ಕೊಡಗು ಜಿಲ್ಲೆ ಪ್ರಮುಖ ರಸ್ತೆ ಅಭಿವೃದ್ಧಿಗೆ 22 ಕೋಟಿ ರೂ. ಮಂಜೂರು: ಸಂಸದ ಯದುವೀರ್

ಮೈಸೂರು/ಮಡಿಕೇರಿ, ಜೂನ್, 10,2026 (www.justkannada.in): ಕೊಡಗು ಜಿಲ್ಲೆಯ ರಸ್ತೆ ಮೂಲ ಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRF) ಅಡಿಯಲ್ಲಿ ಜಿಲ್ಲೆಯ ಮೂರು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹22 ಕೋಟಿ ಮಂಜೂರು ಮಾಡಿದೆ.

ಈ ಮಂಜೂರಾತಿಯನ್ನು ಸ್ವಾಗತಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗಿನ ಬಹುಕಾಲದ ರಸ್ತೆ ಅಭಿವೃದ್ಧಿ ಅಗತ್ಯಗಳಿಗೆ ಸ್ಪಂದಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಜೂರಾಗಿರುವ ಕಾಮಗಾರಿಗಳು

  1. ಕೊಡ್ಲಿಪೇಟೆ–ಹೆಬ್ಬಾಲೆ ರಸ್ತೆ (ಎಸ್‌ಎಚ್-244)

ಕಿ.ಮೀ. 16.70 ರಿಂದ 30.00ರವರೆಗೆ, ಗೋಪಾಲಪುರ–ಬಾಣಾವರ ಹೆಬ್ಬಾಲೆ ಮಾರ್ಗವಾಗಿ ಮುಳ್ಳೂರು ಹಾಗೂ ಮಳಂಬಿ (ಆಯ್ದ ಭಾಗಗಳು) ಸಂಪರ್ಕಿಸುವ ಸೋಮವಾರಪೇಟೆ ತಾಲ್ಲೂಕಿನ ರಸ್ತೆ ಅಭಿವೃದ್ಧಿಗೆ ₹6 ಕೋಟಿ.

  1. ಮಡಿಕೇರಿ–ಕುಟ್ಟ ರಸ್ತೆ (ಎಸ್‌ಎಚ್-89)

ಚೈನೇಜ್ 4.00 ರಿಂದ 8.00, 10.50 ರಿಂದ 12.00 ಹಾಗೂ 21.00 ರಿಂದ 24.43ರವರೆಗಿನ ಭಾಗಗಳಲ್ಲಿ, ಕುಶಾಲನಗರ ಮತ್ತು ಮಡಿಕೇರಿ ತಾಲ್ಲೂಕುಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ₹10 ಕೋಟಿ.

  1. ತಲಕಾವೇರಿ ರಸ್ತೆ (ಎಸ್‌ಎಚ್-90)

ಕಿ.ಮೀ. 51.00 ರಿಂದ 61.00ರವರೆಗಿನ ವಿರಾಜಪೇಟೆ ತಾಲ್ಲೂಕಿನ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿಗೆ ₹6 ಕೋಟಿ.

ಈ ಕುರಿತು ಮಾತನಾಡಿದ ಯದುವೀರ್ ಒಡೆಯರ್ ಅವರು, ಈ ರಸ್ತೆಗಳು ಕೊಡಗು ಜಿಲ್ಲೆಯ ನಿವಾಸಿಗಳು, ರೈತರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ವ್ಯಾಪಾರ ವಲಯದವರಿಗೆ ಅತ್ಯಂತ ಪ್ರಮುಖ ಸಂಪರ್ಕ ಮಾರ್ಗಗಳಾಗಿವೆ ಎಂದು ತಿಳಿಸಿದರು.

ಈ ಕಾಮಗಾರಿಗಳ ಅನುಷ್ಠಾನದಿಂದ ರಸ್ತೆ ಸುರಕ್ಷತೆ, ಪ್ರಯಾಣಿಕರ ಅನುಕೂಲತೆ ಹಾಗೂ ಸಾರಿಗೆ ದಕ್ಷತೆ ಹೆಚ್ಚುವುದರ ಜೊತೆಗೆ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಗು ಜಿಲ್ಲೆಗೆ ಸ್ಥಳೀಯರ ಹಾಗೂ ಪ್ರವಾಸಿಗರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ರಸ್ತೆ ಮೂಲಸೌಕರ್ಯ ಅತ್ಯಗತ್ಯವಾಗಿದೆ. ಸಿಆರ್‌ಎಫ್ ಅಡಿಯಲ್ಲಿ ದೊರೆತಿರುವ ಈ ಅನುದಾನವು ಬಹುಕಾಲದಿಂದ ಅಭಿವೃದ್ಧಿಗೆ ಕಾಯುತ್ತಿದ್ದ ಪ್ರಮುಖ ರಸ್ತೆ ಭಾಗಗಳ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಸಂಸದ ಯದುವೀರ್ ಅವರು ತಿಳಿಸಿದರು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಇನ್ನಷ್ಟು ಮೂಲಸೌಕರ್ಯ ಹೂಡಿಕೆಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ತರುವ ತಮ್ಮ ಬದ್ಧತೆಯನ್ನು ಯದುವೀರ್ ಒಡೆಯರ್ ಪುನರುಚ್ಚರಿಸಿದರು. ಈ ಮಂಜೂರಾತಿ ದೊರಕಲು ಸಹಕರಿಸಿದ ಕೇಂದ್ರ ಸರ್ಕಾರ, ಸಂಬಂಧಿತ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ಪಾಲುದಾರರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು.

Key words: 22 crores, development, roads,  Kodagu district, MP Yaduveer