ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ: 3500 ಪೌರ ಕಾರ್ಮಿಕರಿಗೆ ದಿನಸಿ, ಅನ್ನ ಸಂತರ್ಪಣೆ

ಮೈಸೂರು, ಜೂನ್,3,2025 (www.justkannada.in):  ಕರ್ನಾಟಕದ ಸುಧಾರಣೆಯ ಹರಿಕಾರರು, ಶಿಕ್ಷಣ ತಜ್ಞರು, ಸಂಗೀತ ಆರಾಧಕರು, ಅನ್ನದಾತರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮ ಜಯಂತಿಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಅಂಗವಾಗಿ 3500 ಪೌರ ಕಾರ್ಮಿಕರಿಗೆ ದಿನಸಿ, 50 ಸಾವಿರ ಮಂದಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಇದಕ್ಕೂ ಮುನ್ನ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ಯದುವೀರ್,  ನಮ್ಮ ಮೈಸೂರು ಎಂದಿಗೂ ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಅಂದಿನ ಕಾಲದಲ್ಲಿ ರಾಜರ್ಷಿ ನಲವಾಡಿ ಕೃಷ್ಣರಾಜ ಒಡೆಯರ್‌ ಅವರು ಇದಕ್ಕಾಗಿ ಹೆಚ್ಚು ಆದ್ಯತೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ನಗರವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಿರುವ 3500 ಪೌರ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ಮಹರಾಜ ಕಾಲೇಜು ಮೈದಾನದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ಇದೇ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ನಾಲ್ವಡಿ ಅಭಿಮಾನಿಗಳು ಆಯೋಜಿಸಿರುವ ಕಾರ್ಯಕ್ರಮವಾಗಿದೆ. ಇದು ಪಕ್ಷಾತೀತ ಮತ್ತು ಜಾತ್ಯತೀತವಾಗಿರುವ ಹಾಗೂ ಅಪ್ಪಟ ಜನೋಪಯೋಗಿ ಕಾರ್ಯಕ್ರಮವಾಗಿದೆ ಎಂದು ಯದುವೀರ್‌ ತಿಳಿಸಿದರು.

ಪೌರ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ಹಂಚಲಾಗುವುದು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಯದುವೀರ್ ವಿವರಿಸಿದರು.

ನಮ್ಮ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌, ಮೈಸೂರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಮೈಸೂರಿನಲ್ಲಿ ಇವರು ಪ್ರಾತಃ ಸ್ಮರಣೀಯರಾಗಿದ್ದಾರೆ. ಇವರ ಜನ್ಮಜಯಂತಿಯಂದು ಮೈಸೂರು ಸುತ್ತಮುತ್ತಲ ಭಾಗದಲ್ಲಿ ಸುಮಾರು ಐವತ್ತು ಸಾವಿರ ಮಂದಿಗೆ ಅಭಿಮಾನಿಗಳ ಬಳಗದಿಂದ ಅನ್ನದಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಸಂಸದರಾಗಿ ಒಂದು ವರ್ಷ

ಜೂನ್‌ 4 ನನಗೆ ಮರೆಯಲಾಗದ ದಿನ. ಅಂದು ನಮ್ಮ ರಾಜರ್ಷಿಗಳಾದ ಕೃಷ್ಣರಾಜ ಒಡೆಯರ್‌ ಜನ್ಮ ಜಯಂತಿಯಾದರೆ ಕಾಕತಾಳೀಯ ಎಂಬಂತೆ ಇದೇ ದಿನ ಕಳೆದ ವರ್ಷ ನಾನು ಮೊದಲ ಬಾರಿಗೆ ಸಂಸದನಾಗಿ ಆಯ್ಕೆಯಾದ ದಿನವೂ ಆಗಿದೆ ಎಂದರು.

ಒಂದು ವರ್ಷದಲ್ಲಿ ಸಂಸದನಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ನಮ್ಮ ಹಿರಿಯ ಅರಸರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇನೆ. ಜನಸೇವೆಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಒಂದು ವರ್ಷದ ಸಂದ ಈ ಸಂದರ್ಭವನ್ನು ಹಲವಾರು ಸಮಾಜ ಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಿಕೊಳ್ಳಲಾಗುತ್ತಿದೆ ಎಂದರು.

ಜನರ ಆಸೆ-ಆಕಾಂಕ್ಷೆಗಳಿಗೆ, ಜನ ಪರ ಯೋಜನೆಗಳನ್ನು ಜಾರಿಗೆ ತರುತ್ತೇನೆ. ಸದಾ ಅಭಿವೃದ್ಧಿ ಪರವಾದ ಕಾರ್ಯಗಳನ್ನು ಮಾಡುವ ಸಂಕಲ್ಪ ಮಾಡಿದ್ದೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.vtu

Key words: Nalvadi Krishnaraja Wodeyar Jayanti, Mysore, MP, Yadveer