ಸಿನಿಮಾ ಜಗತ್ತಿನಲ್ಲಿ ಬೆಳೆಯಲು ಸಾಮಾಜಿಕ ಜಾಲತಾಣ ಉತ್ತಮ ವೇದಿಕೆ, ಬಳಸಿಕೊಳ್ಳಿ- ನಟ ಜಗ್ಗೇಶ್

ಮೈಸೂರು,ಫೆಬ್ರವರಿ,20,2026 (www.justkannada.in):  ಸಿನಿಮಾ ಜಗತ್ತಿನಲ್ಲಿ ಬೆಳೆಯಲು ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿದೆ. ಅದನ್ನು ಬಳಸಿಕೊಂಡು ಬೆಳೆಯಿರಿ ಎಂದು ನವರಸ ನಾಯಕ ಜಗ್ಗೇಶ್ ಕಿವಿಮಾತು ಹೇಳಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಸಿನಿಮಾ ಸೊಸೈಟಿ  ಆಯೋಜಿಸಿದ್ದ ಪರಿದೃಶ್ಯ ಅಂತಾರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರೋತ್ಸವದ ನಾಲ್ಕನೇ ಆವೃತ್ತಿ ಉದ್ಘಾಟಿಸಿ ನಟ ಜಗ್ಗೇಶ್  ಮಾತನಾಡಿದರು.

ಏಕಾಏಕಿ ಹೀರೋ ಆಗಿ ಕೋಟ್ಯಂತರ ರೂ. ಗಳಿಸಿ ಮೆರೆಯುತ್ತೇನೆ ಎಂಬ ಭ್ರಮೆಯಲ್ಲಿರಬೇಡಿ. ಇದಕ್ಕಾಗಿ ಸಾಕಷ್ಟು ಶ್ರಮಿಸಬೇಕು ಮತ್ತು ಸಮಯ ಮೀಸಲಿಡಬೇಕು. ಯಶಸ್ಸಿಗೆ ಅಡ್ಡದಾರಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬಹಳ ಪ್ರಭಾವ ಹೊಂದಿವೆ. ಇದನ್ನು ವೇದಿಕೆಯಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಈ ಸಾಮಾಜಿಕ ಜಾಲತಾಣ ಇನ್ನೂ ಹತ್ತರಿಂದ ಹದಿನೈದು ವರ್ಷ ತನ್ನ ಪ್ರಭಾವ ಹೊಂದಿರುತ್ತದೆ ಎಂದರು.

ನಾನು ಅಪ್ಪನೊಂದಿಗೆ ಜಗಳ ಮಾಡಿಕೊಂಡು ಬಿಸಿರಕ್ತದಲ್ಲಿ ಮನೆ ಬಿಟ್ಟು ಬಂದವನು. ಮೈಸೂರಿನ ಕಲ್ಲು ಬಿಲ್ಡಿಂಗ್ ಬಳಿಯ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಕೆಫೆಯೊಂದರಲ್ಲಿಯೂ ಕೆಲಸ ಮಾಡುತ್ತಿ‍ದ್ದೆ. ಆದರೆ ನಾನು ಬರೆಯುತ್ತಿದ್ದ ಕನ್ನಡವನ್ನು ನೋಡಿ ನನ್ನ ಗೆಳೆಯ ಕೃಷ್ಣ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿಸಿದ. ಆ ನಂತರ ನೀ ತಂದ ಕಾಣಿಕೆ ಸಿನಿಮಾ ಚಿತ್ರೀಕರಣಕ್ಕೆ  ಚೆನ್ನೈಗೆ ಹೋದಾಗ ಅಲ್ಲೊಬ್ಬರು ನೀವು ನೋಡಲು ರಜನಿಕಾಂತ್ ರೀತಿಯೇ ಇದ್ದೀರಿ. ನೀವು ಒಂದು ಪಾತ್ರ ಮಾಡಿ ಎಂದು ರೇಪ್ ಸೀನ್ ಕೊಟ್ಟರು. ಅಲ್ಲಿಂದ ಮತ್ತೆ ನಾನು ಹಿಂದಕ್ಕೆ ತಿರುಗಿ ನೋಡಲಿಲ್ಲ ಎಂದರು.

