ರಾಜೀವ್ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಬಲ: ನಮ್ಮ ಕೆಲಸ , ಬಿಜೆಪಿಯವರ ಮೋಸ ಜನರಿಗೆ ತಿಳಿಸಿ-ಸಿಎಂ ಸಿದ್ದರಾಮಯ್ಯ.

ಮೈಸೂರು,ಮಾರ್ಚ್,27,2024 (www.justkannada.in): ಇಂದು  ಹೆಚ್.ವಿ ರಾಜೀವ್ ಅವರ ಜೊತೆ ಹಲವಾರು ಜನ‌ ಬಿಜೆಪಿ, ಜೆಡಿಎಸ್ ತೊರೆದು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾಗತ ಕೋರಿ ಆತ್ಮೀಯವಾಗಿ ಬರಮಾಡಿಕೊಳ್ಳುತ್ತದೆ.  ರಾಜೀವ್ ಕಾಂಗ್ರೆಸ್ ಪಕ್ಷಕ್ಕೆ  ಬಂದಿರುವುದರಿಂದ  ದೊಡ್ಡ ಶಕ್ತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ  ನುಡಿದರು.

ಮೈಸೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ H. V.ರಾಜೀವ್ , ಬಿಜೆಪಿ ತೊರೆದು ತಮ್ಮ ಬೆಂಬಲಿಗರ ಜತೆ ಕಾಂಗ್ರೆಸ್ ಸೇರಿದರು. ಮಾಜಿ ಮೇಯರ್ ಬೈರಪ್ಪ ಹಾಗೂ ಜೆಡಿಎಸ್ ಮುಖಂಡ ಕೆ. ವಿ ಮಲ್ಲೇಶ್ ಸಹ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆಯಾದರು.

ಸಮಾವೇಶದಲ್ಲಿ ಮಾತನಾಡಿದ  ಸಿಎಂ ಸಿದ್ದರಾಮಯ್ಯ, ಇಂದು ರಾಜೀವ್ ಅವರ ಜೊತೆ ಹಲವಾರು ಜನ‌ ಬಿಜೆಪಿ ಜೆಡಿಎಸ್ ತೊರೆದು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾಗತ ಕೋರಿ ಆತ್ಮೀಯವಾಗಿ ಬರಮಾಡಿಕೊಳ್ಳುತ್ತೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ರಾಜೀವ್ ಗೆ ನಮ್ಮ ಪಕ್ಷಕ್ಕೆ ಆಹ್ವಾನಿಸಿದ್ದೆ. ಆದರೆ ಅವರು ಇಲ್ಲ ಸರ್ ಬರಲಿಕ್ಕೆ ಆಗಲ್ಲ ಅಂದಿದ್ದರು. ನಾನು ಅಲ್ಲಿಗೆ ಒತ್ತಾಯ ಮಾಡಲಿಲ್ಲ. ಈಗಾಗಲೇ ಎರಡು ಮೂರು ತಿಂಗಳ ಹಿಂದೆ ರಾಜೀವ್ ಪಕ್ಷ ಸೇರಬೇಕಿತ್ತು. ಸಮಯ ಇಲ್ಲದೆ ನಾನು ಒಂದು ಸಮಯ ಕೊಡುತ್ತೇನೆ ಎಂದು ಹೇಳಿ ಇಂದು ನಮ್ಮ‌ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ಕೋಮುವಾದಿ ಬಿಜೆಪಿ ಜೊತೆ ಜೆಡಿಎಸ್ ಸೇರಿದ ಮೇಲೆ ಜೆಡಿಎಸ್ ಪಕ್ಷ ತೊರೆದು ನಮ್ಮ ಪಕ್ಷ ಸೇರಿರುವ ಕೆ.ವಿ ಮಲ್ಲೇಶ್ ಗೂ ನಮ್ಮ ಪಕ್ಷದ ವತಿಯಿಂದ ಸ್ವಾಗತವನ್ನು ಕೋರುತ್ತೇನೆ. ಇವರಲ್ಲದೇ ಅನೇಕ ಜನ ಕಾಂಗ್ರೆಸ್ ಪಕ್ಷವನ್ನ ಸೇರುತ್ತಿದ್ದಾರೆ. ಅವರಿಗೂ ಕೂಡ ಸ್ವಾಗತ ಬಯಸುತ್ತೇನೆ ಎಂದರು.

