ಮೈಸೂರು ದಸರಾ: ಗಜಪಡೆಯ ತಾಲೀಮು ಆರಂಭ

ಮೈಸೂರು,ಆಗಸ್ಟ್,12,2025 (www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ತಾಲೀಮು ಇಂದಿನಿಂದ ಆರಂಭವಾಗಿದೆ.

ಗಜಪಡೆಯ ಆನೆಗಳು ಅರಮನೆಯಿಂದ ಹೊರಟು ಹಳೇ ಆರ್.ಎಂ.ಸಿ ವರೆಗೂ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿವೆ. ತಾಲೀಮಿನಲ್ಲಿ 9 ಆನೆಗಳು ಭಾಗಿಯಾಗಿದ್ದು, ಮೊದಲ ಹಂತದಲ್ಲಿ ಆರ್.ಎಂ.ಸಿ ವರೆಗೂ ಮಾತ್ರ ತಾಲೀಮು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಗಜಪಡೆ ಹೆಜ್ಜೆ ಹಾಕಲಿವೆ.

ಈ ಕುರಿತು ಮಾತನಾಡಿದ ಡಿಸಿಎಫ್ ಪ್ರಭುಗೌಡ, ಇಂದಿನಿಂದ ಗಜಪಡೆ ತಾಲೀಮು ಆರಂಭಿಸಿವೆ. ಎಲ್ಲ ಆನೆಗಳು ಕೂಡ ಆರೋಗ್ಯದಿಂದ ಇವೆ. ಈಗಾಗಲೇ ವೈದ್ಯರು ಎಲ್ಲ ರೀತಿಯ ತಪಾಸಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಆರ್.ಎಂ.ಸಿವರೆಗೆ ಆನೆಗಳು ತಾಲೀಮು ಮಾಡಿವೆ. ಮುಂದಿನ ದಿನಗಳಲ್ಲಿ ಒಂದೊಂದೇ ರೀತಿಯ ತಾಲೀಮು ಮಾಡಿಸಲಾಗುವುದು ಎಂದು ತಿಳಿಸಿದರು.

ಇಂದು ವಿಶ್ವ ಆನೆಗಳ ದಿನಾಚರಣೆ, ಈ ಹಿನ್ನಲೆ ಅರಮನೆಯಲ್ಲಿ 60 ಜನ ಶಾಲಾ ಮಕ್ಕಳಿಗೆ ಆನೆಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಆನೆಗಳ ಸ್ವಭಾವ, ನಡವಳಿಕೆ, ಆಹಾರ ಪದ್ಧತಿಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಆನೆಗಳ ದಿನವನ್ನು ಆಚರಣೆ ಮಾಡುತ್ತೇವೆ ಎಂದು ಡಿಸಿಎಫ್ ಪ್ರಭುಗೌಡ ಹೇಳಿದರು.

Key words: Mysore Dasara, Gajapade, workout