ಮುಖ್ಯಮಂತ್ರಿ ಚಂದ್ರು ರೀತಿ ಡಿಕೆ ಶಿವಕುಮಾರ್ ಪರ್ಮನೆಂಟ್ ಸಿಎಂ- ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯ.

ಮೈಸೂರು,ಡಿಸೆಂಬರ್,25,2021(www.justkannada.in):  ಪಾದಯಾತ್ರೆ ಮಾಡಿದ್ರೆ ಸಿಎಂ ಆಗ್ತೀನಿ ಅಂತ ಅನ್ಕೊಂಡಿದ್ರೆ ಅದು ಡಿಕೆ ಶಿವಕುಮಾರ್ ಕನಸು. ನಮ್ಮ ಮುಖ್ಯಮಂತ್ರಿ ಚಂದ್ರು ತರ ಡಿಕೆ ಶಿವಕುಮಾರ್ ಪರ್ಮನೆಂಟ್ ಸಿಎಂ ಆಗ್ಬೇಕು ಅಷ್ಟೇ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.

ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಉತ್ಸಾಹ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ , ಇದು ಕಾಂಗ್ರೆಸ್ ನಾಯಕರ ದೊಡ್ಡ ಗಿಮಿಕ್. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ವೈ ಅವರು ಕೇಂದ್ರದ ನಾಯಕರನ್ನ ಭೇಟಿ ಮಾಡಿ ಯೋಜನೆ ಜಾರಿಗೆ ಒತ್ತಡ ಹೇರಿದ್ದಾರೆ. ಶೀಘ್ರದಲ್ಲೇ ಮೇಕೆದಾಟು ಯೋಜನೆಗೆ ಅನುಮತಿ ಸಿಗಲಿದೆ. ಇದನ್ನ ಅರಿತ ಕಾಂಗ್ರೆಸ್ ನಾಯಕರು ಪಾದಯಾತ್ರೆಯ ದೊಡ್ಡ ಗಿಮಿಕ್ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಡಿಸೆಂಬರ್ 31ಕ್ಕೆ ಕನ್ಮಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಮಾಡುವುದು ಬೇಡ ಎಂದು ಮನವಿ ಮಾಡಿದ ಸಚಿವ ಎಸ್.ಟಿ ಸೋಮಶೇಖರ್, ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿಚಾರ ಅಧಿವೇಶನದಲ್ಲೂ ಚರ್ಚೆಯಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ‌ ಕ್ರಮ ಕೈಗೊಳ್ಳುವಂತೆ ಸ್ವತಃ ಮುಖ್ಯಮಂತ್ರಿಗಳೇ ಸೂಚನೆ ನೀಡಿದ್ದಾರೆ. ಹಾಗಾಗಿ 31ಕ್ಕೆ ಕರ್ನಾಟಕ ಬಂದ್ ಮಾಡುವುದು ಬೇಡ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ ಸೋಮಶೇಖರ್, ಇದು ಕೇವಲ ಮಾಧ್ಯಮ ಸೃಷ್ಠಿ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ರಾಷ್ಟ್ರ ನಾಯಕರೆಲ್ಲಾ ಬೊಮ್ಮಾಯಿಯೇ ಅವಧಿ ಪೂರೈಸುತ್ತಾರೆ ಅಂತ ಹೇಳಿದ್ದಾರೆ. ಖುದ್ದು ಅಮಿತ್ ಶಾ ರವರೇ ಬಹಿರಂಗ ವೇದಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ ಎಂದರು.

ಸಂಪುಟ ಪುನರ್ ರಚನೆ ಬಗ್ಗೆ ಸುಳಿವು ನೀಡಿದ ಎಸ್.ಟಿ‌.ಸೋಮಶೇಖರ್. ನನ್ನ ಖಾತೆ ಮೇಲೆ ನಿಮಗ್ಯಾಕ್ರಪ್ಪ ಕಣ್ಣು.! ಸಂಪುಟ ಪುನರ್ ರಚನೆ ಸಿಎಂ ಪರಮಾಧಿಕಾರ. ಒಂದು ವೇಳೆ ಪುನರ್ ರಚನೆ ಮಾಡಿದ್ರೂ ನನ್ನ ಖಾತೆ ಮೇಲೆ ನಿಮಗ್ಯಾಕ್ ಕಣ್ಣು ಎಂದು ಪ್ರಶ್ನಿಸಿದರು.

Key words: mukyamantri Chandru -DK Shivakumar –Permanent- CM-Minister- ST Somashekhar