ಬಡವರ ಅಕ್ಕಿಯಲ್ಲೂ ಮೋದಿಯಿಂದ ರಾಜಕೀಯ ನಿಜವಾಗಿಯೂ ಖಂಡನೀಯ- ಶಾಸಕ ಹರೀಶ್ ಗೌಡ.

ಮೈಸೂರು,ಜೂನ್,15,2023(www.justkannada.in): ಬಡವರ  ಅಕ್ಕಿಯಲ್ಲೂ ಪ್ರಧಾನಿ ಮೋದಿ ರಾಜಕೀಯ ಮಾಡುವುದು ನಿಜವಾಗಿಯೂ ಖಂಡನೀಯ ಎಂದು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಹರೀಶ್ ಗೌಡ,  ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರದ ಬಗ್ಗೆ ಭಯ ಶುರುವಾಗಿದೆ. ಕಾಂಗ್ರೆಸ್ ನ ಪಂಚ ಗ್ಯಾರೆಂಟಿಗಳ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಸದ್ದು ಮಾಡುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಮಾಡೆಲ್ ವರ್ಕೌಟ್ ಆಗುವ ಭಯ ಮೋದಿಗೆ ಶುರುವಾಗಿದೆ. ಈಗ ರಾಜ್ಯಕ್ಕೆ ಅನ್ನಭಾಗ್ಯದಡಿ ಕೊಡುವ ಅಕ್ಕಿಗೂ ತಡೆಯೊಡ್ಡಿದ್ದಾರೆ. ಬಿಜೆಪಿಯವರು  ದೇಶವನ್ನ ಉದ್ಧಾರ ಮಾಡೋದಿಲ್ಲ. ಎಲ್ಲವನ್ನ ಮಾರಿಕೊಳ್ತಾರೆ ಅಷ್ಟೇ. ಈಗಾಗಲೇ ಹಲವು ಸರ್ಕಾರಿ ಸ್ವಾಮ್ಯದಲ್ಲಿರುವ ಹಲವು ಇಲಾಖೆಗಳನ್ನ ಖಾಸಗೀಕರಣ ಮಾಡುತ್ತಿದ್ದಾರೆ. ಇನ್ನಷ್ಟು ವರ್ಷ ಬಿಜೆಪಿ ಇದ್ದರೆ ದೇಶವನ್ನೇ ಮಾಡಿಬಿಡುತ್ತಾರೆ. ಸುಮ್ಮನೆ ಭಾರತ್ ಮಾತಾಕೀ ಜೈ ಅನ್ನುತ್ತಾರೆ. ಇವರಿಗೆ ನಿಜವಾದ ದೇಶ ಪ್ರೇಮವೇ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪೇ ಅಂಡ್ ಪಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಶಾಸಕ ಹರೀಶ್ ಗೌಡ, ನಾನು ಆರಂಭದಿಂದಲೇ ಇದನ್ನ  ವಿರೋಧಿಸಿದ್ದೇನೆ. ಪೇ ಅಂಡ್ ಪಾರ್ಕ್ ಮಾಡಲು ಹೊರಟಿರುವ ಸ್ಥಳಗಳು ಪ್ರವಾಸಿಗರು ಬಂದು ಹೋಗುವ ಜಾಗವಲ್ಲ. ಪ್ರತಿನಿತ್ಯ ನಮ್ಮ ಸ್ಥಳೀಯರೇ ಬಂದು ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ. ಗ್ರಾಹಕರು, ವರ್ತಕರ ವಾಹನಗಳೇ ಹೆಚ್ಚಾಗಿ ನಿಲ್ಲಿಸುವುದು. ಅದಕ್ಕಾಗಿ ಪೇ ಅಂಡ್ ಪಾರ್ಕ್ ನೀತಿ ಜಾರಿಗೆ ತರಲು ಮುಂದಾಗಿದ್ದ ಪಾಲಿಕೆಯ ನಿರ್ಧಾರಕ್ಕೆ ನನ್ನ ಆಕ್ಷೇಪ ಇದ್ದೇ ಇದೆ. ಈ ಪ್ರಕ್ರಿಯೆ ಕೈ ಬಿಟ್ಟರೆ ಒಳ್ಳೆಯದು ಎಂದು ಹೇಳಿದರು.

Key words: mysore-congress-MLA-Harish gowda-annabagya rice-PM Modi