ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿಯೂ “ಕಸಾಪ” ಗೆ ಸ್ವಂತ ಕಟ್ಟಡಕ್ಕೆ ಬದ್ಧ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಫೆಬ್ರವರಿ,23,2021(www.justkannada.in) : ಕನ್ನಡದ ಉಳಿವು ಹಾಗೂ ಬೆಳವಣಿಗೆಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರದಲ್ಲೂ ಸಹ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೆ ಸ್ವಂತ ನಿವೇಶನ, ಕಟ್ಟಡ ಕೊಡಿಸುವುದಕ್ಕೆ ನಾನು ಬದ್ಧವಾಗಿದ್ದೇನೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

jk

ಹೆಚ್.ಡಿ.ಕೋಟೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಹನ್ನೊಂದು ವಿಧಾನಸಭಾ ಕ್ಷೇತ್ರದಲ್ಲೂ ಸ್ವಂತ ಕಟ್ಟಡವನ್ನು ಕೊಡಬೇಕೆಂದು ಪ್ರಸ್ತಾವನೆ ಇಟ್ಟಿದ್ದಾರೆ. ಎಚ್.ಡಿ.ಕೋಟೆಯಲ್ಲೂ ಸಹ ನಿವೇಶನವನ್ನು ಕೊಡಬೇಕೆಂದು ಕೇಳಲಾಗಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಸರ್ಕಾರದಿಂದ ಆದೇಶ ಹೊರಡಿಸಲು ಸ್ಪಂದಿಸುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಆಗಮಿಸಿರುವುದು ನನಗೆ ಹೆಮ್ಮೆಯ ಹಾಗೂ ಸಂತಸದ ವಿಷಯ. ಕನ್ನಡ ಉಳಿವಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಎನ್.ಎಸ್.ತಾರಾನಾಥ್ ಅವರ ಬಗ್ಗೆ ಹೇಳಬೇಕೆಂದರೆ, ಅವರು ನಾಡಿನ ಹಿರಿಯ ವಿದ್ವಾಂಸರಾಗಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಬೇಕು ಎಂಬ ಕೂಗಿಗೆ ಅವರೂ ಧನಿಯಾಗಿದ್ದರು. ಕೊನೆಗೆ ಕನ್ನಡ ಶಾಸ್ತ್ರೀಯ ಭಾಷೆಯಾಗಲು ಇರುವ ಅರ್ಹತೆಯನ್ನು ತಿಳಿಸುವ ಸಮಗ್ರ ವರದಿಯನ್ನು ಸಿದ್ಧಪಡಿಸಲು ಆಗ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯಲ್ಲಿ ಇವರೂ ಸಹ ಇದ್ದರು ಎಂದು ಹೇಳಿದರು.

ಕನ್ನಡದ ಎಲ್ಲ ಸಾಹಿತಿಗಳು, ಕವಿಗಳ ಹೋರಾಟದ ಫಲವಾಗಿ ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆಯಿತು. ಹೀಗೆ, ಕನ್ನಡ ಎಂಬ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗುವ ಗುಣ ತಾನಾಗಿಯೇ ಬರುತ್ತದೆ ಎಂದು ತಿಳಿಸಿದರು.

ಕೆಆರ್ ಎಸ್ ಬೃಂದಾವನ ಮಾದರಿಯ ಉದ್ಯಾನವನ; ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

ಕೆಆರ್‌ಎಸ್ ನಲ್ಲಿರುವ ಬೃಂದಾವನ ಉದ್ಯಾನದಂತೆ ಕಬಿನಿಯಲ್ಲೂ 48 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಬರುವ ಬಜೆಟ್ ನಲ್ಲಿ ಇದು ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.

Mysore-11 Assembly-Also-field-"Kasapa"-own building-Commit-Minister-S.T.Somashekhar

ಎಚ್.ಡಿ.ಕೋಟೆಯಲ್ಲಿ ಮಳೆ ಬಂದಾಗ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಸ್ಥಗಿತವಾಗುವ ಬಗ್ಗೆ  ಗಮನಕ್ಕೆ ತಂದಿದ್ದರಿಂದ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರಕಿಸಿಕೊಡಲಾಗಿದೆ. ಅಲ್ಲದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಹಾಗೂ ನಮ್ಮ ಸರ್ಕಾರ ಬದ್ಧವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊಫೆಸರ್ ಎನ್.ಎಸ್.ತಾರಾನಾಥ, ಜಿಲ್ಲಾ ಕಸಾಪ ಅಧ್ಯಕ್ಷ  ಡಾ.ವೈ.ಡಿ.ರಾಜಣ್ಣ, ಹೆಚ್.ಡಿ.ಕೋಟೆ ತಾಲ್ಲೂಕು ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ, ಶಾಸಕ  ಅನಿಲ್ ಚಿಕ್ಕಮಾದು, ಸಂಸದ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಅನೇಕ ಸಾಹಿತಿಗಳು ಉಪಸ್ಥಿತರಿದ್ದರು.

key words :  Mysore-11 Assembly-Also-field-“Kasapa”-own building-Commit-Minister-S.T.Somashekhar