ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ.

ಹಾಸನ, ನವೆಂಬರ್ 15,2023(www.justkannada.in):  ಜೆಡಿಎಸ್‌  ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್  ಸೇರ್ಪಡೆಯಾಗಿರುವುದಕ್ಕೆ  ಸಚಿವ ಕೆಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಈ ಕುರಿತು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಗೌರಿಶಂಕರ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಸಂತೋಷ ಎಂದು ಕುಟುಕಿದ ರಾಜಣ್ಣ, ನಮ್ಮ ಜಿಲ್ಲೆಯಲ್ಲಿ ಏನೇ ಆದ್ರೂ ನಿಭಾಯಿಸುವ ಶಕ್ತಿ ಜನ ನೀಡಿದ್ದಾರೆ. ನಮ್ಮ ಜಿಲ್ಲೆಯ ಜನರು ನನಗೆ, ಡಾ. ಜಿ ಪರಮೇಶ್ವರ್‌ಗೆ ಶಕ್ತಿ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದ್ರೂ ನಿಭಾಯಿಸ್ತೇವೆ, ನಾವು ಅಶಕ್ತರೇನಲ್ಲ ಎಂದರು.

ನಮ್ಮ ಗಮನಕ್ಕೆ ತರದೆ ಗೌರಿಶಂಕರ್ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಅಸಮಾಧಾನವಿದೆ. ಜಿಲ್ಲೆಯ ಯಾವ ನಾಯಕರನ್ನೂ ಸಂಪರ್ಕಿಸದೆ ಸೇರಿಸಿಕೊಂಡಿದ್ದಕ್ಕೆ ಅಸಮಾಧಾನವಿದೆ. ಅವರ ಸೇರ್ಪಡೆ ಬಗ್ಗೆ ನನಗೆ, ಜಿ ಪರಮೇಶ್ವರ್‌ ಗೆ, ಜಿಲ್ಲೆಯ ಉಳಿದ ಕಾಂಗ್ರೆಸ್‌ ಶಾಸಕರಿಗಾಗಲಿ ಮಾಹಿತಿ ನೀಡಿಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅನ್ನೋದು ಸಮುದ್ರವಿದ್ದಂತೆ. ಸಮುದ್ರದಲ್ಲಿ ಗಂಗಾ ಮಾತೆಯಷ್ಟು ಪವಿತ್ರ ಜಲವೂ ಬರುತ್ತೆ. ಪಕ್ಕದ ಚರಂಡಿ ನೀರು ಕೂಡ ಬರುತ್ತೆ, ಸಮುದ್ರದಲ್ಲಿ ಅಮೃತವೂ ಇದೆ, ವಿಷವೂ ಇದೆ. ಅಮೃತ ಸಿಗೋರಿಗೆ ಅಮೃತ ಸಿಗುತ್ತೆ, ವಿಷ ಸಿಗೋರಿಗೆ ವಿಷ ಸಿಗುತ್ತೆ ಎಂದು ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೆಎನ್ ರಾಜಣ್ಣ  ಹೇಳಿದರು.

Key words:  Minister- KN Rajanna – unhappy- former MLA- Gowrishankar- joining-Congress