ಸೌಮ್ಯಸ್ವಭಾವ, ಒಬ್ಬರಿಗೂ ನೋವುಂಟು ಮಾಡದ ‘ಬಲರಾಮ’ ಒಂದೇ ಕಣ್ಣಿನಲ್ಲಿ ನಡೆಸಿದ ಯಶಸ್ವಿ ಜೀವನ ಹೀಗಿತ್ತು..!

ಮೈಸೂರು,ಮೇ,8,2023(www.justkannada.in):  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸತತ 13 ಬಾರಿ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ಸಾಗಿ ಲಕ್ಷಾಂತರ ಮಂದಿಯ ಪ್ರೀತಿ, ಗೌರವಕ್ಕೆ ಪಾತ್ರವಾಗಿದ್ದ ಬಲರಾಮ(67) ನಿನ್ನೆ ಕೊನೆಯುಸಿರೆಳೆದಿದ್ದು,ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.

ಹುಣಸೂರು ತಾಲೂಕಿನ ಭೀಮನಕಟ್ಟೆ ಆನೆ ಕ್ಯಾಂಪ್‍ ನಲ್ಲಿ ಆಶ್ರಯ ಪಡೆದಿದ್ದ ಬಲರಾಮ ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು. ಇಲಾಖೆಯ ಪಶುವೈದ್ಯರು ಸತತ ಪ್ರಯತ್ನ ನಡೆಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ ಕುಸಿದು ಬಿದ್ದಿತ್ತು. ಸಂಜೆ ವೇಳೆ ಉಸಿರು ನಿಲ್ಲಿಸಿದ ಬಲರಾಮ ಬಾರದಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಬಲರಾಮನ ಸಾವಿನ  ಸುದ್ದಿ ಅಪಾರ ಸಂಖ್ಯೆ ಪ್ರಾಣಿಪ್ರಿಯರಿಗೆ ಅತೀವ ದುಃಖವನ್ನುಂಟು ಮಾಡಿದೆ.

ಅತ್ಯಂತ ಸೌಮ್ಯ ಸ್ವಭಾವಿಯಾಗಿದ್ದ ಬಲರಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಸಾರ್ವಜನಿಕರ ಗಮನವನ್ನು ಸೆಳೆದಿತ್ತು. 1999ರಿಂದ 2011ರವರೆಗೆ ಸತತ 13 ಬಾರಿ ಚಿನ್ನದ ಅಂಬಾರಿಯನ್ನು ನಿರಾಯಾಸವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಹೊತ್ತು, ಪ್ರೀತಿಗೆ ಪಾತ್ರವಾಗಿತ್ತು. 60 ವರ್ಷ ದಾಟಿದ ಹಿನ್ನೆಲೆಯಲ್ಲಿ 2012ರಿಂದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಿ ಐದಾರು ವರ್ಷ ಸಾಲಾನೆಯಾಗಿ ದಸರಾ ಮೆರವಣಿಗೆಯಲ್ಲಿ ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದಾಗಿ 2020ರಿಂದ ಬಲರಾಮ ಆನೆಯನ್ನು ದಸರಾ ಮಹೋತ್ಸವದ ದೂರ ಇಡಲಾಗಿತ್ತು. ಆದರೆ, ಇದೀಗ ಆನೆ ಕ್ಯಾಂಪ್‍ ನಲ್ಲಿ ಇಹಲೋಕ ತ್ಯಜಿಸಿ ದಸರಾ ಆನೆ ಪಯಣವನ್ನು ಮುಗಿಸಿದೆ.

ಬಲರಾಮ ನಡೆದು ಬಂದು ಹಾದಿ: ದಸರಾ ಆನೆಗಳಲ್ಲಿಯೇ ಸೌಮ್ಯ ಸ್ವಭಾವವುಳ್ಳವನಾಗಿರುವ ಬಲರಾಮ ಕಳೆದ 25 ವರ್ಷಗಳಿಗೂ ಮಿಗಿಲಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ದಾಖಲೆ ಹೊಂದಿದೆ. ದ್ರೋಣ ಆನೆಯ ಅಕಾಲಿಕ ಸಾವಿನ ಬಳಿಕ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊಂಡಿತ್ತು. 13 ಬಾರಿ ಯಶಸ್ವಿಯಾಗಿ ತನಗೆ ನೀಡಿದ್ದ ಜವಾಬ್ದಾರಿ ನಿಭಾಯಿಸಿತ್ತು. ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1978ರಲ್ಲಿ ಸೆರೆ ಹಿಡಿಯಲಾದ ಬಲರಾಮನನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ಪೋಷಿಸಲಾಗುತಿತ್ತು. ಕಳೆದ ಐದಾರು ವರ್ಷದಿಂದ ಮತ್ತಿಗೂಡು ಆನೆ ಕ್ಯಾಂಪ್ ಸಮೀಪವಿರುವ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಕ್ಯಾಂಪ್‍ನಲ್ಲಿ ಪಾಲನೆ ಮಾಡಲಾಗುತ್ತಿತ್ತು.

