Thursday, August 20, 2026

BDA Apartments

Home Front Page ಅಕ್ಕಿಗೆ ಬರ, ಏರುತ್ತಿದೆ ದರ!

ಅಕ್ಕಿಗೆ ಬರ, ಏರುತ್ತಿದೆ ದರ!

ಬೆಂಗಳೂರು:ಜುಲೈ-11: ಮುಂಗಾರು ಕೊರತೆ ಸೃಷ್ಟಿಸಿರುವ ನೀರಿನ ಅಭಾವದಿಂದಾಗಿ ರಾಜ್ಯದ ವಿವಿಧೆಡೆ ಭತ್ತ ಬೆಳೆಯುವಿಕೆ ಪ್ರಮಾಣ ಕುಸಿತ ಕಂಡಿರುವ ಪರಿಣಾಮ ಅಕ್ಕಿ ಬೆಲೆ ಗಗನ ಮುಟ್ಟಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶವಾದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ 3.6 ಲಕ್ಷ ಹೆಕ್ಟೇರ್​ಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಕಳೆದ ಬೇಸಿಗೆಯಲ್ಲಿ ತುಂಗಭದ್ರಾ ಕೆಳಮಟ್ಟದ ನಾಲೆ ವ್ಯಾಪ್ತಿಯ 75 ಸಾವಿರ ಎಕರೆ ಪ್ರದೇಶದಲ್ಲಷ್ಟೇ ಭತ್ತ ಬೆಳೆಯಲಾಗಿದೆ. ನೀರಿನ ಅಲಭ್ಯತೆಯಿಂದಾಗಿ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ಭತ್ತ ಬೆಳೆದಿಲ್ಲ. ಬಂದಿರುವ ಅಲ್ಪಬೆಳೆಯ ಬಹುತೇಕ ಪಾಲು ಆಂಧ್ರಪ್ರದೇಶ, ತೆಲಂಗಾಣ ಸೇರಿ ಹೊರ ರಾಜ್ಯಗಳ ಪಾಲಾಗಿದೆ. ಇತ್ತ ರಾಜ್ಯದಲ್ಲಿ ಮಳೆ ವಿಳಂಬದಿಂದಾಗಿ ಜಲಾಶಯಗಳೂ ಭರ್ತಿಯಾಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಭತ್ತದ ಅಭಾವ ಹೆಚ್ಚಾಗಿ, ಅಕ್ಕಿ ಬೆಲೆ ಏರಿಕೆಯಾಗಿದೆ. ಬೆಳೆ ಕುಸಿತ, ರಾಜ್ಯದ ಭತ್ತ ಹೊರರಾಜ್ಯಗಳಿಗೆ ರವಾನೆ ಆಗುತ್ತಿರುವುದರಿಂದ ಸ್ಥಳೀಯ ಅಕ್ಕಿಗಿರಣಿಗಳಿಗೂ ಕೆಲಸ ಇಲ್ಲದಂತಾಗಿದೆ.

ಕಳೆದ ಬೇಸಿಗೆಯಲ್ಲಿ ರಾಜ್ಯದ ಬಹುಪಾಲು ಅಕ್ಕಿ ಹೈದರಾಬಾದ್​ಗೆ ರವಾನೆಯಾಗಿದೆ. ರಾಜ್ಯದ ಅಕ್ಕಿ ವಿದೇಶಕ್ಕೆ ರಫ್ತಾಗುತ್ತಿದೆ.

| ಹೇಮಯ್ಯಸ್ವಾಮಿ, ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ, ಕಂಪ್ಲಿ

ಕಾರಣಗಳೇನು?

ಆಂಧ್ರದಿಂದ ಪೂರೈಕೆಯಾಗುವ ಅಕ್ಕಿ ಪ್ರಮಾಣ ಇಳಿಕೆ
ಹಣದ ಆಸೆಗೆ ಹೊರರಾಜ್ಯಗಳಿಗೆ ಮಾರಾಟ
ಗಿರಣಿ ಮಾಲೀಕರಿಂದ ಅಕ್ಕಿ ದಾಸ್ತಾನು
ಕೆ.ಜಿ. ಲೆಕ್ಕವೂ ದುಬಾರಿ

ಐಆರ್ 8 ದರ್ಜೆ ಇಡ್ಲಿಕಾರ್ ಹಾಗೂ ಕುಸಬಲಕ್ಕಿ ಬೆಲೆ ಕೂಡ ಕೆ.ಜಿ.ಗೆ 4-5 ರೂ. ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಗೆ ಬರುತ್ತಿರುವುದು ಕಳೆದ ವರ್ಷದ ಭತ್ತದಿಂದ ತಯಾರಿಸಿದ ಅಕ್ಕಿ.


ಕೃಪೆ:ವಿಜಯವಾಣಿ

ಅಕ್ಕಿಗೆ ಬರ, ಏರುತ್ತಿದೆ ದರ!
rice-rate-increasing-in-karnataka