ನರೇಂದ್ರ ಮೋದಿ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿಯಂತೆ ವರ್ತನೆ- ಸಿಎಂ ಸಿದ್ದರಾಮಯ್ಯ ಗುಡುಗು.

ಚಾಮರಾಜನಗರ, ಏಪ್ರಿಲ್ 12,2024 (www.justkannada.in):  ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಕೊಳ್ಳೇಗಾಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಪ್ರಜಾಧ್ವನಿ -02 ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.

ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಬೇಕು.  ಮುಸಲೋನಿ, ಹಿಟ್ಲರ್ ಸಿದ್ಧಾಂತದಲ್ಲಿ ಬಿಜೆಪಿ ನಂಬಿಕೆ ಇಟ್ಟಿದ್ದಾರೆ. ಈ ದೇಶದಲ್ಲಿ ಸಂವಿಧಾನ ಜಾರಿಯಾದಾಗ ಅದನ್ನು ವಿರೋಧಿಸಿದ್ದು ಆರ್.ಎಸ್.ಎಸ್.  ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಕಾಂಗ್ರೆಸ್ ಸೋಲಿಸಬೇಕು ಎನ್ನುವುದೊಂದೇ ಗುರಿಯಿಂದ ಒಟ್ಟಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 43 % ಮತಗಳನ್ನು ಪಡೆದು 136 ಸ್ಥಾನಗಳನ್ನು ಪಡೆದಿದ್ದೇವೆ. ಅಧಿಕಾರದಲ್ಲಿದ್ದ ವಿರೋಧ ಪಕ್ಷ ಕೇವಲ 66 ಸ್ಥಾನಗಳನ್ನು ಪಡೆಯಿತು.  ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷ 19 ಸ್ಥಾನಗಳನ್ನು ಪಡೆಯಿತು. ಈಗ ಅವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಒಟ್ಟುಗೂಡಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲದೇ, ಕಾಂಗ್ರೆಸ್ ಸೋಲಿಸಬೇಕು ಎನ್ನುವುದೊಂದೇ ಗುರಿ. ¨ಬಡವರು, ರೈತರು, ದಲಿತರು, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರು ಯಾವ ಸಾಧನೆಯನ್ನೂ ಮಾಡಿಲ್ಲ. ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಒಂದು ವರ್ಷ ಮುಖ್ಯಮಂತ್ರಿಯಾಗಿದ್ದರು.  ನಂತರ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 5 ವರ್ಷಗಳ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ.  ಅವರು ಕೇಳುತ್ತಿರುವುದು ಮೋದಿಗೆ ಮತ ಹಾಕಿ ಎಂದು ಕೆಲಸದ ಆಧಾರದ ಮೇಲೆ ಅಲ್ಲ. ಇವರ್ಯಾರಿಗೂ ಮತ ಕೇಳಲು ಮುಖವೂ ಇಲ್ಲ, ನೈತಿಕತೆಯೂ ಇಲ್ಲ ಎಂದು ಕಿಡಿಕಾರಿದರು.

