ಧನಂಜಯ ನಿಶಾನೆ ಆನೆ, ಗೋಪಿ ನೌಪತ್ ಆನೆ: ಸಚಿವ ಈಶ್ವರ್  ಖಂಡ್ರೆ ಘೋಷಣೆ

ಮೈಸೂರು, ಸೆಪ್ಟಂಬರ್,30,2025 (www.justkannadda.in):  ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಧನಂಜಯ ನಿಶಾನೆ ಆನೆಯ ಕಾರ್ಯ ನಿರ್ವಹಿಸಲಿದ್ದು, ಗೋಪಿ ಆನೆ ನೌಪತ್ ಆನೆಯ ಸ್ಥಾನ ಪಡೆದಿದ್ದಾನೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಪ್ರಕಟಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು  ವಿವರ ನೀಡಿದ ಸಚಿವ ಈಶ್ವರ್ ಖಂಡ್ರೆ ಅವರು, ಮಹೇಂದ್ರ, ಶ್ರೀಕಂಠ ಮತ್ತು ಲಕ್ಷ್ಮೀ ಸಾಲಾನೆ 1ನೇ ತಂಡದಲ್ಲಿದ್ದರೆ, ಕಂಜನ್, ಭೀಮ, ಏಕಲವ್ಯ ಸಾಲಾನೆ 2ರಲ್ಲಿ ಗಜಗಾಂಭೀರ್ಯದಿಂದ ಸಾಗಲಿವೆ ಎಂದರು.

ಸಾಲಾನೆ 3ರ ತಂಡದಲ್ಲಿ ಪ್ರಶಾಂತ್, ಸುಗ್ರೀವ, ಹೇಮಾವತಿ ಇದ್ದರೆ, ಅಂಬಾರಿ ಹೊತ್ತು ಸಾಗುವ ಅಭಿಮನ್ಯುವಿನ ಅಕ್ಕ ಪಕ್ಕದಲ್ಲಿ ಕಾವೇರಿ ಮತ್ತು ರೂಪಾ ಹೆಣ್ಣಾನೆಗಳು ಹೆಜ್ಜೆ ಹಾಕಲಿವೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಮಳಿಗೆ ಉದ್ಘಾಟನೆ

ಬಳಿಕ ಸೋಮವಾರ ರಾತ್ರಿ ವಸ್ತುಪ್ರದರ್ಶನ ಮೈದಾನಕ್ಕೆ ಭೇಟಿ ನೀಡಿದ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ವಸ್ತುಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದರು.

ಈ ಮಳಿಗೆಯಲ್ಲಿ ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಗಳ ರಕ್ಷಣೆ ಮತ್ತು ಪುನರ್ವಸತಿ, ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂವರ್ಧನೆ ಕುರಿತ ಮಾಹಿತಿಯ ಜೊತೆಗೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಸೆರೆ ಕಾರ್ಯಾಚರಣೆ, ಕಾಡ್ಗಿಚ್ಚು ನಂದಿಸುವ ಹಾಗೂ ಕಾಡುಗಳ್ಳರೊಂದಿಗೆ ಹೋರಾಡಿ ಮೃತಪಟ್ಟ ಅರಣ್ಯ ಹುತಾತ್ಮರ ಮಾಹಿತಿಯೂ ಇದ್ದು, ಸಚಿವ ಈಶ್ವರ್ ಖಂಡ್ರೆ ಈ ವಸ್ತುಪ್ರದರ್ಶನ ವೀಕ್ಷಿಸಿ, ಹುತಾತ್ಮರಿಗೆ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಅರಣ್ಯ ಸಚಿವ ಈಶ್ವರ  ಖಂಡ್ರೆ ಅವರನ್ನು ಗೌರವಿಸಿದರು.

ಪತ್ರಕರ್ತರ ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ

ಮೈಸೂರಿನ ಕಲಾ ಮಂದಿರದಲ್ಲಿ ವಿವಿಧ ಪತ್ರಿಕೆಗಳ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನಕ್ಕೂ ಈಶ್ವರ ಖಂಡ್ರೆ ಭೇಟಿ ನೀಡಿ ವೀಕ್ಷಿಸಿದರು.

Key words: Mysore dasara, Nishane, Naupat, elephant, Minister, Ishwar Khandre