ಮೈಸೂರು,ಫೆಬ್ರವರಿ,26,2026 (www.justkannada.in): ಮೈಸೂರಿನ ಕುವೆಂಪು ನಗರದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಣ ಮಾಡುವಂತೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ ಮಲ್ಲೇಶ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಸ್ತಾಪಿಸಿ ಮನವಿ ಮಾಡಿರುವ ಕೆ.ವಿ ಮಲ್ಲೇಶ್, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುವೆಂಪು ನಗರವು ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ, ವಾಣಿಜ್ಯ- ವ್ಯಾವಹಾರಿಕ ಸಹಿತ ಅನೇಕ ದೃಷ್ಟಿಯಲ್ಲಿ ಬಹುಚಟುವಟಿಕೆಯ ಬಡಾವಣೆ. ಇತ್ತೀಚಿನ ವರ್ಷಗಳಲ್ಲಿ ಸುತ್ತಮುತ್ತ ಅನೇಕ ಜನವಸತಿ ಪ್ರದೇಶಗಳು ವೇಗವಾಗಿ ಬೆಳೆಯುತ್ತಿದ್ದು ಅವೆಲ್ಲವುಗಳಿಗೂ, ಕುವೆಂಪುನಗರ ಕೇಂದ್ರ ಸ್ಥಾನವಾಗಿ ರೂಪುಗೊಳ್ಳುತ್ತಿದೆ. ಆದ್ದರಿಂದ, ಈಗಿರುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಈ ಬಡಾವಣೆಯಲ್ಲಿ ನಾಗರೀಕ ಸೌಲಭ್ಯಗಳನ್ನು ನಿರ್ಮಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಾರ್ಯೋನ್ಮುಖವಾಗಬೇಕು ಎನ್ನುವುದು ಈ ಭಾಗದ ನಿವಾಸಿಗಳ ನಿರೀಕ್ಷೆ. ಅನೇಕ ಶೈಕ್ಷಣಿಕ ಸಂಸ್ಥೆಗಳು, ಹಲವು ಬಗೆಯ ಔದ್ಯೋಗಿಕ ಮತ್ತು ಕ್ರೀಡಾ ತರಬೇತಿ ಕೇಂದ್ರಗಳನ್ನು ಹೊಂದಿರುವ ಕುವೆಂಪುನಗರದಲ್ಲಿ ವಿದ್ಯಾರ್ಥಿ, ಯುವ ಜನರ ಮತ್ತು ಆಸಕ್ತ ಸಾರ್ವಜನಿಕರ ಬಳಕೆಗಾಗಿ ಸುಸಜ್ಜಿತ ‘ಈಜು ಕೊಳ’ ನಿರ್ಮಾಣದ ಅಗತ್ಯತೆ ಇದೆ.
ಮರಳವಾಡಿ ಕೆರೆಯ ಪ್ರದೇಶದಲ್ಲಿ ಈಜು ಕೊಳಕ್ಕೆ ಪ್ರಶಸ್ತ ಜಾಗವೂ ಇದೆ. ಮರಳವಾಡಿ ಕೆರೆ ಜಾಗದಲ್ಲಿ ಒಂದಷ್ಟನ್ನು ಇಸ್ಕಾನ್ ದೇವಾಲಯಕ್ಕೆ ನೀಡಲಾಗಿದೆ. ಇನ್ನೊಂದಷ್ಟು ಒತ್ತುವರಿ ಜಾಗವನ್ನು ತೆರವು ಗೊಳಿಸಿ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಮತ್ತೊಂದಷ್ಟು ಜಾಗ ಖಾಲಿ ಇದ್ದು ಕಟ್ಟಡ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಹೀಗೇ ಖಾಲಿ ಬಿಟ್ಟರೆ ಒತ್ತುವರಿಯಾಗುವ ಅಪಾಯವೂ ಇದೆ. ಆದ್ದರಿಂದ ಈ ಜಾಗದಲ್ಲಿ ನಗರಪಾಲಿಕೆಯೇ ನೇರವಾಗಿ ಅಥವಾ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಬೇಕು. ಈ ವರ್ಷದ ಆಯವ್ಯಯದಲ್ಲಿಯೇ ಈ ವಿಷಯವನ್ನು ಆದ್ಯತೆಯ ಮೇಲೆ ಪರಿಗಣಿಸಬೇಕು ಎಂದು ಕೆ.ವಿ ಮಲ್ಲೇಶ್ ಆಗ್ರಹಿಸಿದ್ದಾರೆ.
ಬೇಸಿಗೆಯ ತಾಪದ ದಿನಗಳಲ್ಲಿ ಹದಿಹರೆಯದ ಮಕ್ಕಳು ಕೆರೆ, ನಾಲೆ, ನದಿ ಪಾತ್ರಗಳಿಗೆ ಈಜಲು ತೆರಳುತ್ತಾರೆ. ಇಂಥ ಕಡೆಗಳಲ್ಲಿ ದುರಂತಗಳೂ ಸಂಭವಿಸಿವೆ. ನಗರದಲ್ಲಿ ಹೆಚ್ಚು ಈಜುಕೊಳಗಳಿದ್ದರೆ, ಇಂಥ ಅನಾಹುತಗಳನ್ನು ತಪ್ಪಿಸಬಹುದು. ಮಾತ್ರವಲ್ಲ, ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಈ ಭಾಗದ ಮಕ್ಕಳಿಗೂ, ದೈಹಿಕ ಆರೋಗ್ಯದ ದೃಷ್ಟಿಯಿಂದ ಈಜಲು ಬಯಸುವ ಸಾರ್ವಜನಿಕರಿಗೂ ಈಜು ಕೊಳ ನಿರ್ಮಾಣದಿಂದ ಅನುಕೂಲವಾಗುತ್ತದೆ ಎಂದು ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.
Key words: Mysore, K.V. Mallesh, construction, swimming pool.







