ವಿಧಾನ ಪರಿಷತ್ ಚುನಾವಣೆ: ಸ್ವಕ್ಷೇತ್ರದಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆ !

ಲಖನೌ, ಡಿಸೆಂಬರ್ 06, 2020 (www.justkannada.in): ವಿಧಾನಪರಿಷತ್ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯುಂಟಾಗಿದ್ದು, ಪಕ್ಷಕ್ಕೆ ಮುಜುಗರವಾಗಿದೆ. ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗಳು ಸಮಾಜವಾದಿ ಪಕ್ಷದ ಅಭ್ಯರ್ಥಿಗಳೆದುರು ಸೋತಿದ್ದಾರೆ.

ಸಮಾಜವಾದಿ ಪಕ್ಷದ ಅಶುತೋಶ್ ಸಿನ್ಹಾ ವಾರಾಣಸಿಯ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ, ಮತ್ತೋರ್ವ ಎಸ್ ಪಿ ಅಭ್ಯರ್ಥಿ ಲಾಲ್ ಬಿಹಾರಿ ಯಾದವ್ ಶಿಕ್ಷಕರ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ.

ಈ ಗೆಲುವು ಪಕ್ಷಕ್ಕೆ ಅತ್ಯಂತ ದೊಡ್ಡ ಮಟ್ಟದ ಗೆಲುವಾಗಿದೆ, ಫಲಿತಾಂಶದ ಬಗ್ಗೆ ಸಂತಸ ಉಂಟಾಗಿದೆ ಎಂದು ಲಾಲ್ ಬಿಹಾರಿ ಯಾದವ್ ಪ್ರತಿಕ್ರಿಯಿಸಿದ್ದಾರೆ.