ಈಗಾಗಲೇ ರಾಜೀವ್ ಅವರು ಹೇಳಿದಂತೆ ಬಿಜೆಪಿ ಬಿಡಲಿಕ್ಕೆ ಕಾರಣ ಹೇಳಿದ್ದಾರೆ. ಅಲ್ಲಿ ಸೂಕ್ತ ಸ್ಥಾನಮಾನ ಕೊಡಲಿಲ್ಲ ಜೊತೆಗೆ ಗೌರವ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಜನಪರ ಆಡಳಿತ ನೋಡಿ ನಾನು ಕಾಂಗ್ರೆಸ್ ಸೇರಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರವಾಗಿ ಇರುವ ಪಕ್ಷ. ನುಡಿದಂತೆ ನಡೆವ ಪಕ್ಷ ಕಾಂಗ್ರೆಸ್. ರಾಜೀವ್ ಅವರು ನಮ್ಮ ಕಾರ್ಯಕ್ರಮಗಳ ಸಿದ್ದಾಂತ ಒಪ್ಪಿ ನಮ್ಮ‌ ಪಕ್ಷಕ್ಕೆ ಬಂದಿರುವುದು ಒಂದು ಒಳ್ಳೆಯ ಬೆಳವಣಿಗೆ. ಸೋಮಶೇಖರ್ ಈ‌ ಭಾಗದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಎಂ. ಕೆ ಸೋಮಶೇಖರ್ ಅಭಿಪ್ರಾಯ ಕೇಳಿ ರಾಜೀವ್ ನಮ್ಮ ಪಕ್ಷಕ್ಕೆ ಬರಮಾಡಿಕೊಂಡೆ. ಸೋಮಶೇಖರ್ ಹಲವಾರು ವರ್ಷಗಳಿಂದ ನನ್ನ ಅಭಿಮಾನಿಯಾಗಿ ನನ್ನ ರಾಜಕೀಯ ಜೀವನದ ಯಶಸ್ಸಿಗೆ ಕೆಲಸ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜೀವ್ ಕಾಂಗ್ರೆಸ್ ಪಕ್ಷಕ್ಕೆ ಬರುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ಈ ಲೋಕಸಭಾ ಚುನಾವಣೆಯಲ್ಲಿ ನಾವು ಕೆ.ಆರ್ ಕ್ಷೇತ್ರದಲ್ಲಿ ಲಕ್ಷ್ಮಣ್ ಗೆ ಬಹುಮತ ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಧರ್ಮದ ಆಧಾರದ ಮೇಲೆ ಯಾರನ್ನು ಕಡೆಗಣಿಸಿಲ್ಲ. ಎಲ್ಲಾ ಧರ್ಮದ ಎಲ್ಲಾ ಜಾತಿಯ ಜನರಿಗೆ ನಮ್ಮ ಯೋಜನೆಗಳನ್ನು ಕೊಟ್ಟಿದ್ದೇವೆ. ನರೇಂದ್ರ ಮೋದಿ ಬರಿ ಬಾಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಶ್ ಅಂತಾರೆ. ಗಡ್ಡ ಬಿಟ್ಟವರು ನಮ್ಮ ಮನೆಗೆ ಬರಬೇಡಿ ಅಂತಾರೆ. ಸಿಲುಬೆ ಹಾಕಿರೋರು ನಮ್ಮ ಮನೆಗೆ ಬರಬೇಡಿ ಅಂತಾರೆ. ಹಾಗಾದರೆ ಸಬ್ ಸಾತ್ ಹೇಗೆ.? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾವು ಮಾಡಿದ ಕೆಲಸ ಬಿಜೆಪಿ ಮಾಡಿರುವ ಮೋಸವನ್ನ ಜನರಿಗೆ ತಿಳಿಸುವ ಕೆಲಸ ಮಾಡಿ..

