ನೇಕಾರರಿಗೆ ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್‍ ಹಣ ಬಿಡುಗಡೆ ಮಾಡಿ – ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯ…

ಬೆಂಗಳೂರು,ಜೂ,25,2020(www.justkannada.in): ನೇಕಾರರಿಗೆ ಘೋಷಣೆ ಮಾಡಿರುವ ಪರಿಹಾರದ ಪ್ಯಾಕೇಜ್‍ನ್ನು ಶೀಘ್ರವೇ ಜಾರಿಗೆ ತಂದು ಹಣ ಬಿಡುಗಡೆ ಮಾಡುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನೇಕಾರರಿಗೆ ಘೋಷಣೆ ಮಾಡಿರುವ ಪರಿಹಾರದ ಹಣ ಬಿಡುಗಡೆಗೆ ಒತ್ತಡ ಹಾಕಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನೇಕಾರರ ಬದುಕು ದಿನೇ ದಿನೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದೆ. ಆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸುಮಾರು 2 ಲಕ್ಷ ಸಂಖ್ಯೆಯ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿವೆ. ಆದರೆ ನೈಜವಾಗಿ ಸುಮಾರು 7-8 ಲಕ್ಷ ಕುಟುಂಬಗಳು ಈ ವೃತ್ತಿಯನ್ನು ಅವಲಂಬಿಸಿ ಬದುಕುತ್ತಿವೆ. ಸರ್ಕಾರವು 20 ಎಚ್.ಪಿ ಗಿಂತ ಕಡಿಮೆ ವಿದ್ಯುತ್ ಬಳಸುವ ಮಗ್ಗಗಳನ್ನು ಮಾತ್ರ ಲೆಕ್ಕ ಹಾಕಿ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿದೆ. ಪ್ರತಿ ದಿನದ ದುಡಿಮೆಯನ್ನು ನಂಬಿ ಬದುಕುವ ನೇಕಾರ ಸಮುದಾಯವು ಸರ್ಕಾರದ ನೀತಿಗಳಿಂದಾಗಿ ಮತ್ತು ನಿರ್ಲಕ್ಷ ಧೋರಣೆಗಳಿಂದಾಗಿ ತೀವ್ರ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದಾಗಿ ಆಯಾ ದಿನದ ಅನ್ನವನ್ನು ಹೊಂದಿಸಿಕೊಳ್ಳಲಾಗದ ಪರಿಸ್ಥಿತಿ ಈ ಕುಟುಂಬಗಳಲ್ಲಿ ಉದ್ಭವವಾಗಿದೆ. ಕಳೆದ 7-8 ತಿಂಗಳಿನಿಂದ ತಯಾರಿಸಿದ ಸೀರೆ, ಬಟ್ಟೆ ಮತ್ತು ಇನ್ನಿತರೆ ಉತ್ಪನ್ನಗಳು ಮಾರಾಟವಾಗದೆ ಹಾಗೆ ಉಳಿದಿವೆ. ನೇಕಾರಿಕೆ ಬಿಟ್ಟು ಇತರೆ ಯಾವುದೆ ಕಸುಬುಗಳು ಗೊತ್ತಿಲ್ಲದೆ ಇರುವ ಇತರೆ ಕುಶಲಕರ್ಮಿ ಜಾತಿಗಳಂತೆ ನೇಕಾರಿಕೆಯೂ ಒಂದಾಗಿರುವುದರಿಂದ ಸಮಸ್ಯೆ ಇಷ್ಟೊಂದು ಬಿಗಡಾಯಿಸಲು ಕಾರಣವಾಗಿದೆ ಎಂದು ನೇಕಾರರ ಸಮಸ್ಯೆಗಳನ್ನ ಸಿದ್ದರಾಮಯ್ಯ ವಿವರಿಸಿದರು.