ಮೋದಿ ಬಿಟ್ಟರೆ ಬೇರೆ ಚುನಾವಣಾ ವಿಷಯವೇ ಇಲ್ಲ

ಇವರಿಗೆ ಮೋದಿ ಬಿಟ್ಟರೆ ಬೇರೆ ಚುನಾವಣಾ ವಸ್ತುವೇ ಇಲ್ಲ. ಎನ್‍ ಡಿಎ ನೇತೃತ್ವದಲ್ಲಿ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿರುವ ಮೋದಿ 10 ವರ್ಷಗಳಲ್ಲಿ ಏನು ಹೇಳಿದ್ದರು? ಏನು ಮಾಡಿದ್ದಾರೆ ಎಂದು ಪರಿಶೀಲನೆ ಮಾಡಬೇಕು ಎಂದು ಕರೆ ನೀಡಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು  ಪ್ರತಿಯೊಬ್ಬನ ಮನೆಗೆ 15 ಲಕ್ಷ ರೂ ಹಣವನ್ನ ಖಾತೆಗೆ ಹಾಕುವುದಾಗಿ ಹೇಳಿದ್ದರು. ಹಾಕಿದ್ದಾರೆಯೇ..? ರೈತರ ಆದಾಯ 5 ವರ್ಷಗಳಲ್ಲಿ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಮಾಡಿದರೆ? ರೈತರು ನೆಮ್ಮದಿಯಾಗಿದ್ದಾರೆಯೇ? ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು, ಮಾಡಿದರೆ? ಈವರೆಗೆ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು ಆದರೆ ಈವರೆಗೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸಲಾಗಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಒಂದು ಬೆಳೆ ತೆಗೆಯಲು ತಗಲುವ ಖರ್ಚಿನ ಮೇಲೆ ಶೇ.50ರಷ್ಟು ಕೊಡುವುದಾಗಿ ಹೇಳಿದ್ದರು. ನೂರು ರೂ.ಗಳನ್ನು ಖರ್ಚು ಮಾಡಿದ್ದರೆ 150 ರೂ.ಗಳನ್ನು ಖರ್ಚು ಮಾಡುವುದಾಗಿ ಹೇಳಿದ್ದರು ಇಂದಿನವರೆಗೆ ಜಾರಿ ಮಾಡಲಿಲ್ಲ. ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆಯನ್ನು ಇಳಿಸುವುದಾಗಿ  ಹೇಳಿದ್ದರು, ಅಕ್ಕಿ, ಬೇಳೆ, ರಾಗಿ ಜೋಳ ಬೆಲೆ ಇಳಿಯುತ್ತದೆ ಎಂದು ಹೇಳಿದ್ದರು. ಬೆಲೆಗಳನ್ನು ಇಳಿಸಲು ಪ್ರಯತ್ನ ಮಾಡಿದರೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.

ಎನ್‍ ಡಿಎ ಸರ್ಕಾರದ ವೈಫಲ್ಯಗಳು

2014 ರಲ್ಲಿ ಡೀಸೆಲ್ ಬೆಲೆ ಒಂದು ಲೀಟರ್‍ ಗೆ 49 ರೂ.ಗಳಿತ್ತು ಇಂದು 95 ರೂ.ಆಗಿದೆ.  ಪೆಟ್ರೋಲ್ ಬೆಲೆ  71 ರೂ.ಗಳಿತ್ತು ಈಗ 110 ರೂ.ಗಳಾಗಿದೆ. ಸಿಲಿಂಡರ್ ಬೆಲೆ 410 ರೂ ಇದ್ದರೆ ಈಗ 950 ರೂ.ಗಳಾಗಿದೆ. ಇಡೀ ದೇಶದ ಜನರಿಗೆ ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಒಳ್ಳೇ ದಿನಗಳು ಬಂದವೇ ಎಂದು ಪ್ರಶ್ನಿಸಿದರು.  ಮೇಕ್ ಇನ್ ಇಂಡಿಯಾ ಎಂದರು. ಇಂದಿನವರೆಗೆ ಮೇಕ್ ಇನ್ ಇಂಡಿಯಾ ಆಗಲಿಲ್ಲ. ಇಂದಿಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಲೇ ಇದ್ದಾರೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾಗಿ ಸಂಪೂರ್ಣ ವಿಫಲರಾಗಿದ್ದಾರೆ. ಎನ್‍ಡಿಎ ಸರ್ಕಾರದ ವೈಫಲ್ಯಗಳಿವು ಎಂದರು.

ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅಭಿವೃದ್ಧಿಯಾದರು.

ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಈ ದೇಶದ 140 ಕೊಟಿ ಜನರ ಅಭಿವೃದ್ಧಿ ಎಂದರು ಆದರೆ ಇಂದಿಗೂ ಏನೂ ಮಾಡಲಿಲ್ಲ. ಇವರು ಅಭಿವೃದ್ಧಿ ಮಾಡಿದ್ದು  ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅವರನ್ನು ಹೊರತು ಬಡವರ, ರೈತರ, ಮಹಿಳೆಯರ ಅಭಿವೃದ್ಧಿ ಆಗಲಿಲ್ಲ. ಇಷ್ಟಾದರೂ  ಬಿಜೆಪಿಗೆ ಮತ ಹಾಕಬೇಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ನಮಗೆ ಅಧಿಕಾರ ಕೊಟ್ಟರೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ನಾನು ಮತ್ತು ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ರಾಹುಲ್ ಗಾಂಧಿ  ಹಾಗೂ ಸೋನಿಯಾ ಗಾಂಧಿಯವರು ಕರ್ನಾಟಕದ ಜನತೆಯಲ್ಲಿ ಮನವಿ ಮಾಡಿದ್ದೇವೆ.  ನಾವು ನುಡಿದಂತೆ ನಡೆದಿದ್ದೇವೋ ಇಲ್ಲವೋ ಎಂದು ಜನರೇ ವಿಚಾರ ಮಾಡಬೇಕು ಎಂದರು.

