ಮೈಸೂರು,ಮೇ,31,2025 (www.justkannada.in): ಕಬಿನಿಯ ಸರ್ಕಾರಿ ಜಾಗವನ್ನ ಅಡವಿಟ್ಟು ಸಾಲ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬಿನಿ ಸುಭಾಷ್ ಪವರ್ ಸ್ಟೇಷನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ ನೀಡಿದ್ದಾರೆ.
ಸುಭಾಷ್ ಪವರ್ ಸ್ಟೇಷನ್ ಕಂಪನಿ ಕಬಿನಿ ಜಲಾಶಯದ ಒಳಗಿನ ಸರ್ಕಾರಿ ಭೂಮಿ ಲಪಟಾಯಿಸುವ ಹುನ್ನಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಈ ಕುರಿತು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಯಿತು. ಸರ್ಕಾರಿ ಭೂಮಿ ಅಡವಿಟ್ಟು ನೂರಾರು ಕೋಟಿ ಸಾಲ ಪಡೆದ ಬಗ್ಗೆ ಚರ್ಚೆ ನಡೆದಿದ್ದು, ಕಬಿನಿ ಸುಭಾಷ್ ಪವರ್ ಸ್ಟೇಷನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಹಶಿಲ್ದಾರ್ ಮೋಹನಕುಮಾರಿ, ಕಬಿನಿ ಸಹಾಯಕ ಕಾರ್ಯಪಾಲಕ ಗಣೇಶ್ ಗೆ ಶಾಸಕ ಚಿಕ್ಕಮಾದು ಸೂಚನೆ ನೀಡಿದರು.
ಕಬಿನಿ ಜಲಾಶಯದ 18 ಎಕರೆ ಭೂಮಿ ತೋರಿಸಿ ನೂರಾರು ಕೋಟಿ ಸಾಲ ಪಡೆದ ಆರೋಪ ಕೇಳಿ ಬಂದಿತ್ತು. ರಾಜ್ಯದ ವಿವಿಧ ಬ್ಯಾಂಕ್ ಗಳಿಂದ ವಿವಿಧೆಡೆ 250 ಕೋಟಿ ರೂ ಅಧಿಕ ವಂಚನೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ತಾಲೂಕಿನ ಜನತೆ ಆಗ್ರಹಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ಅನಿಲ್ ಚಿಕ್ಕಮಾದು, ಕಬಿನಿ ಸುಭಾಷ್ ಪವರ್ ಸ್ಟೇಷನ್ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಿದರು.
ಕಬಿನಿ ಸುಭಾಷ್ ಪವರ್ ಕಳ್ಳಾಟ ಬಯಲು ಮಾಡಿದ ಅಧಿಕಾರಿಗಳು
ಇದಾದ ಬೆನ್ನಲ್ಲೆ ಎಚ್ಚೆತ್ತ ತಾಲೂಕು ಆಡಳಿತ ಶಾಸಕ ಅನಿಲ್ ಚಿಕ್ಕಮಾದು ಸೂಚನೆ ಮೇರೆಗೆ ದಾಖಲೆಗಳ ಪರಿಶೀಲನೆ ನಡೆಸಿದ್ದು ಇದೀಗ ಅಧಿಕಾರಿಗಳು ಕಬಿನಿ ಸುಭಾಷ್ ಪವರ್ ಕಳ್ಳಾಟ ಬಯಲು ಮಾಡಿದ್ದಾರೆ
ಆರ್ ಟಿಸಿ ಕಲಂ 11ರ ಬದಲಿಗೆ 9 ರಲ್ಲಿ ಗುತ್ತಿಗೆ ಪಡೆದವರ ಹೆಸರು ನಮೂದು ಮಾಡಲಾಗಿದ್ದು, ಅಧಿಕಾರಿಗಳ ಕಳ್ಳಾಟ, ದಿವ್ಯ ನಿರ್ಲಕ್ಷ್ಯದ ಪ್ರತೀಕ ಕಬಿನಿ ಜಲಾಶಯದ ಆಸ್ತಿ ಖಾಸಗಿ ವ್ಯಕ್ತಿ ಹೆಸರಿಗೆ ಪರಭಾರೆ ಮಾಡಿದ ಆರೋಪ ಕೇಳಿ ಬಂದಿತ್ತು. 30 ವರ್ಷ ಗುತ್ತಿಗೆ ಪಡೆದ ವ್ಯಕ್ತಿ ಹೆಸರಿಗೆ ಭೂಮಿ ಪರಭಾರೆ ಮಾಡಲಾಗಿದ್ದು, ಬ್ಯಾಂಕ್ ಗಳಿಗೆ ಕೇವಲ ಆರ್ ಟಿಸಿ ಕೊಟ್ಟು ಕಬಿನಿ ಸುಭಾಷ್ ಪವರ್ ಕಂಪನಿ ಕೋಟ್ಯಾಂತರ ರೂ ಸಾಲ ಪಡೆದಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ನಡುವೆ ಸುಭಾಷ್ ಪವರ್ ಕಂಪನಿಗೆ ಅಧಿಕಾರಿಗಳು ಪತ್ರ ಬರೆದು 15 ದಿನಗಳ ಒಳಗೆ ಸಮರ್ಪಕ ಉತ್ತರ ನೀಡಿ ಎಂದು ಸೂಚಿಸಿದ್ದರು . ಆದರೆ ಪತ್ರ ಬರೆದರೂ ಸುಭಾಷ್ ಪವರ್ ಕಂಪನಿ ಕ್ಯಾರೆ ಎನ್ನುತ್ತಿಲ್ಲ ಎನ್ನಲಾಗಿದೆ.
Key words: criminal case, against, Kabini Subhash Power Station, MLA, Anil Chikkamadu