ಹಾಗೆಯೇ ಕಳೆದ 15 ದಿನಗಳಿಂದ ರಾಜ್ಯದ ಬೆಳಗಾವಿ, ದೊಡ್ಡಬಳ್ಳಾಪುರ, ಧಾರವಾಡ ಮುಂತಾದ ಕಡೆ 6 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆಘಾತಕಾರಿ ಮಾಹಿತಿ ಇದೆ. ಬಿಕ್ಕಟ್ಟಿನ ಆರಂಭ ಇದು. ದುಡಿದು ಬದುಕುವ ಇಂತಹ ಸಮುದಾಯಗಳ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ, ಇದು ಸರ್ಕಾರದ ವೈಫಲ್ಯದ ನೇರ ಫಲ. ಕಳೆದ ಐದಾರು ತಿಂಗಳಿಂದ ಸುಮಾರು 1000 ಕೋಟಿ ರೂಗಳ ಉತ್ಪನ್ನವನ್ನು ನೇಕಾರರು ಸಿದ್ಧ ಪಡಿಸಿದ್ದಾರೆ. ಇದರಲ್ಲಿ ಕೈ ಮಗ್ಗದಲ್ಲಿ ಉತ್ಪಾದಿಸಿದ ಬಟ್ಟೆಗಳ ಮೌಲ್ಯ ಸುಮಾರು 15 ಕೋಟಿ. ಉಳಿದದ್ದು ವಿದ್ಯುತ್ ಮಗ್ಗಗಳಲ್ಲಿ ತಯಾರಿಸಿದ್ದು. ಇದನ್ನು ಸರ್ಕಾರವೊಂದು ನಿಭಾಯಿಸುವುದಕ್ಕೆ ಯಾವ ಸವiಸ್ಯೆಯೂ ಇಲ್ಲ. ಅಂಗನವಾಡಿ ಕಾರ್ಯಕರ್ತರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಪಡಿತರ ವಿತರಣೆ ವ್ಯವಸ್ಥೆಗಳ ಮೂಲಕ ವಿತರಿಸಿ ನಿಭಾಯಿಸಬಹುದು. ಇದನ್ನು ಮಾಡುವುದಕ್ಕೆ ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.release-package-compensation-weavers-former-cm-siddaramaiah

ಇದರಲ್ಲಿ ಕೆಲವು ರೀತಿಯ ಸೀರೆಗಳನ್ನು ಪಾಲಿಶಿಂಗ್ ಮುಂತಾದ ಪ್ರಕ್ರಿಯೆ ಮಾಡಿ ಪರಿಪೂರ್ಣಗೊಳಿಸಬೇಕಾಗಿರುತ್ತದೆ. ಇಂಥದನ್ನು ಕೆ.ಎಸ್.ಐ.ಸಿ ಮೂಲಕ ನಿಭಾಯಿಸಬಹುದು ಹಾಗೂ ಎಂ.ಎಸ್.ಐ.ಎಲ್, ಕೆ.ಎಸ್.ಟಿ.ಐ.ಡಿ.ಸಿ. ಅಥವಾ ಕೆ.ಹೆಚ್.ಡಿ.ಸಿ. ಮೂಲಕವಾದರೂ ಖರೀದಿ ಮಾಡಿ ಮಾರುಕಟ್ಟೆ ಮಾಡುವ ಯೋಜನೆಯನ್ನು ರೂಪಿಸಬೇಕು. ಸರ್ಕಾರ ಈ ರೀತಿಯ ಉಪಕ್ರಮಗಳನ್ನು ತುರ್ತಾಗಿ ಅನುಸರಿಸಿ ನೇಕಾರರ ಸಂಕಷ್ಟಗಳನ್ನು ನಿಭಾಯಿಸಬೇಕು. ಇಲ್ಲದಿದ್ದರೆ ಗಂಭೀರ ಅನಾಹುತಗಳಿಗೆ ನೇಕಾರರ ಕುಟುಂಬಗಳನ್ನು ಸರ್ಕಾರವೇ ದೂಡಿದಂತಾಗುತ್ತದೆ.

ನೇಕಾರರ ಸಂಕಷ್ಟಗಳನ್ನು ನೀಗಿಸಲು ಕೃಷಿ ಕ್ಷೇತ್ರದಲ್ಲಿ ಅನುಸರಿಸಲಾಗುತ್ತಿರುವ ಆವರ್ತ ನಿಧಿ ಪದ್ಧತಿಯನ್ನು ನೇಕಾರಿಕೆಗೂ ಅಳವಡಿಸಿ ಬಿಕ್ಕಟ್ಟುಗಳು ಬಂದಾಗ ಉಪಯೋಗಿಸಲು ಕ್ರಮವಹಿಸಬೇಕು. ಹಾಗಾಗಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಶೀಘ್ರವಾಗಿ ಅವರ್ತ ನಿಧಿಯನ್ನು ಸ್ಥಾಪಿಸಿ ಉಪಯೋಗಿಸಬೇಕು.

