ಜನೌಷಧಿ ಕೇಂದ್ರಗಳ ತೆರವಿಗೆ ಖಂಡನೆ: ಇಂತಹ ಕೊಳಕು ಮನಸ್ಸಿನ ಕೆಟ್ಟ ಸರ್ಕಾರ ಯಾರಿಗೂ ಬೇಡ- ಹೆಚ್.ವಿಶ್ವನಾಥ್

ಮೈಸೂರು,ಮೇ,26,2025 (www.justkannada.in): ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ  ಜನೌಷಧ ಕೇಂದ್ರಗಳ ತೆರವುಗೊಳಿಸಲು ಮುಂದಾಗಿರುವ  ರಾಜ್ಯ ಸರ್ಕಾರದ ನಡೆಗೆ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಖಂಡನೆ ವ್ಯಕ್ತಪಡಿಸಿದ್ದಾರೆ.

ನಗರದ ಜಲದರ್ಶಿನಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ ಸಿ  ಹೆಚ್. ವಿಶ್ವನಾಥ್, ಜನೌಷಧಿ ಕೇಂದ್ರಗಳಿಂದ ಬಡ ರೋಗಿಗಳಿಗೆ ಬಹಳ ಅನುಕೂಲ ಆಗುತಿತ್ತು. ಅದರಲ್ಲಿ ಮೋದಿ ಫೋಟೋ ಇದೆ ಎಂದು  ಅವುಗಳನ್ನು ತೆಗೆಸಲು ಸಿಎಂ ಮುಂದಾಗಿದ್ದಾರೆ. ಇದು ಬಹಳ ಖಂಡನೀಯ. ಮೋದಿ ಅವರು ಈ ದೇಶದ ಪ್ರಧಾನಿ. ಅವರ ಪೋಟೋ ಹಾಕಿಕೊಳ್ಳಲೇ ಬೇಕು. ಮುಂದಿನ ದಿನಗಳಲ್ಲಿ ನಿಮ್ಮ ರಾಹುಲ್ ಗಾಂಧಿ ಪ್ರಧಾನಿ ಆದರೆ ಅವರ ಫೋಟೋ ಹಾಕೋದು ಬೇಡವಾ.? ಇಂತಹ ಕೆಟ್ಟ ಕೊಳಕು ಮನಸ್ಸಿನ ಕೆಟ್ಟ ಸರ್ಕಾರ ಯಾರಿಗೂ ಬೇಡ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕೊರೋನಾ ಭೀತಿ ಮತ್ತೆ ಶುರುವಾಗಿದೆ. ಸರ್ಕಾರ  ಇದನ್ನು  ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಆಸ್ಪತ್ರೆಗಳಿಗೆ ಸಚಿವರು ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಿದ್ದು ಸರಿಯಲ್ಲ.

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಿದ್ದು ಸರಿಯಲ್ಲ. ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ನೀತಿ ಆಯೋಗವನ್ನು ಅಯೋಗ್ಯ ಆಯೋಗ ಎಂದಿರುವುದು ಸರಿಯಲ್ಲ.ಇಂತಹ ಮಾತುಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟು ಬೀಳಲಿದೆ. ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುವುದು ಸರಿಯಲ್ಲ. ನೀತಿ ಆಯೋಗದ ಸಭೆಗಿಂತ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಪ್ರಮುಖವಾಗಿತ್ತಾ? ಎಂದು ಎಚ್ ವಿಶ್ವನಾಥ್  ವಾಗ್ದಾಳಿ ನಡೆಸಿದರು.

ಬೀಗರ ಊಟಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗ್ತಾರೆ‌‌: ನೀತಿ ಆಯೋಗದ ಸಭೆಗೆ ಏಕೆ ಹೋಗಲ್ಲ.

