ಕೋಮುವಾದಿ‌ ಶಕ್ತಿಗಳ ವಿರುದ್ಧ ನನ್ನ ಇಡೀ ರಾಜಕಾರಣ: ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ-ಹೆಚ್.ಡಿಕೆಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು.

ಮೈಸೂರು,ಸೆಪ್ಟಂಬರ್,11,2023(www.justkannada.in): ನನ್ನ ಇಡೀ ರಾಜಕಾರಣ ಕೋಮುವಾದಿ‌ ಶಕ್ತಿಗಳ ವಿರುದ್ಧವೇ ನಡೆದಿದೆ. ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆ ನಗೆ ಪಾಟಲಿನದ್ದು. ನಾನು ಬಿಜೆಪಿಗೆ ಹೋಗುತ್ತೇನೆ ಅಂದ್ರೆ ಯಾರಾದರೂ ನಂಬುತ್ತಾರಾ. ಯಾರನ್ನೋ ಯಾವುದೊ ಸಂದರ್ಭದಲ್ಲಿ ಭೇಟಿ ಮಾಡಿರುತ್ತೇವೆ. ಅದಕ್ಕೆಲ್ಲ ಪಕ್ಷ ಸೇರುತ್ತಾರೆ ಎಂದು ಹೇಳಲು ಸಾಧ್ಯನಾ? ಇತ್ತೀಚಿಗೆ ಅಮಿತ್ ಶಾ ಭೇಟಿ ಮಾಡಿದ್ದೆ. ಹಿಂದೆ ಯಾವುದೊ ಸಂದರ್ಭದಲ್ಲಿ ಅಡ್ವಾಣಿ ಅವರನ್ನ ಭೇಟಿ ಮಾಡಿದ್ದೆ. ಅದಕ್ಕೆಲ್ಲ ಈ ಅರ್ಥ ಕಟ್ಟುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಮುಂದಿನ ಕ್ಯಾಬಿನೆಟ್‌ನಲ್ಲಿ ಬರದ ಘೋಷಣೆ

ರಾಜ್ಯದಲ್ಲಿ ಬರ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ,  ಮುಂದಿನ ಕ್ಯಾಬಿನೆಟ್‌ ನಲ್ಲಿ ಬರದ ಘೋಷಣೆ ಮಾಡುತ್ತೇವೆ. ಸದ್ಯಕ್ಕೆ 62 ತಾಲ್ಲೂಕುಗಳು ಪಟ್ಟಿಯಾಗಿದೆ. ಇನ್ನೂ 136 ತಾಲ್ಲೂಕುಗಳ ಬರ ಅಧ್ಯಯನ ನಡೆಯುತ್ತಿದೆ ಅದರ ವರದಿಯೂ ಸೇರಿಸಿ ತೀರ್ಮಾನ ಮಾಡುತ್ತೇವೆ ಎಂದರು.

ನಾವು ಖುಷಿಯಿಂದ ನೀರು ಬಿಡುತ್ತಿಲ್ಲ.

