Saturday, August 15, 2026

BDA Apartments

Home Front Page ಬೆಂಗಳೂರು- ವಿಜಯಪುರ ಎಕ್ಸ್‌ಪ್ರೆಸ್‌ ರೈಲಿಗೆ ಆಗ್ರಹ: ಕೇಂದ್ರ ಸಚಿವರಿಬ್ಬರಿಗೆ ಸಚಿವ ಎಂ‌.ಬಿ ಪಾಟೀಲ್ ಪತ್ರ

ಬೆಂಗಳೂರು- ವಿಜಯಪುರ ಎಕ್ಸ್‌ಪ್ರೆಸ್‌ ರೈಲಿಗೆ ಆಗ್ರಹ: ಕೇಂದ್ರ ಸಚಿವರಿಬ್ಬರಿಗೆ ಸಚಿವ ಎಂ‌.ಬಿ ಪಾಟೀಲ್ ಪತ್ರ

ಬೆಂಗಳೂರು,ಏಪ್ರಿಲ್,1,2026 (www.justkannada.in):  ಆಲಮಟ್ಟಿ-ವಂಡಾಳ್ ನಡುವಿನ 9.60 ಕಿ.ಮೀ. ಉದ್ದ ಜೋಡಿಹಳಿ ಕಾಮಗಾರಿ ಮುಗಿದು, ಮಾರ್ಚ್ 25ರಿಂದ ಸಂಚಾರಕ್ಕೆ ಮುಕ್ತವಾಗಿದೆ. ಆದ್ದರಿಂದ ಬೆಂಗಳೂರು-ವಿಜಯಪುರ ನಡುವೆ ಬಹುಕಾಲದ ಬೇಡಿಕೆಯಾಗಿರುವ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಿಸಬೇಕು ಎಂದು ಕೋರಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ.ಸೋಮಣ್ಣ ಇಬ್ಬರಿಗೂ ಪತ್ರ ಬರೆದಿದ್ದಾರೆ.

ಇಬ್ಬರು ಕೇಂದ್ರ ಸಚಿವರಿಗೆ ತಮ್ಮ ಪತ್ರ ರವಾನಿಸಿರುವ ಸಚಿವ ಎಂ.ಬಿ ಪಾಟೀಲ್,  ಗದಗ-ಹೊಟಗಿ ಹಳಿ ದ್ವಿಪಥೀಕರಣ ಯೋಜನೆಯ ಭಾಗವಾಗಿ ಆಲಮಟ್ಟಿ-ವಂಡಾಳ್ ನಡುವಿನ‌ ಕಾಮಗಾರಿ ಈಗ ಮುಗಿದಿದೆ. ಇದು ಮುಗಿದರೆ ಬೆಂಗಳೂರು-ವಿಜಯಪುರ ನಡುವೆ ಎಕ್ಸ್‌ ಪ್ರೆಸ್‌ ರೈಲು ಆರಂಭಿಸಬಹುದು ಎಂದು ಹಿಂದಿನ ಭೇಟಿಯಲ್ಲಿ ಹೇಳಿದ್ದಿರಿ. ಈಗ ಇದಕ್ಕೆ ಆದ್ಯತೆ ಕೊಡಬೇಕು. ಶೈಕ್ಷಣಿಕ, ವೈದ್ಯಕೀಯ, ಆಡಳಿತಾತ್ಮಕ, ವಾಣಿಜ್ಯ ವಹಿವಾಟು ಇತ್ಯಾದಿಗಳಿಗೆ ನಿತ್ಯವೂ ಬೆಂಗಳೂರಿಗೆ ಬರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಗಮನ ಸೆಳೆದಿದ್ದಾರೆ.

ಇದೇ ರೀತಿಯಲ್ಲಿ ಈಗ ಎರಡೂ ನಗರಗಳ ನಡುವೆ ರೈಲು ಪ್ರಯಾಣಕ್ಕೆ 15 ಗಂಟೆಗಳ ಕಾಲ ಹಿಡಿಯುತ್ತಿದೆ. ಇದು ಅನನುಕೂಲಕ್ಕೆ ಕಾರಣವಾಗಿದೆ. ಇದನ್ನು 10 ಗಂಟೆಗಳಿಗೆ ಇಳಿಸಬೇಕಾದ ಜರೂರಿದೆ. ಬೆಂಗಳೂರಿನಿಂದ ಹೊರಡುವ ರೈಲುಗಳಿಗೆ ಹುಬ್ಬಳ್ಳಿಯ ತನಕ ನಿಗದಿತ ನಿಲುಗಡೆ ನೀಡುವುದು ಮತ್ತು ನಂತರ ವಿಜಯಪುರಕ್ಕೆ ಸಾಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳಲ್ಲಿ ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಅವರು ಕೋರಿದ್ದಾರೆ.

Key words: Demand,  Bengaluru-Bijayapura, Express train, Minister, M.B. Patil, letter