ನಾಲ್ವಡಿ ಕೃಷ್ಣರಾಜ ಒಡೆಯರ್ ಎಲ್ಲಾ ಕ್ಷೇತ್ರವನ್ನು ಪ್ರೋತ್ಸಾಹಿಸಿ ಕೃಷಿ ಅಭಿವೃದ್ದಿಗೆ ಉತ್ತೇಜನ ನೀಡಿದ್ದು ಅವಿಸ್ಮರಣೀಯ- ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಅಕ್ಟೋಬರ್,20,2023(www.justkannada.in):  ದೇಶಕ್ಕೆ ಮಾದರಿ ಆಡಳಿದ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಭಾಗದಲ್ಲಿ ಕೃಷಿ, ನೀರಾವರಿ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನರ ಬೆನ್ನುಲುಬಾದ ಕೃಷಿ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಅವಿಸ್ಮರಣೀಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನುಡಿದರು.

ಮೈಸೂರು ವೈದ್ಯಕೀಯ ಕಾಲೇಜಿನ ಆಲ್ಯೂಮಿನಿ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ರೈತ ದಸರಾ ಸಮಾರಂಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಸರ್ಕಾರದ ಅವಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಚಟುವಟಿಕೆಗೆ ಸಹಕಾರಿಯಾಗುವಂಥ ಅನೇಕ ಅಭಿವೃದ್ಧಿಗಳ ಕೆಲಸ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದೆ. ಆಹಾರ ಸ್ವಾವಲಂಬನೆಗಾಗಿ ಹಸಿರು ಕ್ರಾಂತಿಯನ್ನು ಮಾಡಿ, ದೇಶದಲ್ಲಿ ಅನೇಕ ಅಣೆಕಟ್ಟೆಗಳನ್ನು ನಿರ್ಮಿಸದಿದ್ದರೆ ಇಂದು ಆಹಾರದ ಕೊರತೆ ಎದುರಾಗುತ್ತಿತ್ತು‌ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಕೃಷಿ ಮತ್ತು ನೀರಾವರಿ ಗಮನದಲ್ಲಿರಿಸಿ ಬಾಕ್ರನಂಗಲ್ ಅಣೆಕಟ್ಟೆ ನಿರ್ಮಿಸಲು ಸಲಹೆ ನೀಡಿದ್ದನ್ನು ಅಂದಿನ ಪ್ರಧಾನಿ ನೆಹರು ಅವರ ಸರ್ಕಾರ ಪರಿಗಣಿಸಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮಾಡಿ ಆಹಾರ ಸ್ವಾವಲಂಬನೆಯನ್ನು ಬಲಪಡಿಸಿದರು ಎಂದು ಹೆಚ್.ಸಿ ಮಹದೇವಪ್ಪ ಹೇಳಿದರು.

ರೈತ ಸಮಸ್ಯೆಗಳ ಪರಿಹಾರಕ್ಕೆ ಹೊಸ ತಂತ್ರಜ್ಞಾನ ಮತ್ತು ವೈಜ್ಞಾನಿಕ ಉಪಾಯಗಳ ಮೂಲಕ ಕೃಷಿ ಅಭಿವೃದ್ಧಿ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಚಳುವಳಿಯಿಂದ ಬಂದಿದ್ದು, ರೈತರ ಸಮಸ್ಯೆಗಳು ಅವರ ಗಮನದಲ್ಲಿದೆ. ಸಂಕಷ್ಟದ ಕಾಲದಲ್ಲಿ ರೈತರ ಪರ ನಿಂತು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ನಡೆಸಲಿದ್ದಾರೆ.

ಗಣತಂತ್ರ ವ್ಯವಸ್ಥೆಯಲ್ಲಿ ನಾವು ನಿರೀಕ್ಷೆ ಮಾಡಿದ ಸಹಕಾರ ಕೇಂದ್ರ ಸರ್ಕಾರದಿಂದ ಲಭ್ಯವಾಗುತ್ತಿಲ್ಲ. ಪ್ರಸ್ತುತ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಕ್ಷೇತ್ರ ಅಪಾಯದಲ್ಲಿದೆ. ಇದು ಅತ್ಯಂತ ನೋವಿನ ಸಂಗತಿ. ಆದರೂ ರಾಜ್ಯ ಸರ್ಕಾರ ರಾಜ್ಯದ ರೈತರನ್ನು ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಸಿಲುಕಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಭರವಸೆ ನೀಡಿದರು.

Key words: Nalwadi Krishnaraja Wodeyar -encouraged -all sectors – Minister -HC Mahadevappa.