Sunday, September 20, 2026

BDA Apartments

ಲಸಿಕಾಕರಣದಿಂದ ಮಾತ್ರ ರಕ್ಷಣೆ ಸಾಧ್ಯ- ಸಚಿವ ಡಾ.ಕೆ.ಸುಧಾಕರ್ BDA JK_Adv BDA Adv
Home Front Page ಲಸಿಕಾಕರಣದಿಂದ ಮಾತ್ರ ರಕ್ಷಣೆ ಸಾಧ್ಯ- ಸಚಿವ ಡಾ.ಕೆ.ಸುಧಾಕರ್.

ಲಸಿಕಾಕರಣದಿಂದ ಮಾತ್ರ ರಕ್ಷಣೆ ಸಾಧ್ಯ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು, ಜನವರಿ 14,2022(www.justkannada.in): ಲಸಿಕಾಕರಣದಿಂದ ಮಾತ್ರ ಕೋವಿಡ್ ನಿಂದ ದೂರವಿರಲು ಸಾಧ್ಯ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಜನರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಈ ಉತ್ತರಾಯಣದ ಪುಣ್ಯ ಕಾಲದಲ್ಲಿ ಎಲ್ಲರಿಗೂ ಸಂತಸ, ಆರೋಗ್ಯ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಇಂದು ಮೂರನೇ ಕೋವಿಡ್ ಲಸಿಕೆ ಪಡೆದಿದ್ದಾರೆ. 9 ತಿಂಗಳ ಹಿಂದೆ ಅವರು ಎರಡು ಡೋಸ್ ಪಡೆದಿದ್ದರು. ಬಿಎಂಸಿಆರ್ ಐ ನಲ್ಲಿ ಈವರೆಗೆ 83,937 ಡೋಸ್ ಗಳನ್ನು ನೀಡಲಾಗಿದೆ. ಈ ಪೈಕಿ 420 ಬಾಣಂತಿ, 1,179 ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ ಸೇರಿದಂತೆ ಅರ್ಹರು ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆಯಬೇಕು. ಲಸಿಕಾಕರಣ ಒಂದರಿಂದಲೇ ರಕ್ಷಣೆ ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಪ್ರಧಾನಿಗಳು ಕೂಡ ಅದನ್ನೇ ಹೇಳಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯೋಣ ಎಂದರು.

ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಸ್ವಾಗತಿಸುತ್ತೇನೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಪೂರಕವಾಗಿದೆ. ಕೋವಿಡ್ ಪ್ರಕರಣ ಹೆಚ್ಚಿರುವ ಈ ಸಮಯದಲ್ಲಿ ಇದು ಸೂಕ್ತವಾಗಿದೆ. ಕಾಂಗ್ರೆಸ್ ನ ಬೇಜವಾಬ್ದಾರಿ ನಡೆಯನ್ನು ಜನ ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ, ಎಂದರು.

ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ 5-6% ರೋಗಿಗಳು ಮಾತ್ರ ಆಸ್ಪತ್ರೆ ಸೇರುತ್ತಿದ್ದಾರೆ. ನರ್ಸ್ ಗಳು ಕೂಡಾ ಸೋಂಕಿಗೊಳಗಾಗುತ್ತಿರುವುದು ಆತಂಕದ ವಿಚಾರವಾಗಿದೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ. ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್ ಗೆ ಹೋಗಿಲ್ಲ ಎಂದು ತಜ್ಞರು ಕೂಡಾ ಹೇಳಿದ್ದಾರೆ. ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುವ ಸಾಧ್ಯತೆ ಇದೆ. 3-4ನೇ ವಾರದಿಂದ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ ಎಂದರು.

ಕಳೆದ ವಾರದಿಂದ ವೀಕೆಂಡ್ ನಿರ್ಬಂಧ ತರಲಾಗಿದೆ. ಆದರೆ 7 ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಬಾರಿಯ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಇನ್ನು ಸ್ವಲ್ಪ ದಿನದಲ್ಲಿ ವೀಕೆಂಡ್ ಕರ್ಫ್ಯೂ ನಿಂದಾದ ಫಲಿತಾಂಶ ದೊರೆಯಬಹುದು ಎಂದರು.

Key words: Only -protection – vaccination – possible-Minister -Dr. K. Sudhakar