ಮಂತ್ರಿಗಿರಿಗಾಗಿ ಟೆಂಪಲ್ ರನ್: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ರಮೇಶ್ ಜಾರಕಿಹೊಳಿ ಅಂಡ್ ಟೀಂ…

ಮೈಸೂರು,ಜ,28,2020(www.justkannada.in):  ಈ ತಿಂಗಳೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದು ಈ ಸಂಬಂಧ ರಾಜಕೀಯ ಚಟುವಟಿಕೆ ಬಿರುಸುಗೊಂಡಿರುವ ಬೆನ್ನಲ್ಲೆ ಸಚಿವಾಕಾಂಕ್ಷಿಗಳು ಮಂತ್ರಿಗಿರಿಗಾಗಿ ಟೆಂಪಲ್ ರನ್ ಆರಂಭಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಶಾಸಕ ರಮೇಶ್ ಜಾರಕಿಹೊಳಿ ಅಂಡ್ ಟೀಂ ಇಂದು ನಂಜನಗೂಡಿನ ನಂಜುಂಡೇಶ್ವರ ಮೊರೆ ಹೋಗಿದ್ದಾರೆ. ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ, ಮಾಜಿ ಶಾಸಕ ಆರ್.ಶಂಕರ್, ಶ್ರೀಮಂತ ಪಾಟೀಲ್ ಮೈಸೂರು ಜಿಲ್ಲೆ  ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಧಾನಿ ಮೋದಿ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪರ ಹೆಸರಿನಲ್ಲಿ ಪೂಜೆ ಮಾಡಿಸಿದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ, ನಾವು ಕೋರ್ಟ್ ತೀರ್ಪಿನ ಸಂದರ್ಭದಲ್ಲಿ ನಂಜುಂಡನ ಬಳಿ ಬೇಡಿಕೊಂಡಿದ್ದೇವು. ತೀರ್ಪು ಏನೇ ಬಂದರೂ ಮತ್ತೆ ಬರ್ತಿವಿ ಅಂತ ಪ್ರಾರ್ಥನೆ ಮಾಡಿದ್ದೇವೆ. ಈಗ ಅದು ಆಗಿದೆ.  ಅದಕ್ಕೆ ಪೂಜೆ ಮಾಡಿಸಲು ಬಂದಿದ್ದೇವೆ ಎಂದರು.

ಬಳಿಕ ಮಾತನಾಡಿದ ಆರ್.ಶಂಕರ್  ಸೋತವರಿಗೆ ಸಚಿವ ಸ್ಥಾನ ಇಲ್ಲ ಅನ್ನೋದು ನನಗೆ ಅಪ್ಲೈ ಆಗೋಲ್ಲ.ಪಕ್ಷಕ್ಕೆ ಬಂದಾಗ ನನಗೆ ಸಚಿವನನ್ನಾಗಿ ಮಾಡ್ತಿನಿ ಅಂದಿದ್ದಾರೆ. ಚುನಾವಣೆ ನಿಲ್ಲಬೇಡಿ ಅನ್ನೋ ಸಲಹೆ ಕೊಟ್ಟಿದ್ದರು ಅದರಂತೆ ನಡೆದುಕೊಂಡೆ. ಈಗಲೂ ಅವರ ಮಾತು ಕೇಳುತ್ತೇ‌ನೆ. ನೋಡೋಣ ಸಿಎಂ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅಂತ. ನನ್ನನ್ನ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡ್ತಿನಿ ಅಂದಿದ್ರು. ಈಗ ಆಗದಿದ್ರು ಸಮಯ ಬಂದಾಗ ನೋಡೋಣ ಏನ್ ಆಗುತ್ತೆ ಅಂತ ಎಂದು ತಿಳಿಸಿದರು.

ಇನ್ನು ರಮೇಶ್ ಜಾರಕಿಹೊಳಿ ಅಂಡ್ ಟೀಂ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಸಚಿವಕಾಂಕ್ಷಿಗಳು ಬೇಗ ಸಂಪುಟ ವಿಸ್ತರಣೆಯಾಗಲಿ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Key words: Ramesh Jarkiiholi -Team –visit- mysore-nanjanagudu- Srikantheshwara Temple