ಆರೋಗ್ಯ ಕೆಡಿಸಿದ ಮರದ ಕವಲಿನ ತುಂಡು: ಬಲರಾಮನ ಸಾವಿಗೆ ಅನಾರೋಗ್ಯದೊಂದಿಗೆ ಕರುಳು ಬೇನೆಯೂ ಕಾರಣ.  ಕಳೆದ ತಿಂಗಳು ಏ.19ರಂದು ಕುಡಿದ ನೀರನ್ನೆಲ್ಲಾ ವಾಂತಿ ಮಾಡಿಕೊಳ್ಳುತ್ತಿದ್ದ ಬಲರಾಮನಿಗೆ ಪರೀಕ್ಷೆ ಮಾಡಿದಾಗ ಗಂಟಲಿನಲ್ಲಿ ಯಾವುದೋ ವಸ್ತು ಸಿಕ್ಕಿ ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ವೇಳೆ ಗಂಜಿ ಮಾದರಿಯ ಆಹಾರವನ್ನು ನೀಡಿ ಉಪಚರಿಸಲಾಗಿತ್ತು. ಬಳಿಕ ಗಂಟಲಿನಲ್ಲಿ ಸಿಲುಕಿದ್ದ ಮರದ ತುಂಡು ಹೊಟ್ಟೆ ಸೇರಿತ್ತು. ಆ ನಂತರ ಹಿಂಭಾಗದಿಂದ(ಗುದದ್ವಾರ) ಕೈ ಹಾಕಿ ಹೊಟ್ಟೆಯಲ್ಲಿದ್ದ  ಮರದ ತುಂಡನ್ನು ಹೊರಗೆ ತೆಗೆಯಲಾಗಿತ್ತು. ಸೊಪ್ಪು ತಿನ್ನುವ ವೇಳೆ ವೈ ಆಕಾರದ(ಕವಲು) ಮರದ ತುಂಡು ಗಂಟಲಿನಲ್ಲಿ ಸಿಕ್ಕಿಹಾಕೊಂಡಿತ್ತು. ಅದು ಹೊಟ್ಟೆಗೆ ಜಾರುವಾಗ ಕರುಳಿಗೆ ಕೆಲ ಕಡೆ ತೂತು ಉಂಟು ಮಾಡಿತ್ತು. ಅದರಿಂದ ರಕ್ತಸಾವ್ರವಾಗಿ ನಿತ್ರಾಣಗೊಳಿಸಿತ್ತು. ಹಾಗಾಗಿ ವಯೋಸಹಜ ಸಮಸ್ಯೆಯೊಂದಿಗೆ ಅನಾರೋಗ್ಯ ಸಮಸ್ಯೆಯಿಂದ ಬಳಲಿ ಮೃತಪಟ್ಟಿದೆ ಎನ್ನಲಾಗಿದೆ.

7 ತಿಂಗಳ ಹಿಂದೆ ಗುಂಡು ಹಾರಿಸಿದ್ದ ಭೂಪ: ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಲರಾಮನನ್ನು ಭೀಮನಕಟ್ಟೆ ಕ್ಯಾಂಪ್‍ನಲ್ಲಿಡಲಾಗಿತ್ತು. 2022ರ ಡಿ.14ರಂದು ರಾತ್ರಿ ಕ್ಯಾಂಪ್ ಸಮೀಪ ಇರುವ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಕಾವಲು ಕಾಯಲು ನಿರ್ಮಿಸಿದ್ದ ಅಟ್ಟಣೆ ಮೇಲಿಂದ ಸಮೀಪದಿಂದಲೇ ಬಲರಾಮನ ಮೇಲೆ ಗುಂಡು ಹಾರಿಸಿದ್ದ. ಆದರೆ ಬಲರಾಮನ ಮೈಗೆ 45 ಕಡೆ ಚೆರ್ರಿ ತೂರಿ ಗಾಯವಾಗಿತ್ತು. ಸುಸ್ತಾಗಿ ಬಿದ್ದಿದ್ದ ಬಲರಾಮನನ್ನು ಕ್ಯಾಂಪ್‍ಗೆ ಕರೆತಂದು ಮೆಟಲ್ ಡಿಟೆಕ್ಟರ್ ಮೂಲಕ ದೇಹಹೊಕ್ಕಿದ್ದ ಗುಂಡಿನ ಚೆರ್ರಿಯನ್ನು ಹೊರತೆಗೆಯಲಾಗಿತ್ತು. ಬಳಿಕ ಸಪ್ಟಿಕ್ ಆಗದಂತೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ರಮೇಶ್ ಬಲರಾಮನನ್ನು ಗುಣಪಡಿಸಿದ್ದರು.

