ನಿವೃತ್ತಿಗೆ ತೀರ್ಮಾನ: ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ- ಸಿಎಂ ಸಿದ್ದರಾಮಯ್ಯ ಘೋಷಣೆ.

ಮೈಸೂರು,ಏಪ್ರಿಲ್,1,2024 (www.justkannada.in): ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನಗೆ ಆತಂಕ ಇದ್ದರೆ ತಾನೇ ಟೆನ್ಷನ್. ನನಗೆ ಯಾವ ಆತಂಕವೂ ಇಲ್ಲ. ಹೀಗಾಗಿ ನಾನು ಕೂಲ್ ಆಗಿ ಇದ್ದೇನೆ. ಅದು ಕೂಡ ನನ್ನ ಆರೋಗ್ಯದ ಗುಟ್ಟು. ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳಿದರು. ಆದರೆ ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವಯಸ್ಸು ಆಗಿ ಬಿಡುತ್ತದೆ. 83 ವಯಸ್ಸು ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತೆ‌. ಇದಕ್ಕೆ ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಬೇಕಾದರೆ ಕೋರ್ಟ್ ಗೆ ಹೋಗಲಿ.

ಸಚಿವ ನಾಗೇಂದ್ರ ಹಾಗೂ ಸಂತೋಷ್ ಲಾಡ್ ವಿರುದ್ಧ ಜನಾರ್ಧನ್ ರೆಡ್ಡಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಜನಾರ್ಧನ ರೆಡ್ಡಿ  ಬೇಕಾದರೆ ಕೋರ್ಟ್ ಗೆ ಹೋಗಲಿ. ನಾನು ಹೋರಾಟ ಮಾಡಿದ್ದು  ಸಂತೋಷ್ ಹೆಗ್ಡೆ ಅವರ ವರದಿ ಆಧಾರದ ಮೇಲೆ. ಸಂತೋಷ್ ಹೆಗ್ಡೆ ವರದಿಯಲ್ಲಿ ಇವರ ಹೆಸರು ಇತ್ತಾ..? ಅವರ ಹೆಸರು ಇಲ್ಲದ ಮೇಲೆ ಸುಮ್ಮನೆ ಯಾಕೆ ಆರೋಪ‌ ಮಾಡುತ್ತಿದ್ದಾರೆ. ಈಗ ಯಾಕೆ ಆ ಕುರಿತು ಪ್ರಸ್ತಾಪ ಮಾಡ್ತಾರೆ. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆಗ ಮಾತನಾಡದವರು ಈಗ ಏಕೆ ಮಾತನಾಡುತ್ತಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಲು ಹೋಗಿದ್ರು ಅಂತ ಸಂತೋಷ್ ಹೆಗ್ಢೆ ವರದಿ ಕೊಟ್ಟಿದ್ದರು. ಈಗ ಅವರು ಬೇಕಾದರೆ ಅವರು ಕೋರ್ಟ್ ಗೆ ಹೋಗಲಿ ತಿರುಗೇಟು‌ ನೀಡಿದರು.

ಅಮಿತ್ ಶಾಗೆ ಗೂಂಡಾ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಮಗನಿಗೆ ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದೇವೆ. ನಾನು ಆ ಬಗ್ಗೆ ಮತ್ತೇನು ಪ್ರತಿಕ್ರಿಯೆ ಕೊಡುವುದಿಲ್ಲ. ನೋಟೀಸ್ ನಲ್ಲಿ ಏನಿದೆ ಎಂಬ ಬಗ್ಗೆ ನನ್ನ ಮಗನಿಗೆ ಗೊತ್ತು ಎಂದರು.

ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂದ ಮಾಜಿ ಸಿಎಂ ಎಚ್.ಡಿ.ಕೆ ಹೇಳಿಕೆಗೆ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ, ಮಗನನ್ನ ನಿಲ್ಲಿಸುವಾಗ ಯಾರ ಇಚ್ಛೆ ಇತ್ತು. ಈಗ ದೇವರು ಎಂದರೆ ಆಗ ಯಾರಿದ್ದರು. ಸಿಎಂ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತಿದ್ದಾನೆ. ಈ ಬಾರಿ ಜೆಡಿಎಸ್ ನವರು ಮೂರಕ್ಕೆ ಮೂರರಲ್ಲೂ ಸೋಲುತ್ತಾರೆ. ಕಳೆದ ಬಾರಿ ಮೈಸೂರಿನಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಹಾಕಿದ್ದು ಯಾವ ಚೂರಿ. ಮೈತ್ರಿ ಧರ್ಮ ಎಂದರೆ ಎಲ್ಲಾ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದರು ಎಂದರೇ ಅದರಲ್ಲಿ ಯಾವ ನ್ಯಾಯ ಇದೇ ಹೇಳಿ. ಕಳೆದ ಬಾರಿ ನಾನು ಹೋಗಿದ್ದಕ್ಕೆ ಹಾಸನದಲ್ಲಿ ಪ್ರಜ್ವಲ್ ಗೆದಿದ್ದು. ಈ ಬಾರಿಯೂ ಹಾಸನಕ್ಕೆ ಹೋಗುತ್ತೇನೆ. ಪ್ರಜ್ವಲ್ ನನ್ನು ಸೋಲಿಸುತ್ತೇನೆ. ಪ್ರಜ್ವಲ್ ಸೋಲಿಸಲೇಬೇಕೆಂದು ನಮ್ಮವರು ಪಣ ತೊಟ್ಟಿದ್ದಾರೆ. ಪ್ರಜ್ವಲ್ ಸೋಲುತ್ತಾನೆ ಎಂದು ಭವಿಷ್ಯ ನುಡಿದರು.

ವರುಣದಲ್ಲಿ ಭಾವನಾತ್ಮಕವಾಗಿ ಮತ ಕೇಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅದೇನು ಭಾವನಾತ್ಮಕ ಏನು ಅಲ್ಲ. ಹೆಚ್ಚು ಲೀಡ್ ಬೇಕು ಎಂದು ಸ್ವಕ್ಷೇತ್ರದವರನ್ನ ಕೇಳಿದ್ದೇನೆ ಅಷ್ಟೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಬರಿ 9 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದನ್ನ 60 ಸಾವಿರ ಮುಟ್ಟಿಸಿ ಎಂದು ಹೇಳಿದ್ದೇನೆ. ಅದಕ್ಕೆ ಬೇರೆ ರೀತಿಯ ವಿಶ್ಲೇಷಣೆ ಏನು ಇಲ್ಲ. ಅದು ನನ್ಮ ಸಹಜವಾದ ಮಾತುಗಳು ಅಷ್ಟೇ. ಬಿಜೆಪಿವರು ಬಂದರೇ ಬಡವರು ಕಾರ್ಯಕ್ರಮಗಳು ನಿಂತು ಹೋಗುತ್ತವೆ‌. ಹೀಗಾಗಿ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ. ಮೈಸೂರು ಚಾಮರಾಜನಗರ ಮಾತ್ರವಲ್ಲ 28 ಕ್ಷೇತ್ರ ವಿಚಾರದಲ್ಲೂ ನಾನು ಗಂಭೀರವಾಗಿದ್ದೇನೆ. ಮತ್ತೊಂದು ಬಾರಿ ಈ ಕಡೆ ಭಾಗಕ್ಕೆ ಪ್ರವಾಸಕ್ಕೆ ಬರುತ್ತೇನೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ. ಸುಮ್ಮನೆ ಕೆಲವೊಮ್ಮೆ ಊಹಾ ಪೋಹದ ವರದಿ ಬರೆಯುತ್ತಾರೆ. ಕೆಲ ಒಂದೆರಡು ಕಡೆ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವಂತೆ ಹೇಳಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವ ಹಣದ ಸಮಸ್ಯೆ ಇಲ್ಲ. ಚುನಾವಣೆ ಇರುವುದರಿಂದ‌ ಸಭೆ ಮಾಡಲು ಆಗುತ್ತಿಲ್ಲ ಅಷ್ಟೆ. ಯಾವ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: not, contest, election, Siddaramaiah