ್ಧರಿದ್ದರು. ಆದರೆ ಪ್ರತಿಭಟನೆಗಳು ನಡೆದವು. ವಾತಾವರಣ ಶಾಂತಿಯಾದ ಮೇಲೆ ಮಾತುಕತೆ ಮಾಡುತ್ತೇವೆ. ಮೇಕೆದಾಟು ಯೋಜನೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಅದನ್ನು ಕೂಡ ಮಾಡುತ್ತೇವೆ ಎಂದರು.

ತುಂಗಭದ್ರ ವಿಚಾರವಾಗಿಯು ನಾವು ಒಳ್ಳೆಯ ತೀರ್ಮಾನ ಮಾಡಿದ್ದೇವೆ. ನಾವು ನಿಮ್ಮ ಋಣ ತೀರಿಸಿಬೇಕಿದೆ. ಶ್ರೀಗಳು ಸಮಾಜದ ಋಣ ತೀರಿಸುತ್ತಿದ್ದಾರೆ ಎಂದರು.

 ಎಲ್ಲಾ ಋಣವನ್ನು ತೀರಿಸಬೇಕು.

ಮನುಷ್ಯ 4 ಋಣದಲ್ಲಿ ಹುಟ್ಟುತ್ತಾನೆ. ತಂದೆ ತಾಯಿ ಗುರುಗಳು ಹಾಗೂ ಸಮಾಜದ ಋಣ. ಇದೆಲ್ಲ ಋಣವನ್ನು ನಾವು ತೀರಿಸಬೇಕು. ಇಂತಹ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಧರ್ಮ, ಪೂಜೆ, ಭಕ್ತಿ ಇದೆಲ್ಲವೂ ಮನುಷ್ಯನಿಗಾಗಿ ಬಂದಿದ್ದು. ನಾವೆಲ್ಲರೂ ಶಾಂತಿಯಿಂದ ಬದುಕುಬೇಕಿದೆ. ದೇವರು ವರನು ಕೊಡಲ್ಲ ಶಾಪನು ಕೊಡಲ್ಲ. ಅವಕಾಶ ಕೊಡ್ತಾನೆ. ನನಗೆ ಒಂದು ಅವಕಾಶ ಸಿಕ್ಕಿದೆ. ನೀವೆಲ್ಲರೂ ಎಷ್ಟು ದಿನ ಸೇವೆ ಮಾಡಲು ಅವಕಾಶ ಕೊಡುತ್ತೀರಾ  ಅಲ್ಲಿ ತನಕ ಸೇವೆ ಮಾಡಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗುತ್ತೇನೆ. ಜನನ ಉಚಿತ ಮರಣ ಖಚಿತ. ಇರುವರೆಗೂ ನಾನು ಸೇವೆ ಮಾಡುತ್ತೇನೆ. ಎಲ್ಲಾ ನಾಡಿನ ಹಿರಿಯರು ಅನೇಕ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಅದ್ಬುತ ಭಾಷಣ ಮಾಡಿದ ಸಿಎಂ ಡಿಕೆಶಿ

ನಾನು ಸಿದ್ದರಾಮಯ್ಯ ಪಂಚ ಗ್ಯಾರಂಟಿ ಕೊಡಬೇಕು ಅಂತ ತೀರ್ಮಾನ ಮಾಡಿದವು. . 50 ಸಾವಿರ ಕೋಟಿ ಅದಕ್ಕಾಗಿ ಮೀಸಲಿಟ್ಟಿದ್ದೇವೆ. ಶಕ್ತಿ ಯೋಜನೆ, ವಿದ್ಯುತ್ ಫ್ರೀ ಎಲ್ಲವನ್ನೂ ಜನರಿಗಾಗಿ ಮಾಡಿದ್ದೇವೆ. ಆದರೆ ಇದನ್ನು ವಿರೋಧ ಪಕ್ಷಗಳು ಟೀಕೆ ಮಾಡಿದವು. ಕೊನೆಗೆ ನಮ್ಮ ರಾಜ್ಯದ ಯೋಜನೆಗಳನ್ನು ಬೇರೆ ರಾಜ್ಯದವರು ಕಾಪಿ ಮಾಡಿದರು. ನಮ್ಮ ಮಾದರಿಯನ್ನು ಅವರು ಫಾಲೋ ಮಾಡುತ್ತಿದ್ದಾರೆ. ಬೇರೆ ಕಡೆ ನಮ್ಮ ರೀತಿ ನುಡಿದಂತೆ ನಡೆದುಕೊಂಡಿಲ್ಲ. ಮಹಾರಾಷ್ಟದಲ್ಲಿ ಗ್ಯಾರೆಂಟಿ ಕೊಡಲು ಆಗಿಲ್ಲ. ಇದು ಬಸವಣ್ಣನ ನಾಡು. ಅವರಂತೆ ನುಡಿದಂತೆ ನಡೆದಿದ್ದೇವೆ. ಕಾಯಕದಿಂದ ನಾಯಕತ್ವ ಸಿಗತ್ತೆ. ಅಧಿಕಾರ ಶಕ್ತಿ ಸಂಕೇತವಲ್ಲ. ಜವಾಬ್ದಾರಿ ಸಂಕೇತ. ಇದು ನನ್ನ ನಂಬಿಕೆ. ಅಧಿಕಾರ ಕೂಡ ಶಾಶ್ವತವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಸಿಎಂ ಡಿಕೆ ಶಿವಕುಮಾರ್ ಅದ್ಬುತ ಭಾಷಣ ಮಾಡಿದರು.

Key words: education revolution, state mutt, Suttur mutt, CM DK Shivakumar