ನೆರೆ ಸಂತ್ರಸ್ತರಿಗೆ ಶಾಕ್: ರಾಜ್ಯ ಪರಿಹಾರ ವರದಿ, ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ ಸರ್ಕಾರ..

ನವದೆಹಲಿ, ಅ,4,2019(www.justkannada.in):  ನೆರೆ ಪರಿಹಾರದ ನಿರೀಕ್ಷೆಯಲ್ಲಿದ್ದ ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ರಾಜ್ಯ ಪರಿಹಾರದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ರಾಜ್ಯದ ನೆರೆ ಪರಿಹಾರದ ವರದಿ ಮತ್ತು ಕೇಂದ್ರದ ವರದಿ ತಾಳೆಯಾಗುತ್ತಿಲ್ಲ.  ಕರ್ನಾಟಕದ ನೆರೆ ನಷ್ಟದ ಅಂದಾಜು ಸರಿ ಇಲ್ಲ. ವರದಿಯನ್ನ ಸ್ಪಷ್ಟೀಕರಿಸಿ ಪ್ರಮಾಣೀಕರಿಸುವಂತೆ ರಾಜ್ಯದ ಗೃಹ ಇಲಾಖೆ ಆಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಇದೇ ವೇಳೆ ರಾಜ್ಯದ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಕೇಂದ್ರ ಸರ್ಕಾರ ಕುಸಿದ ಮನೆಗಳೆಲ್ಲವೂ 5 ಲಕ್ಷ ರೂ ಬೆಲೆಬಾಳುತ್ತದೆಯೇ..? 38 ಸಾವಿರ ಕೋಟಿ ನಷ್ಟವಾಗಿಲ್ಲ ಎಂದು ಹೇಳಿದೆ.   ಕೇಂದ್ರದ ಅಧ್ಯಯನ ತಂಡ ನೀಡಿರುವ ವರದಿ ಪ್ರಕಾರ 1.15 ಲಕ್ಷ  ಮನೆಗಳು ಹಾನಿಯಾಗಿವೆ ಎಂದು ಉಲ್ಲೇಖವಾಗಿದೆ. ಆದರೆ ರಾಜ್ಯದ ವರದಿ ಪ್ರಕಾರ 2.15 ಲಕ್ಷ ಮನೆಗಳು ಹಾನಿಯಾಗಿವೆ. ಅಲ್ಲದೆ  ಪ್ರವಾಹದಿಂದ ಅಂದಾಜು 38 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಹೀಗಾಗಿ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಯಮಾವಳಿ ಅನ್ವಯ 3,500 ಕೋಟಿ ರೂ ನೆರೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು.

ಆದರೆ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ ಕೂಡಲೇ ವರದಿಗೆ ಸ್ಪಷ್ಟೀಕರಣ ನೀಡಿ ವರದಿ ಪ್ರಮಾಣೀಕರಿಸಿ ಎಂದು ಸೂಚಿಸಿದೆ.  ಈ ಮೂಲಕ ಕೇಂದ್ರದ ನೆರೆ ಪರಿಹಾರ ನಿರೀಕ್ಷೆಯಲ್ಲಿದ್ದ ನೆರೆ ಸಂತ್ರಸ್ತರ ಆಸೆಗೆ ತಣ್ಣೀರೆರೆಚಿದಂತಾಗಿದೆ.

Key words: State compensation- report- proposal -rejected – central government.