ನನ್ನ ಬದುಕಿನಲ್ಲಿ ಯಾರು ಇಷ್ಟೆಲ್ಲ ಆಟ ಅಡುತ್ತಿರುವುದು ಅನ್ನಿಸುತ್ತದೆ. ನಮಗೆ ಈಗ ಮುಂದಿನ ಪೀಳಿಗೆ ಬಹಳ ಅದ್ಭುತವಾಗಿ ಬೆಳೆಯಬೇಕು. ಎಂಜಿನಿಯರ್ ಆದವನ ಮಗನೂ ಎಂಜಿನಿಯರ್ ಆಗಬೇಕು ಎಂಬ ಮನೋಭಾವವನ್ನು ಪೋಷಕರು ಬಿಡಬೇಕು. ನಿಮ್ಮ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅದರಂತೆ ಬೆಳೆಯಲು ಬಿಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರಧಾನಿಗಳು ಸಿನಿಮಾದಲ್ಲೂ ಜ್ಞಾನ ಇದೆ ಎಂಬುದನ್ನು ಅರಿತಿದ್ದಾರೆ. ಅದಕ್ಕಾಗಿ ಪ್ರತ್ಯೇಕ  ಯೋಜನೆ ರೂಪಿಸಿದ್ದಾರೆ. ನಮ್ಮ ಸಂಘಟನೆಗಳೂ ಕೂಡ ಇದೇ ರೀತಿಯ ಚಿಂತನೆಯಲ್ಲಿ ತೊಡಗಬೇಕು ಎಂದರು.

ಸಿನಿಮಾಗಳನ್ನು ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸುತ್ತಾರೆ. ಆದರೆ ನೋಡುವುದು ಮೊಬೈಲ್ ನಲ್ಲಿ. ಸಿನಿಮಾದ ಪೈರಸಿ ನಡೆಯುತ್ತಿದೆ. ಇದರ ವಿರುದ್ಧದ ಹೋರಾಟದಲ್ಲಿ ನಾನು ಒಬ್ಬನೆ ಇದೀನಿ. ಯಾರಿಗೂ ಈ ಬಗ್ಗೆ ಇಷ್ಟ ಇಲ್ಲ. ಸಿನಿಮಾದಿಂದ ನಾನು ಅನ್ನ ತಿನ್ನುತ್ತಿದ್ದೇನೆ. ಆದ್ದರಿಂದಲೇ ಪ್ರದಾನಿ ಜತೆ ಕೆಲಸ ಮಾಡುತ್ತಿದ್ದೇನೆ ಎಂದರು.

ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಮಾತನಾಡಿ, ಕೇರಳ ಒಳ್ಳೆಯ ಪ್ರೇಕ್ಷಕರನ್ನು ಹೊಂದಿರುವುದರಿಂದ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಕರ್ನಾಟಕದ 7 ಕೋಟಿ ಜನರಿಗೆ ಕೇವಲ 3 ಫಿಲಂ ಸೊಸೈಟಿಗಳು ಮಾತ್ರ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯು ಚಲನಚಿತ್ರೋತ್ಸವ ಬಿಟ್ಟು ಬೇರೇನು ಮಾಡುತ್ತಿಲ್ಲ. ಜನ ಕನ್ನಡ ಸಿನಿಮಾಗಳಿಗೆ ಬರುತ್ತಿಲ್ಲ. ಸದ್ಯದಲ್ಲಿಯೇ 18 ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಎಷ್ಟು ಸಿನಿಮಾ ಯಶಸ್ಸು ಕಾಣುತ್ತದೆ ಎಂದು ಪ್ರಶ್ನಿಸಿದರು.

ಸತ್ಯಜಿತ್ ರೇ ಅವರು ಹೇಳುವಂತೆ ಒಳ್ಳೆಯ ಪ್ರೇಪಕ್ಷಕರ ಸಂಖ್ಯೆ ಹೆಚ್ಚಬೇಕೆ ಹೊರತು ಸಿನಿಮಾಗಳ ಸಂಖ್ಯೆಯಲ್ಲ. ಒಳ್ಳೆಯ ಪ್ರೇಕ್ಷಕರಿದ್ದರೆ ಒಳ್ಳೆಯ ಸಿನಿಮಾಗಳು ಬರುವುದರಲ್ಲಿ ಸಂಶಯವಿಲ್ಲ ಎಂದರು.

Key words: Social media, great platform, cinema, Actor, Jaggesh