ನಾವು ಖುಷಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲ. ಪ್ರಾಧಿಕಾರದ ಆದೇಶ ಇರುವ ಕಾರಣ ಅನಿವಾರ್ಯವಾಗಿ ನೀರು ಬಿಡುತ್ತಿದ್ದೇವೆ. ತಮಿಳುನಾಡು ವಿನಾಕಾರಣ ಖ್ಯಾತೆ ತೆಗೆದಿದೆ. ಸೆಪ್ಟಂಬರ್ 21 ರಂದು ಕೋರ್ಟ್ ನಲ್ಲಿ ನಮ್ಮ ಸಂಕಷ್ಟ ವಿವರಿಸುತ್ತೇವೆ. ಬಿಜೆಪಿ ಇದರಲ್ಲಿ ರಾಜಕಾರಣ ಮಾಡಲ್ಲ ಅಂತ ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿ ಬಳಿ ನಿಯೋಗ ಹೋಗಲು ಸಿದ್ದರಿದ್ದೆವು. ನಮಗೂ ಪ್ರಧಾನಿ ಭೇಟಿಗೆ ದಿನಾಂಕ ಸಿಗುತ್ತಿಲ್ಲ. ಬಿಜೆಪಿಯವರಾದರೂ ಹೋಗಿ ಕೇಳಲಿ ಎಂದರೆ ಅವರು ಕೇಳುತ್ತಿಲ್ಲ. ಇಲ್ಲಿ ಕುಳಿತು ಹೋರಾಟದ ಕಥೆ ಹೇಳುತ್ತಿದ್ದಾರೆ. ನಾವು ರೈತರ ರಕ್ಷಣೆಗೆ ಈಗಲೂ ಬದ್ದ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಈಡೇರಿಸಲಾಗದ ಬೇಡಿಕೆ ಇಟ್ಟರೆ  ಪೂರೈಸಲು ಆಗುತ್ತಾ..?

ಖಾಸಗಿ ವಾಹನ ಮಾಲೀಕ ಚಾಲಕರಿಂದ ಬೆಂಗಳೂರು ಬಂದ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ಅವರು ಈಡೇರಿಸುವಂತಹ ಬೇಡಿಕೆ ಕೇಳಿದ್ರೆ ಮಾಡಬಹುದು. ಈಡೇರಿಸಲಾಗದ ಬೇಡಿಕೆ ಇಟ್ಟರೆ ಹೇಗೆ. ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲ ಆಗಲು ಶಕ್ತಿ ಯೋಜನೆ ತಂದಿದ್ದೇವೆ. ಇದರಿಂದ ಖಾಸಗಿ ಬಸ್‌ ಗಳಿಗೆ ಅವರು ಬರುತ್ತಿಲ್ಲ ಎನ್ನುತ್ತಾರೆ. ಹೀಗಾಗಿ ಅವರಿಗೆ ನಷ್ಟ ಆಗುತ್ತಿದೆ ಎನ್ನುವುದು ಅವರ ವಾದ. ನಷ್ಟ ಆಗುವುದು ಬಿಡುವುದು ಬೇರೆ. ನಷ್ಟ ತುಂಬಿಕೊಡಿ ಅಂದ್ರೆ ಆಗುತ್ತಾ? ಅದು ಸಾಧ್ಯವಾಗದ ಮಾತು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದರು.

ಒಂದು ದೇಶ ಒಂದು ಚುನಾವಣೆ ಎಂಬುದು ಅವೈಜ್ಞಾನಿಕ, ಅಸಾಧ್ಯವಾದ ಮಾತು.

ಒಂದು ದೇಶ ಒಂದು ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ,  ಇದು ಅಸಾಧ್ಯವಾದ ಮಾತು. ಈ ಯೋಚನೆ ಅವೈಜ್ಞಾನಿಕವಾಗಿದೆ. ಒಂದೇ ಚುನಾವಣೆ ಹೇಗೆ ಸಾಧ್ಯ. ಕೆಲವೊಂದು ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಇರುತ್ತೆ. ಕೆಲವು ಕಡೆ ಅರ್ಧ ಸರ್ಕಾರ ನಡೆದಿರುತ್ತದೆ. ಇದು ಆಗದ ಕ್ರಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕದ ಚುನಾವಣೆ ಫಲಿತಾಂಶದಿಂದ ಅವರು ಧೃತಿಗೆಟ್ಟಿದ್ದಾರೆ. ಮೋದಿ ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿದೆ. ಅವರು ಬಂದು ಗಲ್ಲಿಗಲ್ಲಿಯಲ್ಲಿ ಪ್ರಚಾರ ಮಾಡಿದ್ರು ನಮಗೆ 135 ಸ್ಥಾನ ಬಂದಿದೆ‌. ಇದೇ ಒತ್ತಡದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Key words: My whole -politics -against -communal –forces-CM Siddaramaiah