ತನ್ನ ಜೀವಿತಾವಧಿಯಲ್ಲಿ ಒಬ್ಬರಿಗೂ ನೋವುಂಟು ಮಾಡಲಿಲ್ಲ..

ಸೆರೆಗೂ ಮುನ್ನ ಕೊಡಗು ಜಿಲ್ಲೆಯ ಕಟ್ಟೇಪುರ ಅರಣ್ಯ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆ ವೇಳೆ ಯಾರ ಮೇಲೂ ದಾಳಿ ಮಾಡಿರಲಿಲ್ಲ. ಸೆರೆ ಸಿಕ್ಕ ಬಳಿಕ ಅತ್ಯಂತ ಮೃಧು ಸ್ವಭಾವಿಯಾಗಿ ಪರಿವರ್ತನೆಯಾದ ಬಲರಾಮ ಜೀವಿತಾವಧಿಯಲ್ಲಿ ಯಾರಿಗೂ ತೊಂದರೆ ಮಾಡಲಿಲ್ಲ. ದಸರಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಜನರು ಬಲರಾಮನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಮಕ್ಕಳಾದಿಯಾಗಿ ಯಾರಿಗೂ ನೋವುಂಟು ಮಾಡದೆ ಇಹಲೋಕ ತ್ಯಜಿಸಿದ್ದಾನೆ.

ಒಂದೇ ಕಣ್ಣಿನಲ್ಲೂ ಯಶಸ್ವಿ ಜೀವನ ನಡೆಸಿದ್ದ ಬಲರಾಮ.

ಬಲರಾಮ ಆನೆಯನ್ನು ಸೆರೆ ಹಿಡಿಯುವ ಮುನ್ನವೇ ಕಾಡಾನೆಯೊಂದಿಗೆ ಕಾಳಗಕ್ಕಿಳಿದು  ಎಡಭಾಗದ ಕಣ್ಣನ್ನು ಕಳೆದುಕೊಂಡಿತ್ತು. ಬಲಭಾಗ ಒಂದೇ ಕಣ್ಣಿನಲ್ಲೇ 13 ಬಾರಿ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಹರ್ಷೋದ್ಗಾರದ ನಡುವೆ ಯಶಸ್ವಿಯಾಗಿ ಸಾಗಿತ್ತು. ಕಳೆದ ಐದಾರು ವರ್ಷದಿಂದ ಬಲಗಣ್ಣು ಮಂಜಾಗಿತ್ತು. ಆದರೂ ಕ್ಯಾಂಪ್‍ನಿಂದ ಕಾಡಿಗೆ ಹೋಗಿ ಮತ್ತೆ ಕ್ಯಾಂಪ್‍ ಗೆ ಮರಳುತ್ತಿತ್ತು.

ಮೆಂಟರ್ ಬಲರಾಮ: ಬಲರಾಮ ತನ್ನ ಕ್ಯಾಂಪ್‍ ನಲ್ಲಿದ್ದ ಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ. ಅದರಲ್ಲೂ ಭೀಮ ಆನೆ ಸೇರಿದಂತೆ ಕೆಲ ಜ್ಯೂನಿಯರ್ ಆನೆಗಳಿಗೂ ಕೆಲವು ವಿಷಯಗಳ ಬಗ್ಗೆ ಹೇಳಿಕೊಡುವುದರಲ್ಲಿ ನಿಸ್ಸೀಮನಾಗಿದ್ದ. ಚಿಕ್ಕ ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ.

ನಾಡಹಬ್ಬ ದಸರಾ ಮಹೋತ್ಸವದಲ್ಲಿ 13 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನ ಅಂತ್ಯಕ್ರಿಯೆ ನಾಳೆ(ಏ.8)ರಂದು ಬೆಳಗ್ಗೆ 9.30ರಿಂದ 11 ಗಂಟೆಯೊಳಗೆ ನೆರವೇರಲಿದೆ. ಶವಪರೀಕ್ಷೆ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪಾಲ್ಗೊಂಡು ಗೌರವ ಸಲ್ಲಿಸಲಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Key words: mysore-dasara-ambari- elephant-Balarama-life