ಮೈಸೂರು,ಏಪ್ರಿಲ್,27,2026 (www.justkannada.in): ಜೆಎಸ್ಎಸ್ ಮಹಾವಿದ್ಯಾಪೀಠದ ಅಧೀನದಲ್ಲಿರುವ ಮೈಸೂರು ಕುವೆಂಪುನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ 23ನೇ ಸುರಾಣಾ & ಸುರಾಣಾ – ಜೆಎಸ್ಎಸ್ ಕಾರ್ಪೊರೇಟ್ ಲಾ ಮೂಟ್ ಕೋರ್ಟ್ ಸ್ಪರ್ಧೆ 2025-26 ಯಶಸ್ವಿಯಾಗಿ ನಡೆಯಿತು.
ಕಾನೂನು ವಿದ್ಯಾರ್ಥಿಗಳಲ್ಲಿ ವಾದ ಕೌಶಲ್ಯ, ಸಂಶೋಧನಾ ಸಾಮರ್ಥ್ಯ ಹಾಗೂ ನ್ಯಾಯಾಂಗ ಅರಿವು ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾದ ಈ ರಾಷ್ಟ್ರಮಟ್ಟದ ಸ್ಪರ್ಧೆಗೆ ವಿವಿಧ ವಿಶ್ವವಿದ್ಯಾಲಯಗಳ ತಂಡಗಳು ಭಾಗವಹಿಸಿದ್ದವು. ಕೋ ಆರ್ಡಿನೇಟರ್ ಆಗಿ ಪ್ರೊಫೆಸರ್ ಜಗದೀಶ್ ಯಶಸ್ವಿಯಾಗಿ ಸ್ಪರ್ಧೆಯ ನಿರ್ವಹಣೆ ಮಾಡಿದರು.
ಏಪ್ರಿಲ್ 24ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರು ಉದ್ಘಾಟಿಸಿದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ. ಸಿ.ಜಿ. ಬೆಟ್ಸೂರ್ ಮಠ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಕೆ.ಎಸ್. ಸುರೇಶ್, ಸುರಾಣಾ & ಸುರಾಣಾ ಸಂಸ್ಥೆಯ ಪ್ರತಿನಿಧಿ ಪ್ರೀತಮ್ ಸುರಾಣಾ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ. ಎನ್. ವಾಣಿ ಶ್ರೀ ಉಪಸ್ಥಿತರಿದ್ದರು.
ಏಪ್ರಿಲ್ 26ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರು ಸಮಾರೋಪ ಭಾಷಣ ಮಾಡಿದರು. ಬೆಂಗಳೂರಿನ ಹಿರಿಯ ವಕೀಲ ಟಿ. ಸೂರ್ಯನಾರಾಯಣ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳು ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ಪರ್ಧೆಯಲ್ಲಿ ತಂಜಾವೂರಿನ ಸಾಸ್ತ್ರಾ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯ ತಂಡ ಪ್ರಥಮ ಸ್ಥಾನ ಪಡೆದು ರೂ.30,000 ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಲಖ್ನೋವಿನ ಡಾ. ರಾಮ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ತಂಡ ದ್ವಿತೀಯ ಸ್ಥಾನ ಪಡೆದು ರೂ.15,000 ಬಹುಮಾನವನ್ನು ಗಳಿಸಿತು.
ಉತ್ತಮ ವಕ್ತಾರ (Best Student Advocate) ಪ್ರಶಸ್ತಿಯನ್ನು ಸಾಗರಿಕಾ ನಾಯರ್ ರೂ.10,000 ಬಹುಮಾನ ಸಮೇತ ಪಡೆದರು. ದ್ವಿತೀಯ ಉತ್ತಮ ವಕ್ತಾರ ಪ್ರಶಸ್ತಿ ನಿಧಿ ರಾವ್ ಅವರಿಗೆ ದೊರೆಯಿತು. ಅಂತಿಮ ಸುತ್ತಿನ ಅತ್ಯುತ್ತಮ ವಕ್ತಾರ ಪ್ರಶಸ್ತಿಯನ್ನು ಅಕ್ಷಿತ್ ಪಡೆದರು. ಅತ್ಯುತ್ತಮ ಮೆಮೊರಿಯಲ್ ವಿಭಾಗದಲ್ಲಿ ಕಾವ್ಯಾ ಚೌಧರಿ ಹಾಗೂ ತಂಡಕ್ಕೆ ರೂ.10,000 ಬಹುಮಾನ ದೊರೆಯಿತು. ಇದೇ ವೇಳೆ ಬಿಎಂಎಸ್ ಕಾನೂನು ಕಾಲೇಜಿನ ಆಶಿಕಾ ಎಂ ಅವರಿಗೆ “ಸ್ಪಿರಿಟ್ ಆಫ್ ಸುರಾಣಾ” ಪ್ರಶಸ್ತಿ ಪ್ರದಾನ ಮಾಡಲಾಯಿತು.
Key words: Mysore, JSS Law College, Moot Court Competition, success