ಜನರನ್ನು ತಲುಪಿದ ಗ್ಯಾರಂಟಿಗಳು

ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಚಾಮರಾಜನಗರದ  98% ಗೃಹಗಳಿಗೆ ಉಚಿತ  ವಿದ್ಯುತ್ ನೀಡಲಾಗಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ.ಗಳನ್ನು ಕೊಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಒಪ್ಪದಿದ್ದಾಗ 170 ರೂ.ಗಳನ್ನು ಪ್ರತಿಯೊಬ್ಬರಿಗೂ ನಮ್ಮ ಸರ್ಕಾರ ಕೊಡುತ್ತಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ 3000, ನಿರುದ್ಯೋಗಿ ಡಿಪ್ಲೊಮಾ ಹೊಂದಿದವರಿಗೆ ಪ್ರತಿ ತಿಂಗಳು 1500 ರೂ.ಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.

ಸುಳ್ಳುಗಾರ, ಮೋಸಗಾರರಿಗೆ ಮತ ಹಾಕಬೇಕೇ

ಸಿದ್ದರಾಮಯ್ಯನಿಗೆ ಹಿಂದೂಗಳ ಮತವೇ ಬೇಡ ಎಂದಿದ್ದಾರೆ ಎಂದು  ಪುಕಾರು ಹೊರಡಿಸಿದ್ದಾರೆ. ಇಂಥ ಸುಳ್ಳುಗಾರ, ಮೋಸಗಾರರಿಗೆ ಮತ ಹಾಕಬೇಕೇ ಎಂದು ಪ್ರಶ್ನಿಸಿದರು.  ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲಲಿವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವರಲ್ಲ ಎಂದರು.

ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನ್ನಬಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್ , ಸಾಲಮನ್ನಾ, ಮೈತ್ರಿ, ಮನಸ್ವಿನಿ, ಶಾದಿ ಭಾಗ್ಯ, ಶೂ ಭಾಗ್ಯ ಮುಂತಾದ ಯೋಜನೆಗಳನ್ನು ಕೊಟ್ಟಿದ್ದೆವು ಎಂದರು. ನಾವು ನುಡಿದಂತೆ ನಡೆದಿದ್ದೇವೆ, ಅವರು ನಡೆಯುವುದಿಲ್ಲ ಎನ್ನುವುದೇ ಬಿಜೆಪಿ ಕಾಂಗ್ರೆಸ್ಸಿನ ನಡುವೆ ಇರುವ ವ್ಯತ್ಯಾಸ. ಬಿಜೆಪಿಗೆ ಸುಳ್ಳೇ ಮನೆದೇವರು. ಬಡವರು, ಬಡವರಿಗೆ , ರೈತರಿಗೆ ಶಕ್ತಿ ತುಂಬುವ ಕೆಲಸ ಕಾಂಗ್ರೆಸ್ ನಿಂದ ಮಾತ್ರ ಆಗುವುದು. ಬಿಜೆಪಿಯಿಂದ ಸಾಧ್ಯವಿಲ್ಲ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗರ ಎಸ್‍ಸಿಎಸ್‍ಪಿ/ಟಿಎಸ್‍ಪಿ ಕಾಯ್ದೆ ತಂದು, ಜನಸಂಖ್ಯೆಗೆ ಅನುಗುಣವಾಗಿ ವೆಚ್ಚ ಮಾಡಬೇಕೆಂದು ತೀರ್ಮಾನಿಸಿದ್ದು, ಗುತ್ತಿಗೆಗಳಲ್ಲಿ ಮೀಸಲಾತಿ ತಂದಿದ್ದು, ಬಡ್ತಿಯಲ್ಲಿ ಮೀಸಲಾತಿ ತಂದಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ನ್ಯಾಯಪತ್ರ ಬಿಡುಗಡೆ

ಬಸವಾದಿ ಶರಣರ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುತ್ತೇವೆ, ಯುವಕರಿಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂ.ಗಳನ್ನು ಕೊಡುವ ಮಾತು ನೀಡಿದ್ದೇವೆ. ಇದಕ್ಕಾಗಿ ನ್ಯಾಯಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words:   Narendra Modi, CM, Siddaramaiah