ಪ್ರಧಾನಿ‌ ಮೋದಿ ಹೇಳಿಕೆಗೆ ಸಚಿವ ದಿನೇಶ್ ಗುಂಡೂರಾವ್ ಗರಂ.

ಮೈಸೂರು,ಫೆಬ್ರವರಿ,6,2024(www.justkannada.in):  ಕಾಂಗ್ರೆಸ್ ದೇಶ ಒಡೆಯುವ ಮನಸ್ಥಿತಿಯಲ್ಲೇ ಇದೆ ಎಂಬ ಪ್ರಧಾನಿ‌ ಮೋದಿ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ಬಿಜೆಪಿ ಯಾವತ್ತು ದೇಶ ಕಟ್ಟುವ ಕೆಲಸ ಮಾಡಿಲ್ಲ. ಬ್ರಿಟಿಷರ ವಿರುದ್ದ ಕಾಂಗ್ರೆಸ್ ಹೋರಾಡಿದಾಗ ಹಿಂದೂಮಹಾಸಭಾ ಬ್ರಿಟಿಷ್ ಪರ ಇದ್ದರು. ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದು ನಾವೇ ಅದನ್ನು ಹೊರತುಪಡಿಸಿ ಎಲ್ಲವನ್ನೂ ಒಗ್ಗೂಡಿಸಿದ್ದೇವೆ. ಆರ್ ಎಸ್ ಎಸ್ ಹಿಂದೂ ಮಹಾಸಭಾ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರು ದೇಶ ಭಕ್ತರಲ್ಲ ಅಂತಾ ಹೇಳಲ್ಲ ಆದರೆ ಅವರು ಮಾತ್ರ ದೇಶಭಕ್ತರು ಬೇರೆಯವರು ಅಲ್ಲ ಅನ್ನೋದನ್ನ ನಾವು ಒಪ್ಪಲ್ಲ ಎಂದು ಟಾಂಗ್ ಕೊಟ್ಟರು.

ಫೆಬ್ರವರಿ 7ರಂದು ದೆಹಲಿ ಪ್ರತಿಭಟನೆ ಸಮರ್ಥನೆ ಮಾಡಿದ ಸಚಿವ ದಿನೇಶ್ ಗುಂಡೂರಾವ್, ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ. ಬಿಜೆಪಿ ಸರ್ಕಾರ ಇಲ್ಲದ ಎಲ್ಲಾ ರಾಜ್ಯದ ಪರಿಸ್ಥಿತಿ ಇದೆ ಆಗಿದೆ. ಈ ಕಾರಣಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೇಳುವ ಧೈರ್ಯವಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ಕೂಗಾಡುತ್ತಾರೆ. ಇದೇ ಕೆಲಸವನ್ನು ಮೋದಿ ಮುಂದೆ ಮಾಡಿದ್ದರೆ ಪ್ರತಿಭಟನೆ ಅವಶ್ಯಕತೆಯೇ ಇರಲಿಲ್ಲ ಎಂದು ತಿಳಿಸಿದರು.

ದಕ್ಷಿಣ ಭಾರತ ಉತ್ತರ ಭಾರತ ಪ್ರತ್ಯೇಕತೆ ಬಗ್ಗೆ ಸಂಸದ ಡಿ ಕೆ ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಆ ರೀತಿ ಹೇಳಿಕೆ ಸರಿಯಲ್ಲ ಆ ರೀತಿ ಹೇಳಬಾರದು. ಇದನ್ನು ನಾನು ಸಿಎಂ ಸೇರಿ ಎಲ್ಲರೂ ಹೇಳಿದ್ದೇವೆ. ಆದರೆ ಅವರು ಹೇಳಿರುವ ಉದ್ದೇಶ ಬೇರೆ ಇದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಸೋತರೆ  ಗ್ಯಾರಂಟಿ ಯೋಜನೆಗಳು ರದ್ದು ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಬಾಲಕೃಷ್ಣ ಹೇಳಿದರೂ ರಾಜಣ್ಣ ಹೇಳಿದರೂ ಯಾರೋ ಏನೋ‌ ಹೇಳಿದರೂ ಅಂತಾ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಸಿದ್ದರಾಮಯ್ಯ ಹೇಳಿದ ಎಲ್ಲಾ ಕೆಲಸ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Key words: Minister-Dinesh Gundu Rao – angry – Prime Minister –Modi- statement.