3 ಚಿರತೆ ಮರಿಗಳನ್ನು ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿ: ಅರಣ್ಯ  ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ.

ಮೈಸೂರು,ಡಿಸೆಂಬರ್.18,2023(www.justkannada.in):  ಅರಣ್ಯ ಇಲಾಖೆ ಸಿಬ್ಬಂದಿಗಳ  ಸತತ 10 ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯ ಪರಿಣಾಮ 3 ಚಿರತೆ ಮರಿಗಳನ್ನು  ತಾಯಿಯ ಮಡಿಲು ಸೇರಿಸುವ ಕಾರ್ಯ ಯಶಸ್ವಿಯಾಗಿದೆ.

ಇತ್ತೀಚೆಗೆ ಮೈಸೂರು ತಾಲ್ಲೂಕಿನ ಆಯರಹಳ್ಳಿ ಗ್ರಾಮದ ಬಳಿ ಕಬ್ಬು ಕಟಾವು ಮಾಡುವ ವೇಳೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ತಾಯಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಎರಡು ದಿನಗಳ ನಂತರ ಆಗಮಿಸಿದ ತಾಯಿ ಚಿರತೆ ಬೋನಿಗೆ ಬಿದ್ದು ಸೆರೆಯಾಗಿತ್ತು. ಬಳಿಕ ತಾಯಿ ಹಾಗೂ ಮರಿಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ತಾಯಿ ಮತ್ತು ಮರಿಗಳನ್ನು ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಲಾಗಿತ್ತು. ನಂತರ ತಾಯಿ ಮತ್ತು ಮರಿಗಳು ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ತಾಯಿ ಮರಿಗಳು ಹೊಂದಿಕೊಂಡ ಬಳಿಕ ಅರಣ್ಯಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಅರಣ್ಯ ಪ್ರದೇಶದಲ್ಲಿರುವ ಕೊಠಡಿಯೊಂದರಲ್ಲಿ ತಾಯಿ ಮರಿಗಳನ್ನು ಬಿಡಲಾಗಿತ್ತು. ಇದಾದ ಬಳಿಕ ತಾಯಿ ಚಿರತೆ ಕೊಠಡಿಯ ಕಿಟಕಿಯನ್ನು ಮುರಿದು ಹೊರ ಹೋಗಿ ಸುರಕ್ಷಿತ ತಾಣಕ್ಕಾಗಿ ಹುಡುಕಾಟ ನಡೆಸಿತ್ತು.

ಎರಡು ದಿನಗಳ ಕಾಲ ನೆಲೆಗಾಗಿ ಹುಡುಕಾಡಿದ ತಾಯಿ ಚಿರತೆ ನಂತರ  ಬಂದು ಎರಡು ಮರಿಗಳನ್ನು ಹೊತ್ತೊಯ್ದಿತ್ತು.ಇದಾದ ಮರುದಿನ ಬಂದು ಮತ್ತೊಂದು ಮರಿಯನ್ನು ಹೊತ್ತೊಯ್ಯಿತು. ಒಟ್ಟು ಹತ್ತು ದಿನಗಳ ಕಾಲ ನಡೆದ ಈ ಎಲ್ಲಾ ಘಟನಾವಳಿಗಳು ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾಗಳಲ್ಲಿ ದಾಖಲಾಗಿದೆ. ತಾಯಿ ಜೊತೆ ಮರಿಗಳನ್ನು ಜೊತೆಯಾಗಿಸಿ ಅವುಗಳ ಆವಾಸ ಸ್ಥಾನದಲ್ಲಿ ಬಿಡುಗಡೆ ಮಾಡಿದ ಕಾರ್ಯ ಯಶಸ್ವಿಯಾದ  ಬಳಿಕ ಈ ದೃಶ್ಯಾವಳಿಗಳನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Key words: Succeeded -rehoming -3 leopard -cubs:-Appreciation – forest  staff