ವ್ಯಾಲೆಂಟೈನ್ಸ್ ಡೇ ದಿನವೇ ಅತ್ಯಾಚಾರ: ನ್ಯಾಯ ಸಿಗದೆ ಯುವತಿ ಆತ್ಮಹತ್ಯೆಗೆ ಶರಣು.

ಮೈಸೂರು,ಮಾರ್ಚ್,12,2024(www.justkannada.in):  ವ್ಯಾಲೆಂಟೈನ್ಸ್ ಡೇ ದಿನವೇ ಅತ್ಯಾಚಾರಕ್ಕೊಳಗಾದ ಯುವತಿ ನ್ಯಾಯ ಸಿಗದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಂಜಿತಾ(19) ಆತ್ಮಹತ್ಯೆಗೆ ಶರಣಾದ ಯುವತಿ. ಅದೇ ಗ್ರಾಮದ ವೇಣುಗೋಪಾಲ್ (35)  ಮತ್ತು ಈತನಿಗೆ ಸಹಕರಿಸಿದ ಮಹೇಶ್ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ CRPC U/S 438, IPC U/S 366, 376, 417, 109 ಅಡಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಘಟನೆ ಹಿನ್ನೆಲೆ..

ಫೆಬ್ರವರಿ 14 ವ್ಯಾಲೆಂಟೈನ್ಸ್ ದಿನ ರಂಜಿತಾಳನ್ನ ಅದೇ ಗ್ರಾಮದ ಆರೋಪಿ ವೇಣುಗೋಪಾಲ್ ತನ್ನ ಬೊಲೆರೋ ವಾಹನದಲ್ಲಿ ಕರೆದೊಯ್ದಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ಬೊಲೆರೋದಲ್ಲಿ ಕೇರಳಾಗೆ ಕರೆದೊಯ್ದು ಅತ್ಯಾಚಾರವೆಸಗಿ ನಂತರ ಮೈಸೂರಿಗೆ ಕರೆತಂದು ಕೈಗೆ ಒಂದು ಸಾವಿರ ನೀಡಿ ಮನೆಗೆ ಹೋಗುವಂತೆ ತಿಳಿಸಿದ್ದಾನೆ. ಘಟನೆಯಿಂದ ನೊಂದ ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದು ಆದರೆ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.  ಇದಾದ ಬಳಿಕ ಯುವತಿ ಎಸ್ಪಿಗೆ ದೂರು ನೀಡಿದ್ದು ಎಸ್ಪಿ ಸೂಚನೆ ಮೇರೆಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 21ರಂದು ಪ್ರಕರಣ ದಾಖಲಾಗಿದೆ.

ಯುವತಿಗೆ ಫೆಬ್ರವರಿ 18 ರಂದು ಬೇರೊಬ್ಬರ ಜೊತೆ ಮದುವೆ ಫಿಕ್ಸ್ ಆಗಿತ್ತು. ಇನ್ನು  ಘಟನೆ ನಡೆದು ಸುಮಾರು ಒಂದು ತಿಂಗಳಾದರೂ  ಆರೋಪಿಗಳನ್ನ ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ತನಗೆ ನ್ಯಾಯ ದೊರೆಯದ ಹಿನ್ನಲೆ ಬೇಸತ್ತ ಯುವತಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಆರೋಪಿಯನ್ನ ಬಂಧಿಸುವಲ್ಲಿ ವಿಫಲರಾದ ಪೊಲೀಸರ ವಿರುದ್ದ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Rape – Valentine’s Day- Young woman -commits suicide –mysore