ಮೈಸೂರು,ಫೆಬ್ರವರಿ,6,2026 (www.justkannada.in): ಮೈಸೂರು ವಿಶ್ವವಿದ್ಯಾನಿಲಯ 2026–27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಕಾಲೇಜುಗಳ ಸಂಯೋಜನಾ (AFFILIATION) ಪ್ರಕ್ರಿಯೆ ಕುರಿತು ಮಂಡಿಸಲಾದ ವರದಿಗಳಿಗೆ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್ ಅಸಮ್ಮತಿ ದಾಖಲಿಸಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸಿಂಡಿಕೇಟ್ ಸದಸ್ಯ ಡಾ. ಟಿ. ಆರ್. ಚಂದ್ರಶೇಖರ್, ದಿನಾಂಕ 05.02.2026 ರಂದು ಸಂಜೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ, 2026–27ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದ ಕಾಲೇಜುಗಳ ಸಂಯೋಜನಾ (AFFILIATION) ಪ್ರಕ್ರಿಯೆ ಕುರಿತು ಮಂಡಿಸಲಾದ ವರದಿಗಳನ್ನು ಪರಿಶೀಲಿಸಿದ ನಂತರ, ಗಂಭೀರ ಕಾನೂನುಬದ್ಧ ಹಾಗೂ ಪ್ರಕ್ರಿಯಾತ್ಮಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ನಾನು ನನ್ನ ಸ್ಪಷ್ಟ ಅಸಮ್ಮತಿಯನ್ನು (DISSENT NOTE) ಅಧಿಕೃತವಾಗಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸಿಂಡಿಕೇಟ್ ನಿರ್ಣಯದ ಮೂಲಕ ಸ್ಥಳೀಯ ವಿಚಾರಣಾ ಸಮಿತಿಗಳನ್ನು ರಚಿಸದಿರುವುದು. ಸ್ಥಳೀಯ ಭೌತಿಕ ಪರಿಶೀಲನೆಗೆ ಸಂಬಂಧಿಸಿದ ವಿಶ್ವಾಸಾರ್ಹ ದಾಖಲೆಗಳ ಅಭಾವ. ವಿಚಾರಣಾ ವರದಿಗಳ ಮೇಲೆ ಸಿಂಡಿಕೇಟ್ ಸದಸ್ಯರ ಸಹಿ ಇಲ್ಲದಿರುವುದರಿಂದ ಹೊಣೆಗಾರಿಕೆಯ ಸ್ಪಷ್ಟತೆಯ ಕೊರತೆ. ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಅವರು ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯ ನಿಯಮಬಾಹಿರ ವಿಧಾನ ಅನುಸರಿಸಿ ಸಂಯೋಜನಾ ಪ್ರಕ್ರಿಯೆಗಳನ್ನು ನಡೆಸಿ, 2026–27ನೇ ಶೈಕ್ಷಣಿಕ ಸಾಲಿಗೂ ಅದೇ ಕ್ರಮವನ್ನು Ultra Vires ರೀತಿಯಲ್ಲಿ ಮುಂದುವರಿಸಿರುವುದು ಗಂಭೀರ ಆತಂಕದ ವಿಷಯವಾಗಿದೆ. ಈ ಅಸಮ್ಮತಿ ಸೂಚನೆ ಯಾವುದೇ ವೈಯಕ್ತಿಕ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ; ಬದಲಾಗಿ ಇದು ಮೂಲಭೂತ ಮೌಲ್ಯಗಳ ರಕ್ಷಣೆಗೆ ಸಂಬಂಧಿಸಿದೆ ಎಂದು ಡಾ. ಟಿ. ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
Key words: Mysore University, Syndicate member, Dr. T. R. Chandrashekhar







