ಕಾಂಗ್ರೆಸ್ ಧರಣಿ ವಿಚಾರ: ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್ ಬೀಸಿದ ಎಂಎಲ್ ಸಿ ಹೆಚ್.ವಿಶ್ವನಾಥ್.

ಮೈಸೂರು,ಫೆಬ್ರವರಿ,19,2022(www.justkannada.in): ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಬಗ್ಗೆ ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಸಚಿವ ಕೆ.ಎಸ್ ಈಶ್ವರಪ್ಪ ಪರ ಬ್ಯಾಟ್ ಬೀಸಿದ ಹೆಚ್.ವಿಶ್ವನಾಥ್, ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ. ಒಂದು ಹೇಳಿಕೆ ಹಿಡಿದುಕೊಂಡು ಕಾಂಗ್ರೆಸ್ ಸದನ ಸಮಯ‌ ಹಾಳು‌ಮಾಡಿದ್ದು ತಪ್ಪು. ಸಿದ್ದರಾಮಯ್ಯ ನಂತಹ ಹಿರಿಯರು ಇಂತಹ ನಡುವಳಿಕೆ ಪ್ರದರ್ಶಿಸ ಬಾರದಿತ್ತು ಎಂದು ಖಂಡಿಸಿದರು.

ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದಿರುವ ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳು ಪ್ರದರ್ಶನವಾಗಬೇಕು. ಮುಖ್ಯಮಂತ್ರಿ, ಎರಡೂ ಸದನಗಳ ನಾಯಕರು ಹಾಗೂ ಸ್ಪೀಕರ್ ಗಳು ತುರ್ತಾಗಿ ಸಭೆ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು. ಮುಂದೆ ಚುನಾವಣೆ ಇರುವುದರಿಂದ ಓಟ್ ಬ್ಯಾಂಕ್ ಗಾಗಿ ಈ ರೀತಿ ಮಾಡ್ತಿದ್ದಾರೆ. ಪ್ರತಿಭಟನೆ ಯಾವುದಕ್ಕೂ ಪರಿಹಾರ ಅಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words: MLC -H. Vishwanath–minister-KS Eshwarappa