ಶ್ರೀ ರಾಮ್ ಘೋಷಣೆ ಭಕ್ತಿಯನ್ನು ಹುಟ್ಟುಸಬೇಕೇ ಹೊರತು, ದ್ವೇಷವನ್ನಲ್ಲ- ಸಚಿವ ಈಶ್ವರ್ ಖಂಡ್ರೆ.

ಬೆಂಗಳೂರು,ಜನವರಿ,22,2024(www.justkannada.in): ಇಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು ರಾಮಮಂದಿರ ಲೋಕಾರ್ಪಣೆಯಾಗಿದೆ.  ಈ ನಡುವೆ ಜೈ ಶ್ರೀ ರಾಮ್ ಘೋಷಣೆ ಭಕ್ತಿಯನ್ನು ಹುಟ್ಟುಸಬೇಕೆ ಹೊರತು, ದ್ವೇಷವನ್ನಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬೆಂಗಳೂರು ಕೆ ಆರ್ ಪುರಂ ಬಳಿಯ ಬಿದರಹಳ್ಳಿ ಹೋಬಳಿ, ಹಿರಂಡನ ಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ದೇವಾಲಯ ಮತ್ತು 33 ಅಡಿ ಎತ್ತರದ ಏಕಶಿಲಾ ಆಂಜನೇಯ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ರಾಮಾಯಣ ಮತ್ತು ಮಹಾಭಾರತ ಭಾರತದ ಎರಡು ಕಣ್ಣುಗಳಿದ್ದಂತೆ ಅದೇ ರೀತಿ ಕರ್ನಾಟಕದಲ್ಲಿ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳಾಗಿವೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಎಲ್ಲಾ ಘಟನೆಗಳು ನಮ್ಮ ಉತ್ತಮ ಜೀವನಕ್ಕೆ ಅಡಿಪಾಯವಾಗಿವೆ. ಶ್ರೀರಾಮ ಪಿತೃವಾಕ್ಯ ಪರಿಪಾಲನೆ ಮಾಡಿದ, ಲಕ್ಷ್ಮಣ ಕಷ್ಟಕಾಲದಲ್ಲಿ ಸೋದರನ ಹೊಣೆಯನ್ನು ನಿಭಾಯಿಸಿದ, ಭರತ ರಾಮನ ಪಾದುಕೆ ಇಟ್ಟು ರಾಜ್ಯಭಾರ ಮಾಡಿ ಆದರ್ಶಪ್ರಾಯನಾದ ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದೆ, ಸ್ವಾತಂತ್ರ್ಯಾ ನಂತರ ದೇಶದ ಆಡಳಿತದ ಚುಕ್ಕಾಣಿ ಹಿಡಿದು ನೂರಾರು ದೇವಾಲಯಗಳನ್ನು ಅಭಿವೃದ್ಧಿಪಡಿಸಿದೆ. ಮುಜರಾಯಿ ಇಲಾಖೆ ಮತ್ತು ಪುರಾತತ್ವ ಇಲಾಖೆ ಸ್ಥಾಪಿಸಿ ಸಂರಕ್ಷಣೆ ಮಾಡಿದೆ. ಆದರೆ ಎಂದಿಗೂ ದೇವಾಲಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Key words: Shri Ram -slogan – inspire –devotion- not hatred – Minister- Ishwar Khandre.