ಸ್ಥಾಯಿ ಸಮಿತಿ ಚುನಾವಣೆ ನಡೆಸಲಾಗದ ಮೈಸೂರು ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ- ಅಯೂಬ್ ಖಾನ್ ಒತ್ತಾಯ.

ಮೈಸೂರು,ಮಾರ್ಚ್,13,2023(www.justkannada.in): ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ನಡೆಸಲಾಗದ ಮೇಯರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಮೇಯರ್ ಅಯೂಬ್ ಖಾನ್ ಒತ್ತಾಯಿಸಿದರು.

ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಗೆ ಮೇಯರ್ ಗೈರಾದ ಹಿನ್ನಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಮಾಜಿ ಮೇಯರ್ ಅಯೂಬ್ ಖಾನ್ , ಮೇಯರ್ ಆಯ್ಕೆಯಾಗಿ 6 ತಿಂಗಳು ಕಳೆದಿದೆ. ಇನ್ನು ಸಹ ಸ್ಥಾಯಿ ಸಮಿತಿಯ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ಈ ಹಿಂದೆ ನಾವೆಲ್ಲರೂ ಸೇರಿ ಸ್ಥಾಯಿ ಸಮಿತಿ ಚುನಾವಣೆ ನಡೆಸುವಂತೆ ಪ್ರತಿಭಟನೆ ಮಾಡಿದ್ದೆವು. ಅದಾದ ಬಳಿಕ ಇಂದು ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಮೇಯರ್ ರವರು ಇಂದು ಚುನಾವಣೆಗೆ ಆಗಮಿಸದೆ ಕಾಣೆಯಾಗಿದ್ದಾರೆ ಎಂದು ಕಿಡಿಕಾರಿದರು.

ಸ್ಥಾಯಿ ಸಮಿತಿ ಸ್ಥಾನಗಳಿಗೆ ಚುನಾವಣೆಗಳು ನಡೆಯದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಮೇಯರ್ ರವರ ಈ ಕಾರ್ಯ ವೈಖರಿ ಪ್ರಜಾಪ್ರಭುತ್ವದ ಕಗ್ಗೊಲೆ. ಮೈಸೂರಿನ ಜನತೆ ದಿನ ನಿತ್ಯ ಪಾಲಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರಿನ ಜನತೆಯ ಮುಂದೆ ಯಾವ ರೀತಿ ಮುಖ ಒತ್ತುಕೊಂಡು ಮತ ಕೇಳಲು ಹೋಗ್ತೀರಾ. ಪಾಲಿಕೆಯ ಆಡಳಿತ ಸರಿಯಾಗಿ ನಡೆಸದೆ ಇರುವವರು ರಾಜ್ಯವನ್ನ ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಆಯೂಬ್ ಖಾನ್ ಪ್ರಶ್ನಿಸಿದರು.

ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸಂಬಂಧ ಈ ರೀತಿಯ ಆಡಳಿತಕ್ಕೆ ಕಾರಣವಾಗಿದೆ. ಒಂದು ಕಡೆ ಪ್ರತಾಪ್ ಸಿಂಹ ಹೇಳುತಾರೆ. ಮತ್ತೊಂದು ಕಡೆ ಸಾರಾ ಮಹೇಶ್,ಜಿ ಟಿ ದೇವೇಗೌಡರು ಹೇಳುತ್ತಾರೆ. ಇಂತಹ ಪರಿಸ್ಥಿತಿ ಯಾಕೆ ಬೇಕಿತ್ತು.? ಮಾಜಿ ಮೇಯರ್ ಅಯೂಬ್ ಖಾನ್  ವಾಗ್ದಾಳಿ ನಡೆಸಿದರು.

Key words: Mysore -Mayor – resign – his position – standing committee- election- Ayub Khan