ಬೆಂಬಲಿಗರು ಹಾಗೂ ಮತದಾರರಿಗೆ ಸುದೀರ್ಘ ಪತ್ರ: ರಾಜೀನಾಮೆಗೆ ಕಾರಣ ತಿಳಿಸಿದ ರೆಬಲ್ ಶಾಸಕ ಶಿವರಾಂ ಹೆಬ್ಬಾರ್

kannada t-shirts

ಕಾರವಾರ:ಜುಲೈ-15:(www.justkannada.in) ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರು ತಮ್ಮ ಬೆಂಬಲಿಗರು ಹಾಗೂ ಮತದಾರರನ್ನು ಉದ್ದೇಶಿಸಿ ಪೇಸ್‍ಬುಕ್‍ನಲ್ಲಿ ಸುರ್ದೀಘವಾದ ಪತ್ರ ಬರೆದಿದ್ದಾರೆ. ಈ ಮೂಲಕ ತಮ್ಮ ರಾಜಿನಾಮೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ ಯಾಚಿಸುತ್ತಾ ಇಂತಹ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ, ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಬರೆದಿದ್ದಾರೆ. ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನು ತರವಲ್ಲಿ ಯಶಸ್ಸು ಕಾಣಲಿಲ್ಲ. ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರು ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವದಾನ ತೋರಿಸಲಿಲ್ಲ ಹಾಗೂ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಿಂತೂ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನೂ ತೋರಲಿಲ್ಲ.

ನಮ್ಮದು ಮಲೆನಾಡು ಜಿಲ್ಲೆಗಳಲ್ಲಿಯೇ ಭೌಗೋಳಿಕವಾಗಿ ಅತ್ಯಂತ ದೊಡ್ಡ ಕ್ಷೇತ್ರ. ಕಾರ್ಯಕರ್ತರು, ಸಾರ್ವಜನಿಕರು, ವಿಶೇಷವಾಗಿ ನೀರಾವರಿ, ರಸ್ತೆಗಳು, ಆಸ್ಪತ್ರೆ ಹೀಗೆ ಹಲವು ಅರ್ಹ ಬೇಡಿಕೆ ಇದ್ದರೂ ಅದರ ಬಗ್ಗೆ ಸರ್ಕಾರದಿಂದ ಯಾವ ಬೆಂಬಲವೂ ಸಿಗುತ್ತಿಲ್ಲ. ಹೀಗೆ ಮುಂದುವರಿದರೆ ಅಭಿವೃದ್ಧಿಯ ಹೆಸರಲ್ಲಿ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಮುಖ ತೋರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ನನ್ನ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡ ಮಾಹತ್ವಾಕಾಂಕ್ಷಿ ಯೋಜನೆಯಾದ ರೈತರಿಗೆ ಹಾಗೂ ಕೃಷಿಕರಿಗೆ ಅತ್ಯಂತ ಮಹತ್ವದ ಹಲವಾರು ಕೆರೆ ತುಂಬುವ ಹಾಗೂ ಏತ ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸುವುದಕ್ಕೆ ಹಾಗೂ ಮುಂದುವರಿದ ಎರಡನೇ ಹಂತದ ಯೋಜನೆಗೆ ಎಷ್ಟು ಬಾರಿ ಕೋರಿದರೂ ಈ ಸರ್ಕಾರದಿಂದ ಸರಿಯಾದ ಬೆಂಬಲ ಸಿಗಲಿಲ್ಲ.

ನೀವೆಲ್ಲರೂ ನನ್ನನ್ನು 15-20 ವರ್ಷದಿಂದ ಹತ್ತಿರದಿಂದ ನೋಡಿದ್ದೀರಿ ಹಾಗೂ ನನ್ನ ವ್ಯಕ್ತಿತ್ವವನ್ನು ಬಲ್ಲಿರಿ. ಹಗಲು-ರಾತ್ರಿ ನನ್ನ ಪರವಾಗಿ ಹಲವರು ಚುನಾವಣೆಯಲ್ಲಿ ಶ್ರಮಿಸಿದ್ದೀರಿ. ನಿಮ್ಮ ಶ್ರಮವನ್ನು ನಾನೆಂದೂ ಮರೆಯಲಾರೆ. ನನ್ನ ಕಾರ್ಯಕರ್ತರ ಹಾಗೂ ಮತದಾರರ ಬೆಂಬಲದಿಂದ ಎರಡನೇ ಬಾರಿ ಶಾಸಕನಾಗಿದ್ದೇನೆ. ನನಗಿಂತ ಮೊದಲು ಈ ಪ್ರದೇಶಕ್ಕೆ ಬೇರೆಯವರು ಶಾಸಕರಾಗಿದ್ದಾರೆ ಹಾಗೂ ನನ್ನ ನಂತರವೂ ಆಗುತ್ತಾರೆ. ಆದರೆ ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕ್ಷೇತ್ರದ ಜನರಿಗೆ, ರೈತರಿಗೆ ಬಹುಕಾಲ ಮುಂದಿನ ಪೀಳಿಗೆಯೂ ನೆನಪಿಡುವಂತಹ ಶಾಶ್ವತ ಬೃಹತ್ ನೀರಾವರಿ ಯೋಜನೆಗಳನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೇನೆ. ಬೆಲೆ ತೆತ್ತಾದರೂ ಅದನ್ನು ಪೂರ್ಣಗೊಳಿಸಿ ನನ್ನದೇ ಆದ ಅಭಿವೃದ್ಧಿಯ ಹೆಜ್ಜೆ ಗುರುತನ್ನು ಬಿಡುವ ಅಚಲ ವಿಶ್ವಾಸ ಹೊಂದಿದ್ದೇನೆ.

