‘ಎಂ. ಲಕ್ಷ್ಮಣ್ ಗೆದ್ದರೆ ನಾನೇ ಗೆದ್ದ ಹಾಗೆ’ – ಸಿಎಂ ಸಿದ್ದರಾಮಯ್ಯ.

ಮೈಸೂರು,ಮಾರ್ಚ್,27,2024 (www.justkannada.in): ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಸ್ಪರ್ಧಿಸಿದ್ದಾರೆ.  ಲಕ್ಷ್ಮಣ್ ಗೆದ್ದರೆ ನಾನೇ ಗೆದ್ದ ಹಾಗೆ. ಅದಕ್ಕೋಸ್ಕರ ಲಕ್ಷ್ಮಣ್ ಅವರಿಗೆ ಹಸ್ತದ ಗುರುತಿಗೆ ಮತಹಾಕಿ ಗೆಲ್ಲಿಸಿ  ಎಂದು ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದರು.

ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಲಕ್ಷ್ಮಣ್ ಒಬ್ಬ ಸಭ್ಯ , ವಿದ್ಯಾವಂತ,  ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ವ್ಯಕ್ತಿ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತ ವ್ಯಕ್ತಿಗೆ ಮತ ಹಾಕಬೇಕು. ಹೀಗಾಗಿ ಎಂ.ಲಕ್ಷ್ಮಣ್ ಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಂದರೆ ಲೂಟಿ ಕೋರರು, ಸುಳ್ಳುಕೋರರು. ರಾಜ್ಯದಲ್ಲಿರುವ ಬಿಜೆಪಿ ನಾಯಕರು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಇವರಿಗೆ ವೋಟ್ ಕೊಡಬೇಕಾ.? ಕೊಡಬಾರದು. ಕಳೆದ ಚುನಾವಣೆಯಲ್ಲಿ 25 ಜನ ಸಂಸದರನ್ನ ಗೆಲ್ಲಿಸಿ ಕೊಟ್ಟರಲ್ಲ. ಇಲ್ಲಿ ಅವನ್ಯಾರೋ ಗೆಲ್ಲಿಸಿ ಕೊಟ್ಟಿದ್ದೀರಲ್ಲ ಎಂತ ಸಿಂಹ ಅವನು. ಪ್ರತಾಪ್ ಸಿಂಹ ನಾವು ಮಾಡಿದ ಕೆಲಸಗಳನ್ನು ನಾನು ಮಾಡಿದ್ದು ಅಂತ ಹೇಳಿಕೊಂಡು ಓಡಾಡುತ್ತಿದ್ದಾನೆ. ಪ್ರತಾಪ ಸಿಂಹ ಅಲ್ಲ ಬರಿ ಪ್ರಲಾಪ ಸಿಂಹ ಅವನು ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇದೇ ವೇಳೆ ಜೆಡಿಎಸ್ ವಿರುದ್ದವೂ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರು ಪ್ರಧಾನಿ ಆದರೆ ಈ ದೇಶ ಬಿಟ್ಟು ಹೋಗುತ್ತೇನೆ. ಮುಂದಿನ ಜನ್ಮದಲ್ಲಿ ಹುಟ್ಟಿದರೇ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದ ದೇವೇಗೌಡರು ಒಬ್ಬ ಅನುಕೂಲ ಸಿಂಧು ರಾಜಕಾರಣಿ. ಜೆಡಿಎಸ್‌ ನವರು ಮೂರು ಕ್ಷೇತ್ರ ತೆಗೊಂಡಿದ್ದಾರೆ. ದೇವೇಗೌಡರು ಅವರ ಅಳಿಯನ್ನ ಬಿಜೆಪಿಗೆ ಕಳುಹಿಸಿದ್ದಾರೆ. ಕರ್ನಾಟಕದಲ್ಲಿ ಸೋಲುವ ಭೀತಿಯಿಂದ ಈಗ ಒಂದಾಗಿದ್ದಾರೆ. ಇಂತವರನ್ನ ಸೋಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

Key words: mysore, Laxman, Siddaramaiah