ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಆ.9ರಂದು ದೇಶಾದ್ಯಂತ ಬಿಡುಗಡೆ

ಬೆಂಗಳೂರು:ಮೇ-19:(www.justkannada.in) ಟೀಸರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ಆಗಸ್ಟ್ 9ರಂದು ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಲಿದೆ.

ದರ್ಶನ್ ದುರ್ಯೋದನನಾಗಿ ಕಾಣಿಸಿಕೊಂಡಿರುವ ಕುರುಕ್ಷೇತ್ರ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ರೆಬೆಲ್ ಸ್ಟಾರ್ ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್ ಹೀಗೆ ದಿಗ್ಗಜ ಕಲಾವಿದರ ಮಹಾಸಂಗಮದ ಮಹಾದೃಶ್ಯಕಾವ್ಯ ‘ಕುರುಕ್ಷೇತ್ರದಲ್ಲಿದೆ. ಬಹು ತಾರಾಗಣದ ಈ ಸಿನಿಮಾವನ್ನು ನಾಗಣ್ಣ ಮತ್ತು ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಜೊತೆಗೂಡಿ ನಿರ್ದೇಶಿಸಿದ್ದು, ಮುನಿರತ್ನ ನಿರ್ಮಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಮುನಿರತ್ನ ಅವರು ಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದು, ಆಗಸ್ಟ್ 9ಕ್ಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗಲಿದ್ದು, ಜುಲೈ ಮೊದಲ ವಾರ ಆಡಿಯೋ ರಿಲೀಸ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ನಟ ನಿಖಿಲ್ ಗೈರಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ, ಸಂಕಲನಕಾರ ಜೋನಿಹರ್ಷ ಅವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ನಟರ ಗೈರ ಹಾಜರಿಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು ಚಿತ್ರ ಬಿಡುಗಡೆ ದಿನಾಂಕ ಮಾತ್ರ ಇಂದು ಘೋಷಣೆ ಮಾಡಲಾಗುತ್ತದೆ. ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದರು.

ನಟ ಅಂಬರೀಶ್ ಅವರು ಅನಾರೋಗ್ಯದ ನಡುವೆಯೂ ಸುಮಾರು 20 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿ ಭೀಷ್ಮನ ಪಾತ್ರ ಮಾಡಿದ್ದಾರೆ. ಅಂಬರೀಶ್ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಆದರೆ ಅವರಗೆ ಯಾವುದೇ ಸಂಭಾವನೆ ಕೊಟ್ಟಿಲ್ಲ ಎಂದು ತಿಳಿಸಿದರು.

ಈ ಚಿತ್ರವನ್ನು ಜಗತ್ತಿನಾದ್ಯಂತ 2D ಹಾಗೂ 3Dಯಲ್ಲಿ ಗ್ರ್ಯಾಂಡ್ ರಿಲೀಸ್ ಮಾಡುವುದು ಬಹುತೇಕ ಖಚಿತವಾಗಿದೆ. ಕುರುಕ್ಷೇತ್ರ ಚಿತ್ರ 5 ಭಾಷೆಗಳಲ್ಲಿ ಬರಲಿದೆ ಎಂದರು.

ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಆ.9ರಂದು ದೇಶಾದ್ಯಂತ ಬಿಡುಗಡೆ

sandalwood,kurukshetra movie,releasing on 9th august,darshan,ambareesh,nikhil