ಗ್ಯಾರಂಟಿ ರದ್ದು ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಶಾಸಕ ಹೆಚ್.ಸಿ ಬಾಲಕೃಷ್ಣ.

ರಾಮನಗರ, ಜನವರಿ 31,2024(www.justkannada.in):  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳು ರದ್ದು ಎಂದು ನೀಡಿದ್ದ  ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಶಾಸಕ ಹೆಚ್.ಸಿ ಬಾಲಕೃಷ್ಣ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಹೆಚ್.ಸಿ ಬಾಲಕೃಷ್ಣ, ಕಾಂಗ್ರೆಸ್ ​ನ ಗ್ಯಾರಂಟಿ ಯೋಜನೆಗಳಿಗೆ ಮತ ನೀಡಬೇಕೇ ಹೊರತು ಬಿಜೆಪಿಯವರ ಅಕ್ಷತೆಗಲ್ಲ ಎಂಬುದಷ್ಟೇ ನಮ್ಮ ಉದ್ದೇಶ. ಮತ ಹಾಕಲೇಬೇಕು, ಗ್ಯಾರಂಟಿ ಯೋಜನೆ ರದ್ದು ಮಾಡಿಯೇ ಬಿಡುತ್ತೇವೆ ಎಂದು ಹೇಳಿಲ್ಲ. ನಮ್ಮದು ಬ್ಲ್ಯಾಕ್​​ ಮೇಲ್ ಸಂಸ್ಕೃತಿ ಅಲ್ಲ. ನಾವು ಕೆಲಸ ಮಾಡಿದ್ದೇವೆ, ನಮಗೆ ಮತ ನೀಡಿ ಎಂದು ಕೇಳುತ್ತಿದ್ದೇವಷ್ಟೆ ಎಂದು ತಿಳಿಸಿದರು.

ಗ್ಯಾರಂಟಿ ರದ್ದು ಕುರಿತು ನೀಡಿದ ಹೇಳಿಕೆ ನನ್ನ ವೈಯಕ್ತಿಕ ವಿಚಾರ. ಆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಗ್ಯಾರಂಟಿ ವಿಚಾರವಾಗಿ ಮುಖ್ಯಮಂತ್ರಿ ಬಳಿ ಚರ್ಚೆ ಮಾಡುತ್ತೇನೆ. ಅದರ ಮೂಲಕ 60 ಸಾವಿರ ಕೋಟಿ ರೂಪಾಯಿ ನಾವು ಜನಗಳಿಗೆ ಕೊಟ್ಟಿದ್ದೇವೆ. ಗ್ಯಾರಂಟಿ ನಿಲ್ಲಸಿಬಿಟ್ಟರೆ ಸಿಗುವ ಹಣದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು. ಗ್ಯಾರಂಟಿ ರೂಪದಲ್ಲಿ ಅಷ್ಟೆಲ್ಲಾ ಕೊಟ್ಟೂ ಕೂಡ ಅಭಿವೃದ್ಧಿ ಕಾಮಾಗಾರಿ ಮಾಡುತ್ತಾ ಇದ್ದೇವೆ ಎಂದು ಬಾಲಕೃಷ್ಣ ತಿಳಿಸಿದರು.

Key words: MLA -HC Balakrishna- clarified -about –guarantee- cancellation -statement.