ಮೈಸೂರು ದಸರಾ-2023: ಜು.31 ರಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ.

ಬೆಂಗಳೂರು,ಜುಲೈ,28,2023(www.justkannada.in): ಸಿದ್ಧರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಮೊದಲ ದಸರಾವನ್ನು ಅದ್ಧೂರಿಯಾಗಿ ಮತ್ತು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು, ದಸರಾ ಆಚರಣೆ ಸಂಬಂಧ ಜುಲೈ 31 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಅಂದು ಸಂಜೆ 4 ಗಂಟೆಗೆ  ದಸರಾ ಉನ್ನತಮಟ್ಟದ ಸಭೆ ನಡೆಯಲಿದ್ದು,  ಸಂಬಂಧಿಸಿದವರಿಗೆಲ್ಲಾ ಸೂಚನಾ ಪತ್ರ ಹೊರಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಇನ್ನು ಸಭೆಯಲ್ಲಿ ದಸರಾ ಉದ್ಘಾಟನೆ ಅರಸರ ಆಡಳಿತ ಬಿಂಬಿಸುವ ಸಂಬಂಧ ತೀರ್ಮಾನವಾಗಲಿದೆ.

ಮುಖ್ಯಮಂತ್ರಿ ಅವರ ಸಲಹೆಯಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ದಸರಾ ಉತ್ಸವಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದು, ಅದನ್ನು ಅಂದಿನ ಸಭೆಯಲ್ಲಿ ಮಂಡಿಸಲಿದ್ದಾರೆ. ಕಾವೇರಿ ಜಲಾನಯನ ಭಾಗದ ಬಹತೇಕ ಜಲಾಶಯಗಳು ಭರ್ತಿಯಾಗುತ್ತಿದ್ದು, ರಾಜ್ಯಾದ್ಯಂತ ಉತ್ತಮ ಮಳೆಯಾಗಿ ಉಳಿದ ಜಲಾಶಯಗಳಿಗೂ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ದಸರಾವನ್ನು ಈ ಬಾರಿ ಅದ್ಧೂರಿ ಹಾಗೂ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಿದ್ದಾರೆ.

ಉನ್ನತ ಮಟ್ಟದ ಸಭೆಯಲ್ಲಿ ದಸರಾ ಉತ್ಸವ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲದೆ, ನಾಡದೇವತೆಯ ಉತ್ಸವ ಮತ್ತು ನವರಾತ್ರಿ ಆಚರಣೆ ಸಂದರ್ಭದಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ನಿರ್ಧಾರವಾಗಲಿದೆ. ದಸರಾ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ರಚನೆ ಅಗತ್ಯವಿರುವ ಅನುದಾನ ಒದಗಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಬೇಕಾದ  ಕ್ರಮಗಳ ಬಗ್ಗೆಯೂ ಸಭೆ ನಿರ್ಧರಿಸಲಿದೆ.

Key words: Mysore dasara-2023- High level meeting – CM Siddaramaiah -July 31.