ನನ್ನ ಕ್ಷೇತ್ರದ ಹಿತಾಸಕ್ತಿ ಬಿಟ್ಟು ಯಾವುದೇ ಹಣ, ಆಸೆ, ಆಮಿಷಗಳಿಗೆ ನನ್ನ ನೈತಿಕತೆಯನ್ನು ಮಾರಿಕೊಳ್ಳುವ ವ್ಯಕ್ತಿತ್ವ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ಪ್ರತಿದಿನ ಎರಡೂ ಪಕ್ಷಗಳ ನಾಯಕರ ಕಚ್ಚಾಟ ಹಾಗೂ ಸ್ವ-ಹಿತಾಸಕ್ತಿಗಳಿಂದಲೇ ಸುದ್ದಿಯಲಿತ್ತು. ಯಾವುದೇ ಅಭಿವೃದ್ಧಿ ಕೆಲಸಗಳಾಗದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ನನ್ನ ರಾಜೀನಾಮೆ ನಿನ್ನೆ-ಮೊನ್ನೆ ನಡೆದ ಹಠಾತ್ ಬೆಳವಣಿಗೆಯಲ್ಲ. ಸತತ 15 ತಿಂಗಳು ಅಳೆದು-ತೂಗಿ, ಪಕ್ಷದ/ಸರ್ಕಾರದ ಪರಿಮಿತಿಯಲ್ಲಿ ಎಲ್ಲಾ ಪ್ರಯತ್ನಗಳೂ ಮುಗಿದ ಮೇಲೆ 3 ತಿಂಗಳು ಮುಂಚಿತವಾಗಿಯೇ ಮುಖಂಡರಿಗೆ ತಿಳಿಸಿದ್ದೇನೆ. ಅನಿವಾರ್ಯವಾಗಿ ಸರ್ಕಾರದ ಧೋರಣೆಯಿಂದ ಬೇಸತ್ತಿದ್ದ ಹಲವು ಸಮಾನ ಮನಸ್ಕ ಶಾಸಕರೊಡನೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬಂದಿರುತ್ತೇನೆ.ಆದರೆ ಇನ್ನೂ ಪಕ್ಷದಲ್ಲಿಯೇ ಇದ್ದೇನೆ. ಅತೀ ಶೀಘ್ರದಲ್ಲಿಯೇ ಕ್ಷೇತ್ರಾದ್ಯಂತ ಸಂಚರಿಸಿ ಎಲ್ಲ ಕಾರ್ಯಕರ್ತರಲ್ಲಿ ಈ ಎಲ್ಲ ವಿಷಯ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಆದರೂ ಈ ಎಲ್ಲಾ ರಾಜಕೀಯ ಬೆಳವಣಿಗೆಗಳು ಕ್ಷೇತ್ರದಿಂದ 8-10 ದಿನ ಹೊರಗುಳಿಯಬೇಕಾದ ಅನಿವಾರ್ಯತೆ ಎಲ್ಲದಕ್ಕೂ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಇನ್ನೂ ಹೆಚ್ಚಿನ ರೀತಿಯ ಅಭಿವೃದ್ಧಿ ಕೆಲಸಗಳು ಮುಂದುವರಿಯಲಿದೆ ಎಂಬ ಭರವಸೆಯೊಂದಿಗೆ ನಿಮ್ಮ ಸಹಕಾರವಿರಲಿ ಎಂದು ಬರೆದುಕೊಂಡಿದ್ದಾರೆ.

ಬೆಂಬಲಿಗರು ಹಾಗೂ ಮತದಾರರಿಗೆ ಸುದೀರ್ಘ ಪತ್ರ: ರಾಜೀನಾಮೆಗೆ ಕಾರಣ ತಿಳಿಸಿದ ರೆಬಲ್ ಶಾಸಕ ಶಿವರಾಂ ಹೆಬ್ಬಾರ್
Rebel MLA,Shivaram hebbar,Resignation,Voters,letter

website developers in mysore