ಮೈಸೂರು,ಜುಲೈ,16,2025 (www.justkannada.in): `ಹಾವುಗಳ ಬಗ್ಗೆ ಅನಗತ್ಯ ಭಯದಿಂದ ಅವುಗಳನ್ನು ಸಾಯಿಸಲಾಗುತ್ತಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ’ ಎಂದು ಉರಗ ರಕ್ಷಕ ಸ್ನೇಕ್ ಶ್ಯಾಮ್ ಹೇಳಿದರು.
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಹಾವುಗಳ ದಿನದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಅರಣ್ಯ ಇಲಾಖೆ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಸಹಕರಿಸಬೇಕು. ನಾಗರಹಾವು, ಕಾಳಿಂಗ ಸರ್ಪ ವಿಷಕಾರಿಯಾಗಿದ್ದು, ಹಪ್ಪಟೆ, ಕೇರೆ ಹಾವು, ಹಸಿರು ಹಾವು ಮುಂತಾದವು ವಿಷಕಾರಿಯಲ್ಲ. ಕೆಲವು ಹಾವುಗಳು ಹೆಚ್ಚು ವಿಷಕಾರಿಯಲ್ಲದಿದ್ದರೂ, ಹಪ್ಪಟೆ ಹಾವು ಕಚ್ಚಿದರೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಹಾವುಗಳ ಬಗ್ಗೆ ಅನಗತ್ಯ ಭಯ ಬೇಡ’ ಎಂದು ಸಲಹೆ ನೀಡಿದರು.
ಹಾವು ಕಚ್ಚಿದಾಗ ಬಹುತೇಕ ಜನರು ಭಯದಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಹಾವು ಕಚ್ಚಿದಾಗ ವ್ಯಕ್ತಿಗೆ ಧೈರ್ಯ ತುಂಬಬೇಕು ಮತ್ತು ಸಾಧ್ಯವಾದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು’ ಎಂದು ಸ್ನೇಕ್ ಶ್ಯಾಮ್ ತಿಳಿಸಿದರು.
90000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರಗ ರಕ್ಷಕ ಸ್ನೇಕ್ ಶ್ಯಾಮ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಹಿರಿಯ ಸಮಾಜ ಸೇವಕ ರಘುರಾಮ್ ವಾಜಪಾಯಿ, ಕಾಂಗ್ರೆಸ್ ಮುಖಂಡ ಎನ್.ಎಂ ನವೀನ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಶಾಲೆಯ ಮುಖ್ಯ ಉಪಾಧ್ಯಾಯರಾದ ಸುಗುಣಾವತಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಶ್ರೀನಿವಾಸ್, ಪ್ರವೀಣ್ ಕುಮಾರ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Key words: Not, all, snakes , toxic, Snake Sham, Mysore