ಸರ್ಕಾರ ಪ್ರತಿ ನೇಕಾರರ ಕುಟುಂಬಕ್ಕೆ ರೂ.2,000/- ಗಳನ್ನು ನೀಡುವುದಾಗಿ ಘೋಷಿಸಿ 2 ತಿಂಗಳು ಕಳೆದರೂ ಇದುವರೆಗೆ ಒಂದೇ ಒಂದು ರೂಪಾಯಿಯನ್ನು ಕೂಡ ನೇಕಾರರ ಕುಟುಂಬಗಳಿಗೆ ತಲುಪಿಲ್ಲ. ಸರ್ಕಾರವು ಸಂಪೂರ್ಣವಾಗಿ ನೇಕಾರರನ್ನು ನಿರ್ಲಕ್ಷಿಸಿದೆ ಮತ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಹಾಗಾಗಿ ಅತ್ಯಂತ ತುರ್ತಾಗಿ ಹಣ ಬಿಡುಗಡೆ ಮಾಡಬೇಕು.

ಮುಖ್ಯಮಂತ್ರಿಗಳು ನೇಕಾರರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಆದರೆ ಆಗಸ್ಟ್-2019 ರಿಂದ ಮಾರ್ಚ್-2020 ರವರೆಗೆ ಮನ್ನಾ ಮಾಡಿದ್ದು 4,500 ಜನರ ಸುಮಾರು ರೂ.18.05 ಕೋಟಿ ಮಾತ್ರ. ಏಪ್ರಿಲ್ 01 ರಿಂದ ಈವರೆಗೆ ಕೇವಲ 6,000 ಜನರ ರೂ.26 ಕೋಟಿಗಳನ್ನು ಮಾತ್ರ ಮನ್ನಾ ಮಾಡಲಾಗಿದೆ. ಆದುದರಿಂದ, ಶೀಘ್ರವಾಗಿ ಬಾಕಿ ಉಳಿದಿರುವ ಎಲ್ಲಾ ನೇಕಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಕೇಂದ್ರ ಸರ್ಕಾರವು ದೊಡ್ಡ ದೊಡ್ಡ ಬಂಡವಾಳಿಗರ ಲಕ್ಷಾಂತರ ಕೋಟಿ ಸಾಲವನ್ನು ಕೈಬಿಡುತ್ತಿರುವಾಗ ಬಡವರ ಸಾಲ ಮನ್ನಾ ಮಾಡುವುದು ಅಪರಾಧವಲ್ಲ.

ಈ ಹಿಂದೆ ನಾವು ಒತ್ತಾಯ ಮಾಡಿದಂತೆ ಸಂಕಷ್ಟದಲ್ಲಿರುವ ನೇಕಾರರು ಸೇರಿದಂತೆ ಪ್ರತಿ ಕುಟುಂಬಕ್ಕೆ ಕನಿಷ್ಠ ರೂ.10,000/-ಗಳನ್ನು ತುರ್ತಾಗಿ ನೀಡಬೇಕು ಮತ್ತು ಕೊರೋನಾ ಬಿಕ್ಕಟ್ಟು ಬಗೆಹರಿಯುವವರೆಗೆ ಉಚಿತವಾಗಿ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡಿ ಸಂರಕ್ಷಿಸಬೇಕು. ನೇಕಾರರು ತಯಾರಿಸಿದ ಉತ್ಪನ್ನಗಳನ್ನು ಆಧರಿಸಿ ಅವುಗಳ ಮೇಲೆ ಸಾಲ ಸೌಲಭ್ಯವನ್ನು ತುರ್ತಾಗಿ ಕಲ್ಪಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕು.

ವಿದ್ಯುತ್ ಶುಲ್ಕವನ್ನು ಕೂಡಲೇ ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಬೇಕು ಮತ್ತು ಛಿದ್ರಗೊಂಡಿರುವ ತಮ್ಮ ಬದುಕನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ನೇಕಾರರಿಗೆ ಸಹಕಾರಿ ಮತ್ತು ಇನ್ನಿತರೆ ಬ್ಯಾಂಕುಗಳ ಮೂಲಕ ಸುಲಭವಾಗಿ ಸಾಲ ಸಿಗುವಂತೆ ಮಾಡಬೇಕು. ಕಚ್ಚಾ ವಸ್ತುಗಳು ಸುಲಭ ದರದಲ್ಲಿ ಕೈಗೆಟುಕುವಂತೆ ಮಾಡಬೇಕು ಮತ್ತು ಜಿ.ಎಸ್.ಟಿ. ಮುಂತಾದವುಗಳ ಬಾಕಿ ಮೊತ್ತದ ವಸೂಲಾತಿಯನ್ನು ಸಂಪೂರ್ಣವಾಗಿ ಸಮಸ್ಯೆ ಬಗೆಹರಿಯುವವರೆಗೆ ಕೈಬಿಡಬೇಕು.

ಈ ಎಲ್ಲಾ ಒತ್ತಾಯಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ನೇಕಾರರ ಸಂಕಷ್ಟಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Key words: Release -package -compensation – weavers-Former CM- Siddaramaiah