ನೀತಿ ಆಯೋಗದ ಸಭೆಗೂ ಹೋಗಲ್ಲ, ಜಿ ಎಸ್ ಟಿ ಮಂಡಳಿ ಸಭೆಗೂ ಹೋಗಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ವರ್ತನೆ ಸರಿಯಲ್ಲ‌. ನೀತಿ ಆಯೋಗದ ಸಭೆಗೆ ಗೈರು ಹಾಜರಾಗಿದ್ದು ಮಹಾ ಅಪರಾಧ. ಬೀಗರ ಊಟಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗ್ತಾರೆ‌‌. ನೀತಿ ಆಯೋಗದ ಸಭೆಗೆ ಏಕೆ ಹೋಗಲ್ಲ ಎಂದು ಎಚ್ ವಿಶ್ವನಾಥ್ ಹರಿಹಾಯ್ದರು.

ಮೈಸೂರು ಸ್ಯಾಂಡಲ್‌ ಸೋಪ್ ಪ್ರಚಾರ ರಾಯಭಾರಿಯನ್ನಾಗಿ ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಚ್ ವಿಶ್ವನಾಥ್, ನಮ್ಮಲ್ಲಿ ಖ್ಯಾತ ನಟ ನಟಿಯರು ಇರಲಿಲ್ಲವೇ? ಕನ್ನಡಿಗರಾದ ರಚಿತಾ ರಾಮ್, ಐಶ್ವರ್ಯ ರೈ, ರಶ್ಮಿಕಾ ಮಂದಣ್ಣ ಇರಲಿಲ್ಲವೇ? ಪುನಿತ್ ರಾಜಕುಮಾರ್ ಯಾವುದೇ ಸಂಭಾವನೆ ಪಡೆಯದೇ ಕೆಎಂಎಫ್ ಗೆ ರಾಯಭಾರಿ ಆಗಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಆಕೆಗೆ 2 ಕೋಟಿ ಕೊಟ್ಟು ಉಳಿದ ಹಣ ಸಿಎಂ ಅಕ್ಕಪಕ್ಕದವರು ಇಟ್ಟುಕೊಂಡಿದ್ದಾರೆ

ಉಚಿತವಾಗಿ ರಾಯಭಾರಿಯಾಗಿದ್ದ ಪುನೀತ್ ರಾಜಕುಮಾರ್ ಪುಣ್ಯಾತ್ಮ. ರಾಜಕುಮಾರ್ ಫ್ಯಾಮಿಲಿಯಾ ಯಾರನ್ನಾದರೂ ಮೈಸೂರು ಸ್ಯಾಂಡಲ್ ಗೂ ರಾಯಭಾರಿಯನ್ನಾಗಿ ನೇಮಕ ಮಾಡಬಹುದಿತ್ತು. ನಟ ಶಿವರಾಜಕುಮಾರ್ ಆಗುತ್ತಿರಲಿಲ್ಲವಾ. ಒಂದು ಐಟಂ ಸಾಂಗ್ ಗೆ ಒಂದು‌ ಕೋಟಿ ಕೊಡ್ತಾರೆ. ಒಂದು ರೆಕಾರ್ಡಿಂಗ್ ಗೆ ಆರುವರೆ ಕೋಟಿ ಕೊಡುವ ಅಗತ್ಯವೇನಿತ್ತು? ಆಕೆಗೆ 2 ಕೋಟಿ ಕೊಟ್ಟು ಉಳಿದ ಹಣವನ್ನು ಸಿದ್ದರಾಮಯ್ಯನ ಅಕ್ಕಪಕ್ಕದವರು ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಹಣವನ್ನು ಲೂಟಿ ಮಾಡಿ ರಾಜ್ಯವನ್ನು ದಿವಾಳಿ ಮಾಡ್ತಿದೆ ಎಂದು ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ರಾಜಮನೆತನದ ಬಗ್ಗೆ ಜನರಿಗೆ ಈಗಲೂ ಅಭಿಮಾನವಿದೆ. ಯದುವಂಶ ಎಂದರೆ ಈಗಲೂ ದೊಡ್ಡ ಗೌರವವಿದೆ. ಹಾಗಾಗಿ ಯದುವೀರ್ ಒಡೆಯರ್ ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರ ರಾಯಭಾರಿಯನ್ನಾಗಿ ಮಾಡಿದರೆ ಒಳಿತು ಎಂದು ಎಚ್ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

Key words: Congress, government, Mysore, MLC, H. Vishwanath