ಅತ್ಯಂತ ಸುಳ್ಳು ಹೇಳುವ  ಪ್ರಧಾನಿ ಅಂದರೆ ಮೋದಿ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ. ಭಾರತದ ಆರ್ಥಿಕತೆಯನ್ನ 5 ಟ್ರಿಲಿಯನ್ ಗೆ ತೆಗೆದುಕೊಂಡು ಹೋಗುತ್ತೇನೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು ,10 ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು ಮಾಡಿದ್ರಾ.? ಇವರಿಗೆ ವೋಟ್ ಹಾಕಬೇಕಾ.? ಎಂದು ಜನರಿಗೆ ಪ್ರಶ್ನೆ ಮಾಡಿದರು.  ನಾವು ಮಾಡಿದ ಕೆಲಸ ಮತ್ತು ಬಿಜೆಪಿ ಅವರು ಮಾಡಿರುವ ಮೋಸವನ್ನ ಜನರಿಗೆ ತಿಳಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಿಎಂ ಕರೆ ಕೊಟ್ಟರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಹಲವಾರು ಯೋಜನೆಗಳ ಜಾರಿ ಮಾಡಿದ್ದೆ. ಅದರಂತೆ ಈಗಲೂ ಕೂಡ ನುಡಿದಂತೆ ನಡೆದಿದ್ದೇವೆ. ಕೊಟ್ಟ ವಚನದಂತೆ ನಡೆದುಕೊಂಡಿದ್ದೇನೆ. ಬೇಕಾದರೆ ಒಂದೇ ವೇದಿಕೆಯಲ್ಲಿ ಬರಲಿ ವಿರೋಧ ಮಾಡುವವರು. ಬಹಿರಂಗ ಚರ್ಚೆಗೆ ಬರಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ಗ್ಯಾರಂಟಿಗಳಿಗೆ ಒಂದು ಪೈಸೆ ಕೊಡಬೇಡಮ್ಮ ಎಂದು ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸಿತಾರಾಮನ್ ಗೆ ಟಾಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ,  ನರೇಂದ್ರ ಮೋದಿ ಕಾಗೆ ಬೆಳ್ಳಗಿದೆ  ಎಂದರೆ ಎಲ್ಲರೂ ಬೆಳ್ಳಗಿದೆ ಅಂತಾರೆ.  ಇಲ್ಲಿ ನರೇಂದ್ರ ಮೋದಿ ಹೇಳಿದಂತೆ ತಮಟೆ ಬಾರಿಸುತ್ತಾರೆ. ಭದ್ರಾ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದರು. ಇಲ್ಲಿವರೆಗೂ ಒಂದು ಪೈಸೆ ಕೊಟ್ಟಿಲ್ಲ.  ನಿಮಗೆ ದೇವರ ಮೇಲೆ ನಂಬಿಕೆ ಇದ್ರೆ ಪ್ರಮಾಣ ಮಾಡಿ ಹೇಳಿ.  ನಾನು ಪ್ರಮಾಣ ಮಾಡಲ್ಲ ಸತ್ಯ ಹೇಳುತ್ತೇನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬರಪರಿಹಾರವಾಗಿ 18, 171 ಕೋಟಿ ಬರಬೇಕು. ಆದರೆ ಕೇಂದ್ರ ಸರ್ಕಾರ ಅದನ್ನೂ ಕೊಟ್ಟಿಲ್ಲ. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದೀರಿ. ಕರ್ನಾಟಕವನ್ನ ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕರ್ನಾಟಕ ಹಸಿವು ಮುಕ್ತ ರಾಜ್ಯ ಮಾಡಬೇಕು ಅಂತ ಪ್ರತಿ ತಲೆಗೆ 10 ಕೆಜಿ ಅಕ್ಕಿ ಕೊಡಲು ನಿರ್ಧಾರ ಮಾಡಿದ್ದವು. ಬಿಜೆಪಿಯವರು ನಮಗೆ ಸಹಕಾರ ನೀಡಲಿಲ್ಲ. ಹೀಗಾಗಿ ಅಕ್ಕಿ ಬದಲಿಗೆ 170 ರೂ.  ಹಣ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಶಕ್ತಿ ಯೋಜನೆಗಳ ಮೂಲಕ ರಾಜ್ಯದ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ಆಗುತ್ತಿದೆ. ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತದ ಭಯದಿಂದ ಬಿಜೆಪಿ,ಜೆಡಿಎಸ್ ಒಂದಾಗಿದ್ದಾರೆ ಅವರನ್ನ ಸೋಲಿಸಬೇಕಾ ಬೇಡವಾ.? ಅವರನ್ನ ಸೋಲಿಸಿ ಮನೆಗೆ ಕಳಿಸುವ ಕೆಲಸವನ್ನು ನೀವು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: mysore,congress, CM Siddaramaiah