ಅ.23 ರಂದು ಮೈಮುಲ್ ಅಧ್ಯಕ್ಷರ ಚುನಾವಣೆ- ಸಚಿವ ಕೆ.ವೆಂಕಟೇಶ್

ಮೈಸೂರು,ಅಕ್ಟೋಬರ್,13,2025 (www.justkannada.in): ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಅಧ್ಯಕ್ಷರ ಸ್ಥಾನಕ್ಕೆ ಅಕ್ಟೋಬರ್ 23ಕ್ಕೆ ಚುನಾವಣೆ ನಡೆಯಲಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ದಸರಾ ವಸ್ತು ಪ್ರದರ್ಶನದಲ್ಲಿನ ನಂದಿನಿ ಕುಟೀರ ಮಳಿಗೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವೆಂಕಟೇಶ್, “ಮೈಮುಲ್ ಅಧ್ಯಕ್ಷರಾಗಿದ್ದ ಚೆಲುವರಾಜು ಅವರ ರಾಜೀನಾಮೆಯಿಂದ ಅಧಕ್ಷ ಸ್ಥಾನದ ಹುದ್ದೆ ಖಾಲಿ ಇದ್ದು, ಅದಕ್ಕೆ ಅ.23ರಂದು ಚುನಾವಣೆ ನಡೆಸಲಾಗುವುದು,” ಎಂದು ಹೇಳಿದರು.

ಹಾಲಿನ ದರ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಸಚಿವ ವೆಂಕಟೇಶ್, “ಸದ್ಯಕ್ಕೆ ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ಅಷ್ಟಕ್ಕೂ ಎರಡು ತಿಂಗಳ ಹಿಂದ ನಾಲ್ಕು ರೂ. ಹೆಚ್ಚಳ ಮಾಡಿದ್ದೇವೆ.

ಬಿಜೆಪಿ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿದ್ದ 700 ಕೋಟಿ ರೂ. ಗಳ ಹಾಲಿನ ಪ್ರೋತ್ಸಾಹಧನವನ್ನು ನಮ್ಮ ಅವಧಿಯಲ್ಲಿ ನೀಡಿದ್ದೇವೆ. ಮಾತ್ರವಲ್ಲದೆ, ಜುಲೈವರೆಗೂ ಈಗಾಗಲೇ ನೀಡಿದ್ದು, ಆಯಾ ತಿಂಗಳ ಪ್ರೋತ್ಸಾಹಧನ ಆಯಾ ತಿಂಗಳೇ ವಿತರಿಸುವ ಬಗ್ಗೆಯೂ ಕ್ರಮವಹಿಸಲಾಗಿದೆ ಮ್ಯಾಟ್, ಮೇವು ಕಟಾವು ಯಂತ್ರವನ್ನು ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುತ್ತದೆ. ಎಲ್ಲ ರೈತರಿಗೂ ಏಕಕಾಲಕ್ಕೆ ಕೊಡಲು ಸಾಧ್ಯವಿಲ್ಲ. ಪ್ರತಿ ವರ್ಷ ಯಾರಿಗೆ ಸಿಕ್ಕಿಲ್ಲ ಅಂತವರಿಗೆ ಕೊಡುವ ಕೆಲಸವನ್ನು ಇಲಾಖೆ ಮಾಡಲಿದೆ,” ಎಂದು ತಿಳಿಸಿದರು.

ಮೈಸೂರು ನಗರದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳ  ಕುರಿತು ಪ್ರತಿಕ್ರಿಯಿಸಿದ ಸಚಿವ ವೆಂಕಟೇಶ್, ‘ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತರನ್ನು ಕೇಳಬೇಕು ಎಂದರು.  ಈ ಬಗ್ಗೆ ಸರಕಾರದ ಮೇಲೆ ಸಂಸದರ ಆರೋಪ ಕುರಿತು ಮಾತನಾಡಿ, “ಬಿಜೆಪಿ ನಾವು ಮಾಡುವ ಒಳ್ಳೆಯ ಅಂಶಗಳನ್ನು ನೋಡುವುದಿಲ್ಲ. ಎಲ್ಲದರಲ್ಲೂ ಬೇಡವಾದುದನ್ನೇ ನೋಡುತ್ತಾ ಆಪಾದನೆ ಮಾಡುವುದೇ ಅವರ ಕೆಲಸವಾಗಿದೆ,” ಎಂದರು.

ಈ ವೇಳೆ ಮೈಮುಲ್ ನಿರ್ದೇಶಕ ಎ.ಟಿ. ಸೋಮಶೇಖರ್, ಕೆ.ಜಿ.ಮಹೇಶ್, ಆ‌ರ್.ಚೆಲುವರಾಜು,  ಕೆ.ಉಮಾಶಂಕರ್,  ಓಂ.ಪ್ರಕಾಶ್, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ಸದಾನಂದ, ಎ.ಬಿ.ಮಲ್ಲಿಕಾ ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್  ಉಪಸ್ಥಿತರಿದ್ದರು.

Key words: Maimul ,President, election ,October, 23th, Minister, K. Venkatesh